ಕನ್ನಡ ಸುದ್ದಿ  /  Karnataka  /  B S Yediyurappa: Bsy Selected To Bjp Parliamentary Board; What Was His First Reaction? Who Said What?

B S Yediyurappa: ಸಂಸದೀಯ ಮಂಡಳಿಗೆ ಬಿಎಸ್‌ವೈ; ಮೊದಲ ಪ್ರತಿಕ್ರಿಯೆ ಏನು? ಯಾರೇನು ಹೇಳಿದ್ರು?

ಬಿಜೆಪಿ ಸಂಸದೀಯ ಮಂಡಳಿ (BJP parliamentary board) ಯ ಪುನಾರಚನೆ ಆಗಿದ್ದು, ಕರ್ನಾಟಕದಿಂದ ಬಿಎಸ್‌ ಯಡಿಯೂರಪ್ಪ (B S Yediyurappa) ಸೇರ್ಪಡೆ ಆಗಿದೆ. ಇದಕ್ಕೆ ಬಿಎಸ್‌ವೈ ಮೊದಲ ಪ್ರತಿಕ್ರಿಯೆ ಏನು ಮತ್ತು ಯಾವ್ಯಾವ ನಾಯಕರು ಏನು ಹೇಳಿದರು? ಇಲ್ಲಿದೆ ವಿವರ.

ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ (@BSBommai)

ಬೆಂಗಳೂರು: ರಾಜ್ಯ ಚುನಾವಣಾ ವರ್ಷದಲ್ಲಿ ಇರುವ ಕಾರಣ ರಾಜಕೀಯವಾಗಿ ಮಹತ್ವದ ವಿದ್ಯಮಾನವಾಗಿ ಬಿಜೆಪಿಯ ಸಂಸದೀಯ ಮಂಡಳಿಗೆ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ಸೇರ್ಪಡೆಯಾಗಿದ್ದಾರೆ.

ಕೇಂದ್ರೀಯ ಚುನಾವಣಾ ಸಮಿತಿಯಲ್ಲೂ ಅವರು ಸ್ಥಾನ ಪಡೆದಿದ್ದು, ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಅಂತಿಮಗೊಳಿಸುವಲ್ಲಿ ಬಿಎಸ್‌ವೈ ಪ್ರಮುಖ ಪಾತ್ರವಹಿಸಲಿದ್ದಾರೆ ಎಂಬುದು ಖಚಿತವಾಗಿದೆ.

ಈ ಸೇರ್ಪಡೆಗೆ ಅವರು ಟ್ವೀಟ್‌ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅದು ಹೀಗಿದೆ -

ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ನನ್ನನ್ನು ಸದಸ್ಯನನ್ನಾಗಿ ನೇಮಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಷಾ ಅವರಿಗೆ ಕೃತಜ್ಞತೆಗಳು. ನಮ್ಮ ಪಕ್ಷದ ಉನ್ನತ ಮಟ್ಟದ ಸಮಿತಿಯಲ್ಲಿ ಸೇವೆ ಸಲ್ಲಿಸುವ ಈ ಗೌರವಕ್ಕಾಗಿ ನಾನು ಆಭಾರಿಯಾಗಿದ್ದೇನೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಬಿ. ಎಸ್. ಯಡಿಯೂರಪ್ಪ ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಪಕ್ಷದ ಅತ್ಯಂತ ಉನ್ನತವಾದ ಸಂಸದೀಯ ಮಂಡಳಿಗೆ ತಮ್ಮನ್ನು ನೇಮಕ ಮಾಡುವುದರ ಮೂಲಕ ಪಕ್ಷ ತಮಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ.

ತಾವು ಈ ಹುದ್ದೆಗೆ ಏರಿರುವುದರಿಂದ ಕರ್ನಾಟಕ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಮುಂಬರುವ 2023ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ನಿಶ್ಚಿತ. ಬಿಎಸ್‌ವೈ ಅವರನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ನಳಿನ್‍ಕುಮಾರ್ ಕಟೀಲ್ ಸಂತಸ

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ ನೀಡಿರುವುದನ್ನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.

ರಾಜ್ಯದಲ್ಲಿ ಪಕ್ಷದ ಹಿರಿಯರು, ಮಾರ್ಗದರ್ಶಕ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಸಂಸದೀಯ ಮಂಡಳಿಯಲ್ಲಿ ಸೇರಿಸಿರುವುದು ಮಹತ್ವದ ಕ್ರಮ.

ದೇಶದೆಲ್ಲೆಡೆ ಪಕ್ಷದ ಸಂಘಟನೆ ಮತ್ತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ನಿರ್ಧಾರ ಮಾಡಿದ್ದು, ಅವರಿಗೆ ಪಕ್ಷದ ರಾಜ್ಯ ಘಟಕದ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದ ಸಮರ್ಪಿಸುವುದಾಗಿ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಸಿ ಟಿ ರವಿ ಪ್ರತಿಕ್ರಿಯೆ ಹೀಗಿದೆ..

ನಮ್ಮ ಹಿರಿಯ ನಾಯಕ, ಅಪ್ರತಿಮ ಸಂಘಟಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ. ಎಸ್‌. ಯಡಿಯೂರಪ್ಪನವರು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಪಕ್ಷವನ್ನು ಚುನಾವಣೆಗೆ ಸಿದ್ಧಪಡಿಸುವ ಮಹತ್ಕಾರ್ಯ ಯಡಿಯೂರಪ್ಪನಂಥ ಧುರೀಣರ ಹೆಗಲಿಗೇರಿರುವುದು ರಾಜ್ಯದ ಲಕ್ಷಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಶ್ರಮವರಿಯದ ಸೇನಾನಿಯಾಗಿ ಪಕ್ಷಕ್ಕಾಗಿ ಅಂದಿಗೂ-ಇಂದಿಗೂ ಸೇವೆ ಸಲ್ಲಿಸುತ್ತಿರುವ ಯಡಿಯೂರಪ್ಪನವರ ನಾಯಕತ್ವ ಗುಣ ಹಾಗೂ ಅನುಭವ ಪಕ್ಷದ ಪಾಲಿಗೆ ಅತಿದೊಡ್ಡ ಶಕ್ತಿಯಾಗಿ ಪರಿಣಮಿಸಲಿದೆ. ಸಂಸದೀಯ ಮಂಡಳಿಗೆ ಬಿ. ಎಸ್‌. ಯಡಿಯೂರಪ್ಪ ಹಾಗೂ ಬಿ. ಎಲ್‌. ಸಂತೋಷ್‌ ನೇಮಕವಾಗಿರುವ ವಿಚಾರ ವೈಯಕ್ತಿಕವಾಗಿ ನನಗೆ ಅತ್ಯಂತ ಖುಷಿ ನೀಡಿದ್ದು ಅವರಿಂದ ಮಾರ್ಗದರ್ಶನ ಪಡೆಯಲು ಉತ್ಸುಕನಾಗಿ ಎದುರು ನೋಡುತ್ತಿದ್ದೇನೆ ಎಂದು ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

IPL_Entry_Point