Jatropha fruits: ಬಾದಾಮಿ ಎಂದು ಜತ್ರೋಪ ಹಣ್ಣು ತಿಂದು ವಿದ್ಯಾರ್ಥಿಗಳು ಅಸ್ವಸ್ಥ, ಜತ್ರೋಪ ಹಣ್ಣು ಅಪಾಯಕಾರಿಯೇ?
ಮಿರ್ಜಾಪುರದ ಚುನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೋನಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಜತ್ರೋಪಾ ಹಣ್ಣನ್ನು ಬಾದಾಮಿ ಎಂದು ತಪ್ಪಾಗಿ ತಿಳಿದು ಮಕ್ಕಳು ತಿಂದಿದ್ದಾರೆ.
ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜತ್ರೋಪ ಹಣ್ಣ ತಿಂದು ಸುಮಾರು 16 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನಾಟಕದ ಸಿಂಧನೂರಿನಲ್ಲಿಯೂ ಇದೇ ರೀತಿ ಜತ್ರೋಪ ತಿಂದು ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿತ್ತು.
ಮಿರ್ಜಾಪುರದ ಚುನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೋನಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಜತ್ರೋಪಾ ಹಣ್ಣನ್ನು ಬಾದಾಮಿ ಎಂದು ತಪ್ಪಾಗಿ ತಿಳಿದು ಮಕ್ಕಳು ತಿಂದಿದ್ದಾರೆ. ಇದರಿಂದ 16 ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಸ್ವಸ್ಥಗೊಂಡ ಮಕ್ಕಳನ್ನು ಡಿವಿಷನಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿರ್ಜಾಪುರದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ. ಕಮಲ್ ಅವರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
"ಮೊದಲು ಮಕ್ಕಳನ್ನು ಕಮ್ಯುನಿಟಿ ಹೆಲ್ತ್ ಸೆಂಟರ್ಗೆ ದಾಖಲಿಸಲಾಗಿತ್ತು. ಪ್ರಥಮ ಚಿಕಿತ್ಸೆ ನೀಡದ ಬಳಿಕ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆʼʼ ಎಂದು ಕಮಲ್ ಮಾಹಿತಿ ನೀಡಿದ್ದಾರೆ.
ಈ ಮಕ್ಕಳು ಶಾಲೆಯಿಂದ ಬಂದ ಬಳಿಕ ಎಲ್ಐಸಿ ಕ್ಯಾಂಪಸ್ನ ಆಸುಪಾಸಿನಲ್ಲಿ ಆಡುತ್ತಿದ್ದರು. ಈ ಸಮಯದಲ್ಲಿ ಮಕ್ಕಳ ಕಣ್ಣಿಗೆ ಈ ಜತ್ರೋಪ ಹಣ್ಣುಗಳು ಕಾಣಿಸಿವೆ. ಇದು ಬಾದಾಮಿ ಎಂದುಕೊಂಡು ಮಕ್ಕಳು ತಿಂದಿದ್ದಾರೆ. ಬಳಿಕ ಮಕ್ಕಳಲ್ಲಿ ಭೇದಿ, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ರೀತಿ ಘಟನೆ ಕರ್ನಾಟಕದಲ್ಲಿಯೂ ಕೆಲವು ವರ್ಷಗಳ ಹಿಂದೆ ನಡೆದಿತ್ತು. ಸಿಂಧನೂರಿನ ಭೋಗಾಪುರ ಗ್ರಾಮದ ಸರಕಾರಿ ಶಾಲೆ ಮಕ್ಕಳು ಜತ್ರೋಪ ಗಿಡದ ಹಣ್ಣು ತಿಂದು ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಜತ್ರೋಪ ಹಣ್ಣು ಅಪಾಯಕಾರಿಯೇ?
ಸಿಂಧನೂರಿನಲ್ಲಿ ವಿದ್ಯಾರ್ಥಿಗಳು ಜತ್ರೋಪ ಹಣ್ಣು ತಿಂದ ಸಮಯದಲ್ಲಿ ಡಾ. ನಾಗರಾಜ ಅವರು ಜತ್ರೋಪ ಮತ್ತು ವಿಷಕಾರಿ ಹಣ್ಣುಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಅವರ ಪ್ರಕಾರ,
- ಯಾವುದೇ ಅಪರಿಚಿತ, ಗುರುತು ಇಲ್ಲದ, ಸಂಶಯಸ್ಪಾದ, ಮಾಹಿತಿ ಇಲ್ಲದ ಹಣ್ಣುಗಳನ್ನು ತಿನ್ನಬಾರದು. ಇಂತಹ ಆಹಾರ ಪದಾರ್ಥಗಳನ್ನು ತಿನ್ನಬಾರದು.
- ಜತ್ರೋಪ ಗಿಡದ ಬೀಜದ ಒಳಗೆ ಸಿಹಿ ಅಂಶ ಇರುತ್ತದೆ. ತಿನ್ನುವಾಗ ಯಾವುದೇ ತೊಂದರೆ ಎನಿಸದು. ಆದರೆ, ಬಳಿಕ ಅಪಾಯ ಉಂಟಾಗುತ್ತದೆ.
- ಜತ್ರೋಪವು ಹೈಡ್ರೋಕಾರ್ಬನ್ ಗುಂಪಿನಲ್ಲಿ ಸೇರುವ ಸಸ್ಯದ ಪ್ರಭೇದವಾಗಿದ್ದರಿಂದ ಬೀಜವನ್ನು ಜೈವಿಕ ಇಂಧನಕ್ಕಾಗಿ ಬಳಸುತ್ತಾರೆ. ಆದರೆ, ಇದನ್ನು ತಿನ್ನಬಾರದು.
- ಜತ್ರೋಪವನ್ನು ಸುಟ್ಟಾಗ ಹೊರಡುವ ಹೊಗೆಯೂ ವಿಷಕಾರಿ. ಇದು ದೇಹದ ನರ ವ್ಯವಸ್ಥೆಗೆ ಹಾನಿಯುಂಟುಉಮಾಡುತ್ತದೆ.
- ಈ ರೀತಿಯ ಬೀಜ ತಿಂದು ಹೊಟ್ಟೆಗೆ ಸೇರಿದರೆ ತಕ್ಷಣ ವಾಂತಿ ಮಾಡಿದರೆ ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ.
- ಶಾಲೆಗಳ ಸುತ್ತಮುತ್ತ, ಕೃಷಿಯ ಬೇಲಿಗಳಲ್ಲಿ ಇಂತಹ ಗಿಡಗಳನ್ನು ಬೆಳೆಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.