ಕನ್ನಡ ಸುದ್ದಿ  /  Karnataka  /  Basavaraj Bommai Says Karnataka Is At The Forefront Of Development

Basavaraj Bommai: 'ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ; ಎಫ್‌ಡಿಐ ಆಕರ್ಷಣೆಯಲ್ಲೂ ರಾಜ್ಯವೇ ನಂಬರ್ ವನ್'

ಕರ್ನಾಟಕ ಪ್ರಗತಿಯಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ವಿದೇಶೀ ನೇರ ಹೂಡಿಕೆಯಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸಿಎಂ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಜತೆಗೂಡಿ ಪ್ರಗತಿಪರ ಕೆಲಸವನ್ನು ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಡೀ ದೇಶ ಹಾಗೂ ನಾಡನ್ನು ಕಟ್ಟಲು ಒಂದಾಗಿ ಕೆಲಸ ಮಾಡಿದರೆ, ಅದು ಯಶಸ್ವಿಯಾಗುತ್ತದೆ. ಯಶೋಗಾಥೆಯ ಪಥದಲ್ಲಿ ನಾವು ನಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಇಂದು ಕೆ.ಎಲ್.ಇ ಸಂಸ್ಥೆಯ ಬಿ ವಿ ಭೂಮರೆಡ್ಡಿ ತಾಂತ್ರಿಕ ವಿಶ್ವವಿದ್ಯಾಲಯ ಏರ್ಪಡಿಸಿರುವ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಪ್ರಧಾನಿಯವರು ಐದು ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಹೇಳಿದ್ದಾರೆ‌. ಅದರಲ್ಲಿ ನಮ್ಮ ರಾಜ್ಯದಿಂದ 1 ಟ್ರಿಲಿಯನ್ ಆರ್ಥಿಕತೆ ಗುರಿಯ ಸಾಧನೆಯನ್ನು 2025ರೊಳಗೆ ಮಾಡಬೇಕು ಎನ್ನುವ ಕ್ರಮಗಳನ್ನು ನಾವು ಮಾಡಿದ್ದೇವೆ ಎಂದರು.

ಆರ್ಥಿಕವಾಗಿ ಒಂದು ರಾಜ್ಯ ಬೆಳೆದರೆ, ಶೈಕ್ಷಣಿಕವಾಗಿ ಆರೋಗ್ಯದಿಂದ ನಮ್ಮ ಯುವಕರ ಕೈಗೆ ಕೆಲಸ ಸಿಗುತ್ತದೆ. ಸ್ವಾವಲಂಬನೆ ಬದುಕು ಬದುಕಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಕರ್ನಾಟಕ ಪ್ರಗತಿಯಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ವಿದೇಶೀ ನೇರ ಹೂಡಿಕೆಯಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಮೊದಲ ಸೆಮಿ ಕಂಡಕ್ಟರ್, ಮೊದಲ ಆರ್ ಆ್ಯಂಡ್ ಡಿ ಪಾಲಿಸಿಯನ್ನು ಕರ್ನಾಟಕದಲ್ಲಿ ತಂದಿದ್ದೇವೆ. ಮೊದಲ ಎಂಪ್ಲಾಯ್ಮೆಂಟ್ ಪಾಲಿಸಿಯನ್ನು ಮಾಡಿದ್ದೇವೆ ಎಂದರು.

ಅಮಿತ್ ಶಾ ಅವರು ಗೃಹ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ಮಾಡಿದ್ದಾರೆ. ಕರ್ನಾಟಕಕ್ಕೆ ಫಾರೆನ್ಸಿಕ್ ಲ್ಯಾಬ್ ಯೂನಿವರ್ಸಿಟಿಯನ್ನು ಕೊಟ್ಟಿದ್ದಾರೆ. ಅಲ್ಲದೆ ಮಹಿಳೆಯರ ರಕ್ಷಣೆಗಾಗಿ ಸುಮಾರು 700 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ 450 ಕೋಟಿ ರೂಪಾಯಿಯ ಯೋಜನೆ ಕೊಟ್ಟಿದ್ದಾರೆ. ಅಮಿತ್ ಶಾ ಅವರು ಸಹಕಾರ ಸಚಿವರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಕ್ರಾಂತಿಯಾಗಿ, ಕರ್ನಾಟಕ ಮತ್ತು ಗುಜರಾತಿನಲ್ಲಿ ದೊಡ್ಡ ಪ್ರಮಾಣದ ಶಕ್ತಿಯಾಗಿ ಹೊರಹೊಮ್ಮಿ, ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ಕಾಲೇಜಿನ ಬಗ್ಗೆ ಮಾತನಾಡಿದ ಸಿಎಂ, ಬಿವಿಬಿ ಕಾಲೇಜು ಉತ್ತಮವಾಗಿ ಬೆಳೆದಿದೆ. ಈಗ ಕ್ಯಾಂಪಸ್‌ಗೆ ಬಂದಾಗ ನಾನು ವಿದ್ಯಾರ್ಥಿ ಆಗಬೇಕಿತ್ತು ಅನಿಸುತ್ತದೆ. ಆಗ ಕೇವಲ ಮೂರು ಸೆಕ್ಷನ್‌ಗಳು ಮಾತ್ರ ಇದ್ದವು. ಕ್ಯಾಂಟೀನ್ ನನ್ನ ಬಹಳ ಇಷ್ಟದ ಸ್ಥಳ. ಈಗ ಅಲ್ಲಿ ರಿಸ್ಟ್ರಿಕ್ಷನ್ ಹಾಕಿದ್ದಾರೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಯಿಸಿಕೊಂಡರು.

ಭಾರತ ದೇಶ ವಿಶ್ವದಲ್ಲಿ ಅತ್ಯಂತ ಸದೃಢ, ಸುರಕ್ಷಿತ ಮತ್ತು ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರ. ನಾವು ಅಮೃತ ಮಹೋತ್ಸವ ಮಾಡಿದ್ದೇವೆ‌. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಅಮೃತ ಕಾಲ ಅಂತ ಹೇಳಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ಬಿವಿಬಿ ಕಾಲೇಜು, ಕೆಎಲ್ಇ ಸಂಸ್ಥೆ ನವ ಭಾರತದ ನಿರ್ಮಾಣದಲ್ಲಿ ಪಾತ್ರವಹಿಸಲು ಎಲ್ಲ ಸಿದ್ದತೆ ಮಾಡಿಕೊಂಡಿದೆ. ಸಂಸ್ಥೆಯ ಸಾಧನೆಯಿಂದ ನನಗೆ ಬಹಳ ಸಂತೋಷವಾಗಿದ್ದು, ಈ ಸಂಸ್ಥೆ ದೇಶ ಕಟ್ಟುವುದರಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಚಿವ ಮುರುಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ ಉಪಸ್ಥಿತರಿದ್ದರು.

IPL_Entry_Point