Megastar Chiranjeevi: ಮೆಗಾಸ್ಟಾರ್ ಮನೆಯಲ್ಲಿ ಹಾರ್ದಿಕ್ ಪಾಂಡ್ಯಾ..ಟೀಂ ಇಂಡಿಯಾ ಆಟಗಾರರಿಗೆ ಪಾರ್ಟಿ ಕೊಟ್ರಾ ಚಿರಂಜೀವಿ..?
ಮೆಗಾ ಕುಟುಂಬಕ್ಕೆ ಆಪ್ತರಾದ ವ್ಯಕ್ತಿಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಇರುವ ಫೋಟೋ ಹಂಚಿಕೊಂಡು ಹಾರ್ದಿಕ್ ಪಾಂಡ್ಯ, ಮೆಗಾಸ್ಟಾರ್ ಮನೆಗೆ ಬಂದಿದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಭಾರತಕ್ಕೆ ಪದಕ ಗೆದ್ದು ಕೊಟ್ಟಾಗ ಟಾಲಿವುಡ್ ನಟ ಚಿರಂಜೀವಿ ಹಾಗೂ ರಾಮ್ ಚರಣ್, ಆಕೆಯನ್ನು ತಮ್ಮ ಮನೆಗೆ ಆಹ್ವಾನಿಸಿ ಪಾರ್ಟಿ ನೀಡಿ, ಸನ್ಮಾನಿಸಿದ್ದರು. ಇದೀಗ ಈ ಸ್ಟಾರ್ ನಟರು ಟೀಂ ಇಂಡಿಯಾ ಆಟಗಾರರನ್ನು ಕೂಡಾ ತಮ್ಮ ಮನೆಗೆ ಆಹ್ವಾನಿಸಿದ್ದಾರೆ.
ಸೆಪ್ಟೆಂಬರ್ 25 ರಂದು ಹೈದರಾಬಾದ್ನ ಉಪ್ಪಳ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯ ನಡೆದಿತ್ತು. ಈ ಮ್ಯಾಚ್ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದೇ ಖುಷಿಗೆ ಚಿರಂಜೀವಿ ಹಾಗೂ ರಾಮ್ ಚರಣ್ ಇಬ್ಬರೂ ಆಟಗಾರರನ್ನು ತಮ್ಮ ಮನೆಗೆ ಕರೆದು ಆತಿಥ್ಯ ನೀಡಿದ್ದಾರಂತೆ. ಆಟಗಾರರಿಗಾಗಿ ಮೆಗಾಸ್ಟಾರ್ ಮನೆಯಲ್ಲಿ ಅದ್ಧೂರಿಯಾಗಿ ಪಾರ್ಟಿ ಆಯೋಜಿಸಲಾಗಿತ್ತಂತೆ. ಹಾರ್ದಿಕ್ ಪಾಂಡ್ಯಾ ಸೇರಿದಂತೆ ಇನ್ನಿತರ ಆಟಗಾರರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಆಟಗಾರರಿಗೆ ವಿವಿಧ ಭಕ್ಷ್ಯ ಭೋಜನಗಳನ್ನು ಮಾಡಿ, ಸನ್ಮಾನ ಕೂಡಾ ಮಾಡಲಾಗಿದೆಯಂತೆ.
ಮೆಗಾಸ್ಟಾರ್ ಆಗಲೀ, ರಾಮ್ ಚರಣ್ ಆಗಲೀ ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೆ ಮೆಗಾ ಕುಟುಂಬಕ್ಕೆ ಆಪ್ತರಾದ ವ್ಯಕ್ತಿಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಇರುವ ಫೋಟೋ ಹಂಚಿಕೊಂಡು ಹಾರ್ದಿಕ್ ಪಾಂಡ್ಯ, ಮೆಗಾಸ್ಟಾರ್ ಮನೆಗೆ ಬಂದಿದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ.
ಭಾರೀ ನಷ್ಟ ಅನುಭವಿಸಿದ್ದ ಚಿರಂಜೀವಿ ಆಚಾರ್ಯ ಸಿನಿಮಾ
ಏಪ್ರಿಲ್ 29 ರಂದು ಆಚಾರ್ಯ ಸಿನಿಮಾ ತೆರೆ ಕಂಡಿತ್ತು. ಆರ್ಆರ್ಆರ್ ಸಿನಿಮಾ ನಂತರ ರಾಮ್ ಚರಣ್ ಅಭಿನಯದ ಮತ್ತೊಂದು ಸಿನಿಮಾ ತೆರೆ ಕಾಣುತ್ತಿದೆ ಎಂದು ಅವರ ಅಭಿಮಾನಿಗಳು ಕೂಡಾ ಕುತೂಹಲದಿಂದ ಇದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು 'ಆಚಾರ್ಯ' ಹುಸಿಗೊಳಿಸಿತ್ತು. 140 ಕೋಟಿ ರೂಪಾಯಿ ಖರ್ಚು ಮಾಡಿ ತಯಾರಾದ ಸಿನಿಮಾ ಬಂಡವಾಳವನ್ನೂ ಗಳಿಸಿಕೊಡಲಿಲ್ಲ. ಸಿನಿಮಾದಿಂದ ಇದುವರೆಗೂ ಕೇವಲ 75 ಕೋಟಿ ರೂಪಾಯಿ ಮಾತ್ರ ದೊರೆತಿದ್ದು ದೊಡ್ಡ ನಷ್ಟ ಅನುಭವಿಸಿತ್ತು. ಇದಕ್ಕಾಗಿ ವಿತರಕರು ಚಿರಂಜೀವಿಗೆ ಪತ್ರ ಬರೆದು ಮನವಿ ಮಾಡಿದ್ದರು. ಚಿರಂಜೀವಿ, ವಿತರಕರಿಗೆ ಸ್ವಲ್ಪ ಹಣವನ್ನು ವಾಪಸ್ ನೀಡಿದ್ದರು ಎಂಬ ಮಾತು ಕೇಳಿಬಂದಿತ್ತು.
'ಆಚಾರ್ಯ', ಚಿರಂಜೀವಿ ಅಭಿನಯದ 152ನೇ ಸಿನಿಮಾ. 2019 ಡಿಸೆಂಬರ್ನಲ್ಲಿ ಆರಂಭವಾದ ಈ ಸಿನಿಮಾ ಬಗ್ಗೆ ಎಲ್ಲರಿಗೂ ಸಾಕಷ್ಟು ಭರವಸೆಯಿತ್ತು. ಕೊನಿಡೇಲ ಪ್ರೊಡಕ್ಷನ್, ಮ್ಯಾಟ್ನಿ ಎಂಟರ್ನೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ರಾಮ್ ಚರಣ್ ತೇಜ ಹಾಗೂ ನಿರಂಜನ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕೊರಟಾಲ ಶಿವ, ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಶರ್ಮ ಸಂಗೀತವಿದೆ. ಪೂಜಾ ಹೆಗ್ಡೆ, ಸೋನು ಸೂದ್, ನಾಸರ್, ವೆನ್ನಿಲ ಕಿಶೋರ್, ಸೌರವ್ ಲೋಕೇಶ್, ರವಿ ಪ್ರಕಾಶ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಟಿ ರೆಜಿನಾ ಕ್ಯಾಸಂದ್ರ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.