Narendra Modi: ರಾಜ್ಯಕ್ಕಿಂದು ಮೋದಿ ಆಗಮನ, ವಿವಿಧ ಯೋಜನೆಗಳಿಗೆ ಚಾಲನೆ, ಗಿನ್ನಿಸ್ ದಾಖಲೆ ಸೇರಲಿದೆ ಹಕ್ಕುಪತ್ರ ವಿತರಣೆ, | 10 ಅಂಶಗಳು
PM Narendra Modi Karnataka Visit: ಮಳಖೇಡ್ನಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮವು ಗಿನ್ನಿಸ್ ರೆಕಾರ್ಡ್ ಬುಕ್ಗೆ ಸೇರಲಿದೆ. ಒಂದೇ ಬಾರಿ 52 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲು.
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರ್ನಾಟಕ ಪ್ರವಾಸದಲ್ಲಿದ್ದು, ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಇಂದು ಯಾವೆಲ್ಲ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎನ್ನುವ ವಿವರವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್. ನೀಡಿದ್ದಾರೆ.
ಮೋದಿ ಕರ್ನಾಟಕ ಭೇಟಿ: 10 ಅಂಶಗಳು
1. ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ,ಪುನಶ್ಚೇತನ ಹಾಗೂ ನವೀಕರಣ ಯೋಜನೆ ಉದ್ಘಾಟನೆ ಮತ್ತು ಸೂರತ್- ಚೆನ್ನೈ ಎಕ್ಸ್ಪ್ರೆಸ್ ವೇ ಶಂಕುಸ್ಥಾಪನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
2. ನಾರಾಯಣಪುರ ಎಡದಂಡೆ (ಎನ್. ಎಲ್. ಬಿ .ಸಿ) ಕಾಲುವೆ ನಾರಾಯಣಪುರ ಅಣೆಕಟ್ಟಿನಿಂದ ಪ್ರಾರಂಭವಾಗಿ ಮತ್ತು 4.5 ಲಕ್ಷ ಹೆಕ್ಟೇರ್ ಕಮಾಂಡ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 10,000 ಕ್ಯೂಸಕ್ಸ ನೀರು ಸಾಗಿಸುವ ಸಾಮರ್ಥ್ಯವನ್ನು ಕಾಲುವೆ ಹೊಂದಿದೆ. ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 560 ಗ್ರಾಮಗಳ 3.34 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗುತ್ತದೆ.
3. ಎನ್.ಎಲ್.ಬಿ.ಸಿ ಮತ್ತು ಅದರ ಉಪ ಕಾಲುವೆಗಳ ಒಟ್ಟು 3477 ಕಿಲೋಮೀಟರ್ ಗಳಷ್ಟು ಮರುರೂಪಿಸುವಿಕೆ ಒಳಗೊಂಡಿದೆ.
4. ಎನ್.ಎಲ್.ಬಿ.ಸಿ ಕಾಲುವೆ ವ್ಯವಸ್ಥೆಯಲ್ಲಿ 4565 ಸ್ವಯಂಚಾಲಿತ ಇಂಟಿಗ್ರೇಟೆಡ್ ಗೇಟ್ ಗಳು ಸ್ಕಾಡಾಯೊಂದಿಗೆ ಸ್ಥಾಪನೆ. ಇದರ ಒಟ್ಟು ಯೋಜನೆಯ ಒಟ್ಟು ವೆಚ್ಚ 4699 ಕೋಟಿ ರೂಗಳು. ಇದಕ್ಕೆ 1010.50 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ನೆರವು ನೀಡುತ್ತಿದೆ.
5. ಸೂರತ್- ಚೈನ್ನೈ ಎಕ್ಸ್ಪ್ರೆಸ್ ವೇಯ ಶಂಕುಸ್ಥಾಪನೆ. ಭಾರತಮಾಲಾ ಯೋಜನೆಯ ಅಡಿಯಲ್ಲಿ ನಿಂಬಾಳನಿಂದ ಸಿಂಗನೋಡಿಗೆ 6 ಪಥ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ನಿರ್ಮಾಣ, ಎನ್ ಹೆಚ್- 150 ಸಿ ಯ ಒಟ್ಟು 65.5 ಕಿಲೊಮೀಟರ್ ಭಾಗ( ಅಕ್ಕಲಕೋಟ್- ಕೆಎನ್/ಟಿಎಸ್ ಗಡಿ ವಿಭಾಗದ ಪ್ಯಾಕೇಜ್ ಮೂರು ಒಳಗೊಂಡಿದೆ . ಈ ಯೋಜನೆಯ ಒಟ್ಟು ವೆಚ್ಚ 2000 ಕೋಟಿ ರೂಪಾಯಿಗಳು ಇದೆ.
6. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ. ಈ ಯೋಜನೆಯಿಂದ ಕೃಷ್ಣಾ ನದಿಯ ನಾರಾಯಣಪುರ ಆಣೆಕಟ್ಟಿನಿಂದ 14.93 ಲಕ್ಷ ಜನರು ಸಂಸ್ಕರಿಸಿದ ನೀರನ್ನು ಪಡೆಯುತ್ತಾರೆ. ಈ ಯೋಜನೆಯಿಂದ 710 ಗ್ರಾಮೀಣ ವಸತಿಗಳು ಮತ್ತು 3 ಪಟ್ಟಣಗಳು ಸುಸ್ಥಿರ ಶುದ್ದ ಕುಡಿಯುವ ನೀರನ್ನು ಪಡೆಯಲಿವೆ ಹಾಗೂ 117 ಎಂ ಎಲ್ ಡಿ ನೀರು ಸಂಸ್ಕರಣ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ವೆಚ್ಚ 2054 ಕೋಟಿ ರೂಪಾಯಿಗಳಿದ್ದು, ಕೇಂದ್ರ ಸರ್ಕಾರವು ರೂ 766 ಕೋಟಿ ರೂಪಾಯಿಗಳನ್ನು ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
7. ಮಳಖೇಡ್ನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ವೇದಿಕೆ ಮೇಲೆ ತಪಾಸಣೆ ನಡೆಯುತ್ತಿದೆ. ವೇದಿಕೆ ಮತ್ತು ಸುತ್ತಮುತ್ತಲಿನ ಸ್ಥಳದಲ್ಲೇ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸುತ್ತಿದ್ದಾರೆ. ವೇದಿಕೆ ಮುಂದೆ ಸುಮಾರು 50 ಮೀಟರ್ ವರೆಗೆ ನಿಷೇಧ ಹೇರಲಾಗಿದೆ. ತಂತಿ ಬೇಲಿ ಹಾಕಿ ಜನ ಒಳ ಹೋಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.̇
8. ಕನ್ನಡದಲ್ಲಿ ಟ್ವೀಟ್: "ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದುʼʼ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.̈
9. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್ನಲ್ಲಿ ಸುಮಾರು ಮೂರು ಲಕ್ಷ ಜನರಿಗೆ ಅಡುಗೆ ಸಿದ್ಧವಾಗುತ್ತಿದೆ. ಸಮಾವೇಶಕ್ಕೆ ಬರುವವರಿಗೆ ಪಲಾವ್, ಮೊಸರನ್ನ, ಪಾಯಸ ಇದೆಯಂತೆ. ಸುಮಾರು 300 ಕೌಂಟರ್ಗಳ ಮೂಲಕ ಆಹಾರ ವಿತರಣೆ ಮಾಡಲು ಉದ್ದೇಶಿಸಲಾಗಿದೆ.
10. ಮಳಖೇಡ್ನಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮವು ಗಿನ್ನಿಸ್ ರೆಕಾರ್ಡ್ ಬುಕ್ಗೆ ಸೇರಲಿದೆ. ಒಂದೇ ಬಾರಿ 52 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಹೀಗಾಗಿ, ಇದು ಗಿನ್ನಿಸ್ ದಾಖಲೆ ಬರೆಯಲಿದೆ.