Praveen Nettar murder case: 'ಉದ್ದೇಶಿತ ಹತ್ಯೆಗೆ ಕಿಲ್ಲರ್ ಸ್ಕ್ವಾಡ್'; ನೆಟ್ಟಾರು ಹತ್ಯೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಏನೇನಿದೆ?
“ಕೆಲವು ಸಮುದಾಯಗಳು ಮತ್ತು ಗುಂಪುಗಳಿಗೆ ಸೇರಿದ ವ್ಯಕ್ತಿಗಳು ಅಥವಾ ನಾಯಕರನ್ನು ಗುರುತಿಸಲು, ಪಟ್ಟಿ ಮಾಡಲು ಮತ್ತು ಅವರ ಮೇಲೆ ಒಂದು ಕಣ್ಣಿಟ್ಟಿರಲು ಈ ಸೇವಾ ತಂಡದ ಸದಸ್ಯರಿಗೆ ದಾಳಿ ತರಬೇತಿ ನೀಡಲಾಗಿದೆ. ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕೂಡಾ ನೀಡಲಾಗಿದೆ,” ಎಂಬ ಆತಂಕಕಾರಿ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯು ಶುಕ್ರವಾರ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಸಂಸ್ಥೆಯು 20 ಆರೋಪಿಗಳನ್ನು ಹೆಸರಿಸಿದೆ.
ಉದ್ದೇಶಿತ ಹತ್ಯೆಯು, ಭಯೋತ್ಪಾದನೆಯನ್ನು ಹೆಚ್ಚಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(Popular Front of India)ದ ಯೋಜನೆಯ ಭಾಗವಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ. ಅಲ್ಲದೆ, 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಅಜೆಂಡಾ ಇದೆ ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಅಧಿಕಾರಿಗಳು ಹೇಳಿದ್ದಾರೆ.
“ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಮತ್ತು 2047ರ ವೇಳೆಗೆ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯನ್ನು ಪಿಎಫ್ಐ ಹೊಂದಿದೆ. ಇದರ ಭಾಗವಾಗಿ ಪಿಎಫ್ಐಯು ತನ್ನ ಶತ್ರುಗಳನ್ನು ಮತ್ತು ಉದ್ದೇಶಿತ ಹತ್ಯೆಗಳನ್ನು ನಡೆಸಲು ಸೇವಾ ತಂಡ(Service Teams)ಗಳು ಅಥವಾ ಕಿಲ್ಲರ್ ಸ್ಕ್ವಾಡ್ಗಳು ಎಂಬ ರಹಸ್ಯ ತಂಡಗಳನ್ನು ರಚಿಸಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ,” ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕೆಲವು ಸಮುದಾಯಗಳು ಮತ್ತು ಗುಂಪುಗಳಿಗೆ ಸೇರಿದ ವ್ಯಕ್ತಿಗಳು ಅಥವಾ ನಾಯಕರನ್ನು ಗುರುತಿಸಲು, ಪಟ್ಟಿ ಮಾಡಲು ಮತ್ತು ಅವರ ಮೇಲೆ ಒಂದು ಕಣ್ಣಿಟ್ಟಿರಲು ಈ ಸೇವಾ ತಂಡದ ಸದಸ್ಯರಿಗೆ ದಾಳಿ ತರಬೇತಿ ನೀಡಲಾಗಿದೆ. ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕೂಡಾ ನೀಡಲಾಗಿದೆ,” ಎಂಬ ಆತಂಕಕಾರಿ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಪಿಎಫ್ಐ ನಾಯಕರ ಸೂಚನೆಯ ಮೇರೆಗೆ, ಹತ್ಯೆಗೆ ಗುರಿಪಡಿಸಿರುವವರ ಮೇಲೆ ದಾಳಿ ನಡೆಸಲು ಅಥವಾ ಕೊಲ್ಲಲು ಈ ಸೇವಾ ತಂಡದ ಸದಸ್ಯರು ತರಬೇತಿ ಪಡೆದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
“ಬೆಂಗಳೂರು ನಗರ, ಸುಳ್ಯ ಪಟ್ಟಣ ಮತ್ತು ಬೆಳ್ಳಾರೆ ಗ್ರಾಮದಲ್ಲಿ ನಡೆದ ಪಿಎಫ್ಐ ಸದಸ್ಯರು ಮತ್ತು ಮುಖಂಡರ ಪಿತೂರಿ ಸಭೆಗಳಲ್ಲಿ, ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್ ಎಂಬಾತನಿಗೆ ನಿರ್ದಿಷ್ಟ ಸಮುದಾಯದ ಪ್ರಮುಖರನ್ನು ಗುರುತಿಸಲು ಮತ್ತು ಹತ್ಯೆಗೆ ಗುರಿಯಾಗಿಸಲು ಸೂಚಿಸಲಾಗಿದೆ” ಎಂದು ಹೆಸರು ಹೇಳಲು ನಿರಾಕರಿಸಿದ ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.
ಮುಂಖಂಡರ ಸೂಚನೆಗಳ ಪ್ರಕಾರ, ಹತ್ಯೆಗೆಂದು ನಾಲ್ವರನ್ನು ಗುರುತಿಸಲಾಗಿತ್ತು. ಅವರಲ್ಲಿ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26 ರಂದು ಸಾರ್ವಜನಿಕವಾಗಿ ಮಾರಕಾಯುಧಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.
ಚಾರ್ಜ್ಶೀಟ್ನಲ್ಲಿ ಯಾರೆಲ್ಲಾ ಹೆಸರುಗಳಿವೆ?
ಮೊಹಮ್ಮದ್ ಶಿಯಾ, ಅಬ್ದುಲ್ ಬಶೀರ್, ರಿಯಾಜ್, ಮುಸ್ತಫಾ ಪೈಚಾರ್, ಮಸೂದ್ ಕೆಎ, ಕೊಡಾಜೆ ಮೊಹಮ್ಮದ್ ಶೆರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ, ಇಸ್ಮಾಯಿಲ್ ಶಾಫಿ, ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ, ಮಹಮ್ಮದ್ ಶಫೀಕ್, ಉಮ್ಮರ್ ಫಾರೂಕ್, ಅಬ್ದುಲ್ ಕಬೀರ್, ಮುಹಮ್ಮದ್ ಇಬ್ರಾಹಿಂ, ಸೈನುಲ್ ಅಬಿದ್ ವೈ, ಶೇಖ್ ಸದ್ದಾಂ ಹುಸೇನ್, ಜಾಕಿಯಾರ್ ಎ, ಎನ್ ಅಬ್ದುಲ್ ಹಾರಿಸ್ ಮತ್ತು ತುಫೈಲ್ ಎಂ ಹೆಚ್ ಹೆಸರುಗಳು ಚಾರ್ಜ್ ಶೀಟ್ನಲ್ಲಿದೆ.
ಈ ಆರೋಪಿಗಳ ಪೈಕಿ ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶೆರೀಫ್, ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್ ಎಂಆರ್ ಮತ್ತು ತುಫೈಲ್ ಎಂಎಚ್ ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರ ತಲೆಗೆ ಈಗಾಗಲೇ ಬಹುಮಾನ ಘೋಷಿಸಲಾಗಿದೆ. ಇವರಲ್ಲಿ ಇಬ್ಬರ ಪತ್ತೆಗೆ ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾದ ಕೊಡಾಜೆ ಮಹಮ್ಮದ್ ಷರೀಫ್(53) ಮತ್ತು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಮಸೂದ್ ಮಸೂದ್ (40) ಹುಡುಕಿಕೊಟ್ಟರೆ, ಎನ್ಐಎ ತಲಾ 5 ಲಕ್ಷ ರೂಪಾಯಿ ಬಹುಮಾನ ನೀಡಲಿದೆ.