Karnataka PSI scam: ಪಿಎಸ್ಐ ಅಕ್ರಮ, ಕಿಂಗ್ಪಿನ್ ದಿವ್ಯಾ ಸೇರಿದಂತೆ 26 ಆರೋಪಿಗಳಿಗೆ ಜಾಮೀನು ನೀಡಿದ ಕಲಬುರಗಿ ಸೆಷನ್ಸ್ ಕೋರ್ಟ್
Karnataka PSI scam: ಕರ್ನಾಟಕ ಪೊಲೀಸ್ ಇಲಾಖೆಯ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ 26 ಆರೋಪಿಗಳಿಗೆ ಕಲಬುರಗಿ ಸೆಷನ್ಸ್ ಕೋರ್ಟ್ ಜಾಮೀನು ನೀಡಿದೆ.
ಕಲಬುರಗಿ: ಕರ್ನಾಟಕ ಪೊಲೀಸ್ ಇಲಾಖೆಯ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ 26 ಆರೋಪಿಗಳಿಗೆ ಕಲಬುರಗಿ ಸೆಷನ್ಸ್ ಕೋರ್ಟ್ ಜಾಮೀನು ನೀಡಿದೆ. ಕಿಂಗ್ಪಿನ್ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿದಂತೆ ಒಟ್ಟು 26 ಮಂದಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಕಲಬುರಗಿಯ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಕೆ.ಬಿ. ಪಾಟೀಲ್ ಇಂದು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಪಟ್ಟಂತೆ ಜೈಲು ಪಾಲಾಗಿದ್ದ 26 ಜನರಿಗೆ ಜಾಮೀನು ನೀಡಿದ್ದಾರೆ. ಈ ಹಿಂದೆ ಜಾಮೀನು ಪಡೆದವರು ಸೇರಿದಂತೆ ಒಟ್ಟು 36 ಮಂದಿಗೆ ಇಲ್ಲಿಯವರೆಗೆ ಜಾಮೀನು ಸಿಕ್ಕಂತಾಗಿದೆ.
ಮೂವರು ಪೊಲೀಸ್ ಇಲಾಖೆಯ ಅಧಿಕಾರಿಗಳು, ಪರೀಕ್ಷೆ ಬರೆದ ಎಂಟು ಅಭ್ಯರ್ಥಿಗಳು, ಐವರು ಪರೀಕ್ಷಾ ಮೇಲ್ವಿಚಾರಕಿಯರು, ಮಧ್ಯವರ್ತಿಯರು ಸೇರಿದಂತೆ ಈ ಪ್ರಕರಣದಲ್ಲಿ ಜೈಲಿನಲ್ಲಿದ್ದ 26 ಜನರಿಗೆ ಜಾಮೀನು ದೊರಕಿದೆ.
ಈಗಾಗಲೇ ಕಿಂಗ್ಪಿನ್ ಆರ್.ಡಿ. ಪಾಟೀಲ್ ಮತ್ತು ಅವರ ಸಹೋದರ ಮಹಾಂತೇಶ ಪಾಟೀಲ್ ಸೇರಿದಂತೆ ಇತರರು ಜಾಮೀನು ಪಡೆದಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದ ಆರೋಪಿಯಾಗಿರುವ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಜಾಮೀನು ಅರ್ಜಿ ನಿನ್ನೆ ವಜಾಗೊಂಡಿತ್ತು. ಬೆಂಗಳೂರಿನ 24ನೇ ಸಿಸಿಹೆಚ್ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿತ್ತು. ಸದ್ಯ ಅಮೃತ್ ಪಾಲ್ ವಿರುದ್ಧ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಕೆಲ ಆಯಾಮಗಳ ತನಿಖೆ ಮಾತ್ರ ಮುಂದುವರಿದಿದೆ. ಹೀಗಾಗಿ ತನಿಖೆ ಸಂಪೂರ್ಣವಾಗಿಲ್ಲವೆಂಬ ವಾದದಲ್ಲಿ ಹುರುಳಿಲ್ಲ ಎಂದು ಜಾಮೀನು ನೀಡದಂತೆ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ. ನ್ಯಾ. ಕೆ.ಲಕ್ಷ್ಮಿ ನಾರಾಯಣ ಭಟ್ ಜಾಮೀನು ತಿರಸ್ಕರಿಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್ ರೂಮ್ ಕೀ ಅಮೃತ್ ಪಾಲ್ ಬಳಿಯಿತ್ತು. ಸ್ಟ್ರಾಂಗ್ ರೂಮ್ ಕೀ ಇತರೆ ಆರೋಪಿಗಳಿಗೆ ನೀಡಿದ್ದು, ಒಎಂಆರ್ ಶೀಟ್ ತಿದ್ದಿರುವುದಾಗಿ ವಿಧಿವಿಜ್ಞಾನ ತನಿಖಾ ವರದಿಯಲ್ಲಿ ದೃಢಪಟ್ಟಿತ್ತು.
2021 ರ ಅಕ್ಟೋಬರ್ ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದಿತ್ತು. ಆದರೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಬೆಳಕಿಗೆ ಬಂದು ಸಂಚಲನವನ್ನೇ ಉಂಟು ಮಾಡಿತ್ತು. ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು. 2022 ರ ಎಪ್ರಿಲ್ 8 ರಂದು ಕಲಬುರಗಿ ಚೌಕ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು.
ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಬಳಿಕ, ಸಿಐಡಿ ತನಿಖೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದ ಬಳಿಕ ಅಂದರೆ ಏಪ್ರಿಲ್ 29ರಂದು ಈ ಪಿಎಸ್ಐ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ಸರಕಾರ ಪ್ರಕಟಿಸಿತ್ತು.
545 ಪಿಎಸ್ಐ ಹುದ್ದೆಗಳಿಗೆ ಕಳೆದ ವರ್ಷ ನಡೆಸಿದ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಪರೀಕ್ಷೆಯನ್ನು ಮತ್ತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಆ ಸಂದರ್ಭದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು. ಈ ಹಿಂದೆ ನಡೆದ ಪರೀಕ್ಷೆಯನ್ನು ರದ್ದುಗೊಳಿಸಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರುಪರೀಕ್ಷೆ ನಡೆಸಲಾಗುವುದು ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು.