Karnataka Covid: ಚುನಾವಣಾ ರಣಕಣ ಕರ್ನಾಟಕದಲ್ಲಿ ಕೋವಿಡ್ ಅಬ್ಬರ; 24 ಗಂಟೆಗಳಲ್ಲಿ ಶೇಕಡಾ 56 ರಷ್ಟು ಏರಿಕೆಯಾದ ಕೊರೊನಾ ಪ್ರಕರಣಗಳು
ರಾಜ್ಯದಲ್ಲಿ ಇವತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಶೇಕಡಾ 56 ರಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 339 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಪಾಸಿಟಿವ್ ಪ್ರಮಾಣ ಶೇ. 11.3ಕ್ಕೆ ತಲುಪಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Assembly Elections) ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ರಾಜಕೀಯ ಪಕ್ಷಗಳು ಭಾರಿ ಸಂಖ್ಯೆಯಲ್ಲಿ ಮತದಾರರನ್ನು ಸೇರಿಸಿ ಶಕ್ತಿ ಪ್ರದರ್ಶನ ಹಾಗೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೋವಿಡ್ ಪ್ರಕರಣಗಳ (Covid Cases) ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.
ಇಂದು (ಏ.25, ಮಂಗಳವಾರ) ಒಂದೇ ದಿನ ರಾಜ್ಯದಲ್ಲಿ 339 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಒಂದರಲ್ಲೇ 306 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಶೇಕಡಾ 56 ರಷ್ಟು ಹೆಚ್ಚಾಗಿವೆ. ನಿನ್ನೆ (ಏ.24, ಸೋಮವಾರ) 217 ಪ್ರಕರಣಗಳು ಪತ್ತೆಯಾಗಿದ್ದವು. 724 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,943 ಕ್ಕೆ ಇಳಿದಿದ್ದು, ಒಟ್ಟು ಕೋವಿಡ್ ಸಂಖ್ಯೆ 40.85 ಲಕ್ಷಕ್ಕೆ ತಲುಪಿದೆ. ಪಾಸಿಟಿವ್ ದರವು ಶೇಕಡಾ 2 ರಿಂದ 11.3 ಕ್ಕೆ ಏರಿಕೆಯಾಕಿದೆ. ಬೆಂಗಳೂರಿನಲ್ಲಿ 2,992 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 1,454 ರಾಪಿಡ್ ಆಂಟಿಜೆನ್ ಪರೀಕ್ಷೆಗಳು (ಆರ್ಎಟಿ) ಮತ್ತು 1,538 ಆರ್ಟಿ-ಪಿಸಿಆರ್ ಮತ್ತು ಇತರ ಪರೀಕ್ಷೆಗಳನ್ನು ಮಾಡಲಾಗಿದೆ.
ಬೆಂಗಳೂರು ಮತ್ತು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸುಮಾರು 157 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ 10 ಪ್ರಕರಣಗಳು ವರದಿಯಾಗಿದ್ದು, ದಾವಣಗೆರೆಯಲ್ಲಿ ಆರು ಪ್ರಕರಣಗಳು ವರದಿಯಾಗಿವೆ. ಏತನ್ಮಧ್ಯೆ, ರಾಜ್ಯದ 21 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ(ಏ.24, ಸೋಮವಾರ) 94 ಪ್ರಕರಣಗಳು ದಾಖಲಾಗಿದ್ದು, ಆದರೆ ಇಂದು 306 ಹೊಸ ಪ್ರಕರಣಗಳು ದಾಖಲಾಗಿದ್ದು, ಹೊಸ ಸೋಂಕುಗಳ ಹೆಚ್ಚಳವನ್ನು ದಾಖಲಿಸಿದೆ.
ನಗರದಲ್ಲಿ ಚೇತರಿಸಿಕೊಂಡವರ ಸಂಖ್ಯೆ 514 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,260 ಕ್ಕೆ ತಲುಪಿದೆ. ದೇಶದಲ್ಲಿ ಒಟ್ಟಾರೆಯಾಗಿ ಕಳೆದ 24 ಗಂಟೆಗಳಲ್ಲಿ 6,660 ಹೊಸ ಪ್ರಕರಣಗಳು ಮತ್ತು 9,213 ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳು ಈಗ 63,380 ರಷ್ಟಿದೆ. ಮಂಗಳವಾರ ಒಟ್ಟು 24 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.