Chiranjeevi: ಟಾಲಿವುಡ್ ನಟ ಚಿರಂಜೀವಿಗೆ ಕ್ಯಾನ್ಸರ್! ಭಯ ಏಕೆ, ನಾನು ಅದರಿಂದ ಹೊರ ಬಂದಿದ್ದೇನೆ; ಸ್ಪಷ್ಟನೆ ನೀಡಿದ ತೆಲುಗು ಮೆಗಾಸ್ಟಾರ್
ಟಾಲಿವುಡ್ ಸ್ಟಾರ್ ನಟ ಚಿರಂಜೀವಿಗೆ ಕ್ಯಾನ್ಸರ್! ಹೀಗೊಂದು ಸುದ್ದಿ ಇದೀಗ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಸುದ್ದಿಗೆ ಸ್ವತಃ ಮೆಗಾಸ್ಟಾರ್ ಸ್ಪಷ್ಟನೆ ನೀಡಿ, ಭಯಪಡಬೇಡಿ ನಾನು ಅದರಿಂದ ಹೊರಬಂದಿದ್ದೇನೆ ಎಂದಿದ್ದಾರೆ.
Chiranjeevi: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ 60 ಪ್ಲಸ್ ವಯಸ್ಸಾದರೂ ಇಂದಿಗೂ ಫಿಟ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಇದೇ ಸ್ಟಾರ್ ನಟನ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಗುಮಾನಿ ಹರಡಿತ್ತು. ಚಿರಂಜೀವಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂಬುದು!
ಈ ಸುದ್ದಿ ಜಾಲತಾಣ ಪ್ರವೇಶಿಸುತ್ತಿದ್ದಂತೆ ಅವರ ಅಪಾರ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಶೀಘ್ರ ಗುಣಮುಖರಾಗಿ ಬನ್ನಿ ಎಂದು ಟ್ವಿಟ್ ಮಾಡುತ್ತಿದ್ದಾರೆ. ಕೆಲವರು ದೇವರ ಮೊರೆ ಹೋಗಿದ್ದಾರೆ. ಕ್ಯಾನ್ಸರ್ ಸುದ್ದಿಯ ವಿಚಾರ ಚಿರಂಜೀವಿ ಗಮನಕ್ಕೂ ಬಂದಿದೆ. ತಕ್ಷಣ ಟ್ವಿಟ್ ಮೂಲಕ ಹರಿದಾಡುತ್ತಿದ್ದ ವದಂತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಚಿರಂಜೀವಿ ಟ್ವಿಟ್ ಹೀಗಿದೆ..
"ಸ್ವಲ್ಪ ಸಮಯದ ಹಿಂದೆ ನಾನು ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸಿದೆ. ಆಗ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೆ. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ಹೇಳಿದ್ದೆ. ಕ್ಯಾನ್ಸರ್ ಬಗ್ಗೆ ನಾನೂ ಅಲರ್ಟ್ ಆಗಿದ್ದರಿಂದ ಕೊಲೊನ್ ಸ್ಕೋಪ್ ಪರೀಕ್ಷೆ ಮಾಡಿಸಿ, ಕ್ಯಾನ್ಸರ್ ರಹಿತ ಪೊಲಿಪ್ಸ್ ಪತ್ತೆ ಹಚ್ಚಿ ತೆಗೆಯಲಾಗಿತ್ತು ಎಂದು ಹೇಳಿದ್ದೆ. ಮೊದಲು ಪರೀಕ್ಷೆ ಮಾಡದೇ ಇದ್ದಿದ್ದರೆ ಕ್ಯಾನ್ಸರ್ ಆಗಿಬಿಡುತ್ತಿತ್ತು ಎಂದು ಮಾತ್ರ ಹೇಳಿದ್ದೆ. ಅದಕ್ಕೇ ಎಲ್ಲರೂ ಮುಂಜಾಗ್ರತೆ ವಹಿಸಿ ವೈದ್ಯಕೀಯ ಪರೀಕ್ಷೆ, ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು ಎಂದಿದ್ದೆ.
ಇದನ್ನೂ ಓದಿ: ರಾಮಾಯಣ ಧಾರಾವಾಹಿ ನಿರ್ದೇಶಕರ ಮೊಮ್ಮಗಳಿಗೆ ಉರ್ಫಿ ಪಾರ್ಟ್ 2 ಪಟ್ಟ!; ಟ್ರೋಲ್ ಆಯ್ತು ಸಾಕ್ಷಿ ಚೋಪ್ರಾ ಅರೆಬೆತ್ತಲೆ ಅವತಾರ
ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನನಗೆ ಕ್ಯಾನ್ಸರ್ ಬಂದಿದೆ ಮತ್ತು ಚಿಕಿತ್ಸೆಯಿಂದ ನಾನು ಬದುಕುಳಿದೆ ಎಂದು ಸುದ್ದಿ ಮಾಡುತ್ತಿದ್ದಾರೆ. ಇದರಿಂದ ಅನಗತ್ಯ ಗೊಂದಲ ಉಂಟಾಗಿದೆ. ಅನೇಕ ಹಿತೈಷಿಗಳು ನನ್ನ ಆರೋಗ್ಯದ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅವರೆಲ್ಲರಿಗೂ ಈ ಸ್ಪಷ್ಟನೆ. ಈ ರೀತಿ ಬರೆಯುವವರಿಗೂ ಒಂದು ಮನವಿ. ವಿಷಯ ಅರ್ಥವಾಗದೆ ಅಸಂಬದ್ಧವಾಗಿ ಬರೆಯಬೇಡಿ. ಈ ಕಾರಣದಿಂದಾಗಿ, ಅನೇಕ ಜನರು ಭಯಭೀತರಾಗಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ ಚಿರಂಜೀವಿ.
ಭೋಲಾ ಶಂಕರ್ ಚಿತ್ರದಲ್ಲಿ ಬಿಜಿ
ಚಿರಂಜೀವಿ ಸದ್ಯ ಭೋಲಾ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೆಹರ್ ರಮೇಶ್ ಈ ಚಿತ್ರದ ನಿರ್ದೇಶಕರು. ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ಜತೆಯಾಗಿದ್ದಾರೆ. ಚಿರುಗೆ ತಂಗಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಎಕೆ ಎಂಟರ್ಟೈನ್ಮೆಂಟ್ಸ್ ಮತ್ತು ಕ್ರಿಯೇಟಿವ್ಸ್ ಕಮರ್ಷಿಯಲ್ ಬ್ಯಾನರ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಭೋಲಾ ಶಂಕರ್ ಚಿತ್ರದ ಮೊದಲ ಹಾಡು ಇಂದು (ಜೂನ್ 4) ಬಿಡುಗಡೆಯಾಗಲಿದೆ. ಭೋಲಾ ಶಂಕರ್ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ತಮಿಳಿನ ವೇದಾಲಂ ಚಿತ್ರದ ರಿಮೇಕ್ ಇದಾಗಿದೆ.