ಕನ್ನಡ ಸುದ್ದಿ  /  Karnataka  /  Pm Narendra Modi Belagavi Visit On February 27, Bjp Plans Big Road Show

Narendra Modi Belagavi Visit: ಫೆಬ್ರವರಿ 27ರಂದು ಬೆಳಗಾವಿಗೆ ಪ್ರಧಾನಿ ಮೋದಿ, ರೋಡ್‌ ಶೋ, 10 ಸಾವಿರ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ

ವಿಧಾನಸಭಾ ಚುನಾವಣೆ ಸನಿಹದಲ್ಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು, ನಾಡಿದ್ದು ಅಂದರೆ ಫೆಬ್ರವರಿ 27ರಂದು ಶಿವಮೊಗ್ಗ ಮತ್ತು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PTI)

ಬೆಳಗಾವಿ: ವಿಧಾನಸಭಾ ಚುನಾವಣೆ ಸನಿಹದಲ್ಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು, ನಾಡಿದ್ದು ಅಂದರೆ ಫೆಬ್ರವರಿ 27ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ನಾಡಿದ್ದು ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಅಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಅಂದು, ಮೋದಿ ಅವರು ಬೆಳಗಾವಿಗೂ ಭೇಟಿ ನೀಡಲಿದ್ದು, ಹತ್ತು ಕಿ.ಮೀ. ರೋಡ್‌ ಶೋ ದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.. ಆ ಸಮಯದಲ್ಲಿ ಹತ್ತು ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋಗೆ ಬಿಜೆಪಿ ಶಾಸಕರಾದ ಅಭಯ ಪಾಟೀಲ ಯೋಜಿಸಿದ್ದಾರೆ. ಬಿಜೆಪಿ ಪಕ್ಷದ ಬಾವುಟಗಳು, ಬಟಿಂಗ್ಸ್‌ಗಳಿಂದ ರೋಡ್‌ ಶೋ ನಡೆಯುವ ಪ್ರದೇಶಗಳು ಕೇಸರಿಮಯವಾಗಲಿದೆ. ರೋಡ್‌ ಶೋ ಇಕ್ಕೆಲದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗುತ್ತಿದೆ. ಬೆಳಗಾವಿಯ ಕ್ಲಬ್‌ ರೋಡ್‌, ಕಾಲೇಜ್‌ ರೋಡ್‌, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಕಿಂಡ ಗಲ್ಲಿ, ಕಪಿಲೇಶ್ವರ ರೈಲ್ವೆ ಗೇಟ್‌, ಶಿವಾಜಿ ಪಾರ್ಕ್‌, ಶಿವಚರಿತ್ರೆ ರೋಡ್‌, ಬಿಎಸ್‌ ಯಡಿಯೂರಪ್ಪ ರೋಡ್‌ ಮೂಲಕ ಮಾಲಿನಿ ಸಿಟಿಗೆ ತಲುಪಲಿದ್ದಾರೆ.

ಬೆಳಗಾವಿ ಚನ್ನಮ್ಮ ಸರ್ಕಲ್‌ನಿಂದ ಮಾಲಿನಿ ಸಿಟಿಯವರೆಗೆ ಭರ್ಜರಿ ರೋಡ್‌ ಶೋ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಹತ್ತು ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ರೋಡ್‌ ಶೋ ನಡೆಯುವ ಅಕ್ಕಪಕ್ಕದ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ನಾಲ್ಕೈದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

ರೋಡ್‌ ಶೋ ಮಾರ್ಗ ಕುರಿತು ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.ಕೊನೆ ಕ್ಷಣದಲ್ಲಿ ಬದಲಾವಣೆ ಇರಬಹುದು ಎನ್ನಲಾಗಿದೆ. ಹೀಗಿದ್ದರೂ, ಭರ್ಜರಿ ರೋಡ್‌ ಶೋಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋದಿ ಪ್ರಧಾನಿಯಾದ ಬಳಿಕ ಬದಲಾದ ಭಾರತದ ಚಿತ್ರಣವನ್ನು ರೋಡ್‌ ಶೋ ಸಂದರ್ಭದಲ್ಲಿ ಪ್ರಸ್ತುಪಡಿಸಲು ಬಿಜೆಪಿ ಯೋಜಿಸಿದೆ. ಇದರೊಂದಿಗೆ ಬೆಳಗಾವಿ ಮಹಾನಾಯಕರ, ಮಹಾಪುರುಷರ ಪರಿಚಯವನ್ನೂ ಈ ರೋಡ್‌ ಶೋನಲ್ಲಿ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿದ್ಧತೆ ನಡೆದಿದೆ. ಅಲ್ಲಿ ನಡೆಯುತ್ತಿರುವುದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಸರಕಾರ ಮತ್ತು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಕಮಲದ ಅಲಂಕಾರ, ಮುಂಭಾಗದಲ್ಲಿ ಹುಲ್ಲುಹಾಸು, ಪ್ರಧಾನಿ ಬರುವ ರಸ್ತೆಗೆ ಹೊಸದಾಗಿ ಡಾಮರೀಕರಣ ಇತ್ಯಾದಿಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಜಿಲ್ಲೆಗೆ ನಾನಾ ಕಡೆಗಳಿಂದ ಜನರನ್ನು ಕರೆತರಲು ಸಾವಿರದ ಏಳುನೂರು ಕೆಎಸ್‌ಆರ್‌ಸಿ ಬಸ್‌ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಬಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಮೋದಿ ಆಗಮನದ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ವಿಮಾನದ ನಿಲ್ದಾಣವನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದ್ದು, ಯಾರಿಗೂ ಪ್ರವೇಶ ನೀಡುತ್ತಿಲ್ಲ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಮಿತಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27 ರಂದು ಉದ್ಘಾಟಿಸಲಿದ್ದಾರೆ.

IPL_Entry_Point