Earthquake: ದೆಹಲಿ ಸೇರಿ ಉತ್ತರ ಭಾರತದ ಕೆಲವೆಡೆ ಭೂಕಂಪ: ಪಾಕ್, ಅಫ್ಘಾನಿಸ್ತಾನದಲ್ಲಿ 9 ಮಂದಿ ಬಲಿ
ಮಂಗಳವಾರ ಸಂಜೆ ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ರಾತ್ರಿ 10.20ರ ವೇಳೆಗೆ ದೆಹಲಿ-ಎನ್ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿರುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಂಗಳವಾರ ಸಂಜೆ ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ರಾತ್ರಿ 10.20ರ ವೇಳೆಗೆ ದೆಹಲಿ-ಎನ್ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿರುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿನ ಪ್ರಬಲ ಭೂಕಂಪದ ನಂತರ ತುರ್ಕಮೆನಿಸ್ತಾನ್, ಭಾರತ, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಮತ್ತು ಕಿರ್ಗಿಸ್ತಾನ್ ದೇಶಗಳಲ್ಲಿ ಭೂಕಂಪದ ಅನುಭವವಾಗಿದೆ.
ಭಾರತದಲ್ಲಿ ದೆಹಲಿ-ಎನ್ಸಿಆರ್ ಪ್ರದೇಶ, ಉತ್ತರ ಪ್ರದೇಶ. ಪಂಜಾಬ್, ಹರಿಯಾಣ, ಚಂಡೀಗಢ, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ಕೆಲವೆಡೆ ದಲ್ಲಿ ಭೂಮಿ ಕಂಪಿಸಿದೆ. ದೆಹಲಿಯಲ್ಲಿ 4.4ರ ತೀವ್ರತೆಯಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.
9 ಮಂದಿ ಬಲಿ
ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಕಲಾಫ್ಗಾನ್ನಿಂದ 90 ಕಿ.ಮೀ ದೂರದಲ್ಲಿತ್ತು. ಪಾಕಿಸ್ತಾನದಲ್ಲಿ 6.8 ತೀವ್ರತೆಯ ಭೂಕಂಪಕ್ಕೆ ಇಬ್ಬರು ಮತ್ತು ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪಕ್ಕೆ 7 ಮಂದಿ ಸೇರಿ ಭೂಕಂಪಕ್ಕೆ 9 ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ತಿಳಿಸಿದ್ದಾರೆ.
ಅನುಭವ ಹಂಚಿಕೊಂಡ ಜನರು
ತಮ್ಮ ಅನುಭವವನ್ನು ಹಂಚಿಕೊಂಡಿರುವ ನೋಯ್ಡಾದ ಹೈಡ್ ಪಾರ್ಕ್ ಸೊಸೈಟಿಯ ನಿವಾಸಿಯೊಬ್ಬರು, "ಡೈನಿಂಗ್ ಟೇಬಲ್ ಅಲುಗಾಡುವುದನ್ನು ಮೊದಲು ಗಮನಿಸಿದೆ. ಬಳಿಕ ಫ್ಯಾನ್ಗಳು ಸಹ ಅಲುಗಾಡಿತು. ಭೂಕಂಪದ ಅನುಭವ ಹೆಚ್ಚು ಕಾಲ ಇತ್ತು"
"ನಾನು ಪ್ರಯಾಣಿಕರಿಗಾಗಿ ಕಾಯುತ್ತಿದ್ದೆ ಮತ್ತು ಇದ್ದಕ್ಕಿದ್ದಂತೆ ನನ್ನ ಕಾರು ಅಲುಗಾಡಲಾರಂಭಿಸಿತು. ನಾನು ತಕ್ಷಣ ಕೂಗಿ ನನ್ನ ಸ್ನೇಹಿತರಿಗೆ ಈ ಬಗ್ಗೆ ಹೇಳಿದೆ" ಎಂದು ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್ ಬಳಿ ಇರುವ ಕ್ಯಾಬ್ ಮಾಲೀಕ ರಮೇಶ್ ಪವಾರ್ ಹೇಳಿದರು.
ಟಿವಿ ನೋಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಟಿವಿ ಮತ್ತು ಸೋಫಾ ಅಲುಗಾಡುತ್ತಿರುವುದನ್ನು ನೋಡಿದ್ದಾಗಿ ದಕ್ಷಿಣ ದೆಹಲಿಯ ಲಜಪತ್ ನಗರದ ನಿವಾಸಿ ಜ್ಯೋತಿ ಅವರು ಹೇಳಿದ್ದಾರೆ. ಶಕರ್ಪುರ ಪ್ರದೇಶದಲ್ಲಿ ಕಟ್ಟಡವೊಂದು ವಾಲುತ್ತಿರುವ ಬಗ್ಗೆ ತಮಗೆ ಕರೆ ಬಂದಿತ್ತು. ಆದರೆ ಹಾಗೆನೂ ಆಗಿರಲಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ.
ಕಳೆದ ತಿಂಗಳು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ್ದ ಸರಣಿ ಭೀಕರ ಭೂಕಂಪಗಳಿಗೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. 46,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಲಕ್ಷಾಂತರ ಜನರು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದರು, ಸಾವಿರಾರು ಬೃಹತ್ ಕಟ್ಟಡಗಳು ಧರೆಗುರುಳಿದ್ದವು.