Karnataka cabinet expansion: ಸಂಪುಟ ಭರ್ತಿಗೆ ʻಸಂಕ್ರಾಂತಿʼ ಮುಹೂರ್ತ?; ಈಶ್ವರಪ್ಪ, ಜಾರಕಿಹೊಳಿ ಮತ್ತಿನ್ಯಾರಿಗೆ ಎಳ್ಳುಬೆಲ್ಲ?
Karnataka cabinet expansion: ಸಂಕ್ರಾಂತಿಯ ಉಡುಗೊರೆಯಾಗಿ ಕೆಲವರಿಗೆ ʻಸಿಹಿʼ ಸುದ್ದಿ ನೀಡಲು ಮುಖ್ಯಮಂತ್ರಿ ಬೊಮ್ಮಾಯಿ ಸಿದ್ದತೆ ಮಾಡಿಕೊಂಡಿದ್ದಾರೆ. ಇದು ಚುನಾವಣಾ ಕಾರ್ಯತಂತ್ರದ ಭಾಗವಾಗಿ ನಡೆಯುವ ಪ್ರಕ್ರಿಯೆ. ಸಚಿವ ಸಂಪುಟ ವಿಸ್ತರಣೆ ಅಲ್ಲ, ಖಾಲಿ ಇರುವ ಆರು ಸ್ಥಾನಗಳ ಭರ್ತಿ ಪ್ರಕ್ರಿಯೆ ಎಂಬುದು ಪಕ್ಷದ ಮೂಲಗಳ ಹೇಳಿಕೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆ ತಿಂಗಳು ಬಾಕಿ. ಸಚಿವ ಸಂಪುಟ ವಿಸ್ತರಣೆ, ಖಾಲಿ ಸ್ಥಾನಗಳ ಭರ್ತಿ ವಿಚಾರ ಪದೇಪದೆ ಮುನ್ನೆಲೆಗೆ ಬರುತ್ತಿದೆ. ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅಸಮಾಧಾನ ಶಮನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻಸಂಕ್ರಾಂತಿʼ ಮುಹೂರ್ತ ಫಿಕ್ಸ್ ಮಾಡಿದ್ದಾರಾ?
ಹೌದೆನ್ನುತ್ತಿವೆ ಮೂಲಗಳು. ಪ್ರಮುಖ ಪತ್ರಿಕಾ ಮಾಧ್ಯಮಗಳೂ ಈ ಕುರಿತು ವರದಿ ಮಾಡಿವೆ. ಮಕರ ಸಂಕ್ರಮಣ ಬಲು ವಿಶೇಷ. ನಾಡ ರೈತರ ಪಾಲಿಗೆ ಇದು ಹಸಿರು ಹಬ್ಬ. ಹೊಸ ಬೆಳೆ, ಹೊಸ ಉಡುಪು ತೊಟ್ಟು ಸಂಭ್ರಮಿಸವ ಕಾಲ. ಎಲ್ಲರ ಕೈಗಳಲ್ಲೂ ಹಣ ಹರಿದಾಡುವ ಸಂದರ್ಭ ಇದು.
ಇಂತಹ ಸಂಕ್ರಾಂತಿಯ ಉಡುಗೊರೆಯಾಗಿ ಕೆಲವರಿಗೆ ʻಸಿಹಿʼ ಸುದ್ದಿ ನೀಡಲು ಮುಖ್ಯಮಂತ್ರಿ ಬೊಮ್ಮಾಯಿ ಸಿದ್ದತೆ ಮಾಡಿಕೊಂಡಿರುವುದು ಬಹುತೇಕ ಖಚಿತವಾಗಿದೆ. ಇದು ಚುನಾವಣಾ ಕಾರ್ಯತಂತ್ರದ ಭಾಗವಾಗಿ ನಡೆಯುವ ಪ್ರಕ್ರಿಯೆ. ಸಚಿವ ಸಂಪುಟ ವಿಸ್ತರಣೆ ಅಲ್ಲ, ಖಾಲಿ ಇರುವ ಆರು ಸ್ಥಾನಗಳ ಭರ್ತಿ ಪ್ರಕ್ರಿಯೆ ಎಂಬುದು ಪಕ್ಷದ ಮೂಲಗಳ ಹೇಳಿಕೆ.
ಸಮುದಾಯದ ಪ್ರಾತಿನಿಧ್ಯದ ದೃಷ್ಟಿಯಿಂದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೆ ಸಂಪುಟ ಸೇರಲಿದ್ದಾರೆ. ಅವರು ಕುರುಬ ಸಮುದಾಯದವರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ತೊರೆದವರು. ಕ್ಲೀನ್ ಚಿಟ್ ಸಿಕ್ಕ ಬಳಿಕ ಸಂಪುಟ ಸೇರಲು ಹಾತೊರೆಯುತ್ತ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದವರು.
ಇದೇ ರೀತಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಸಚಿವ ಸಂಪುಟ ಸೇರಲಿದ್ದಾರೆ. ಅಶ್ಲೀಲ ಸಿಡಿ, ಅತ್ಯಾಚಾರ ಪ್ರಕರಣ ಕಾರಣ ಸಚಿವ ಸ್ಥಾನ ಕಳೆದುಕೊಂಡವರು.
ಇವರ ಹೊರತಾಗಿ, ಇನ್ನುಳಿದ ನಾಲ್ಕು ಸ್ಥಾನಗಳಿಗೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಹಳೆ ಮೈಸೂರು ಪ್ರಾಂತ್ಯದವರನ್ನು ಸಚಿವ ಸಂಪುಟಕ್ಕೆ ಸೇರಿಸಲು ಚಿಂತನೆ ನಡೆದಿದೆ.
ಕಳೆದ ತಿಂಗಳು ವಿಧಾನ ಮಂಡಲ ಅಧಿವೇಶನ ಆರಂಭದಲ್ಲೆ ಕೆ.ಎಸ್. ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕಲಾಪಕ್ಕೆ ಹಾಜರಾಗಲ್ಲ ಎಂದು ಕುಳಿತಿದ್ದರು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೆ ಮಾತುಕತೆ ಬಳಿಕ ಈಶ್ವರಪ್ಪ ಕಲಾಪಕ್ಕೆ ಹಾಜರಾಗಿದ್ದರು.
ವಿಧಾನಮಂಡಲ ಕಲಾಪದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜತೆಗೆ ಮಾತುಕತೆ ನಡೆಸಿ ಬಂದಿದ್ದರು.
ಅಂದು ಬೆಳಗಾವಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿ ಕೆಲವೊಂದು ವಿಷಯಗಳ ಚರ್ಚೆ ಅಪೂರ್ಣವಾಗಿತ್ತು. ಈಗ ಪುನಃ ಕರೆ ಬಂದಿದೆ. ರಾಷ್ಟ್ರೀಯ ಅಧ್ಯಕ್ಷರೇ ಸಭೆ ಕರೆದಿದ್ದಾರೆ. ಕೇಂದ್ರ ಗೃಹ ಸಚಿವರು ಕೂಡ ಸಭೆಯಲ್ಲಿರುತ್ತಾರೆ. ಚುನಾವಣಾ ತಯಾರಿ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚಿಸಲಾಗುವುದು. ಈ ಸಭೆಯಲ್ಲಿ ಭಾಗವಹಿಸಿ ನಾಳೆ ಕಲಾಪಕ್ಕೆ ವಾಪಸ್ಸು ಬರಲಿದ್ದೇನೆ. ಸಚಿವ ಸಂಪುಟ ವಿಸ್ತರಣೆ, ಖಾಲಿ ಸಚಿವ ಸ್ಥಾನ ಭರ್ತಿ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದು ವಿವರಿಸಿದರು.
ಗಮನಿಸಬಹುದಾದ ಸುದ್ದಿ
Karnataka election 2023: ಜೆಡಿಎಸ್ ಜತೆಗೆ ಮೈತ್ರಿ; ಬಿಜೆಪಿ ನಾಯಕರ ಲೆಕ್ಕಾಚಾರ ಏನು?
ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳುವುದಕ್ಕೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆಯೇ? ಅಥವಾ ಕಳೆದ ಸಲದಂತೆ ಅತಂತ್ರವಾಗಬಹುದೇ? ಆದರೆ ಆಡಳಿತ ಚುಕ್ಕಾಣಿ ಹಿಡಿಯಲು ಮೈತ್ರಿ ಅನಿವಾರ್ಯವಾದೀತು. ಆಗ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಬಿಜೆಪಿ? ಇಷ್ಟಕ್ಕೂ ಬಿಜೆಪಿ ನಾಯಕರ ಈಗಿನ ಲೆಕ್ಕಾಚಾರ ಏನು? ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.