ಕನ್ನಡ ಸುದ್ದಿ  /  Nation And-world  /  Supreme Court Says Time For Law On Hurtful Speech By Public Functionaries

Supreme Court: ಜನನಾಯಕರ ನಾಲಿಗೆಗೆ ಲಗಾಮು! 'ಆಕ್ಷೇಪಾರ್ಹ ಭಾಷಣ ಸಂಬಂಧ ಕಾನೂನಿಗೆ ಇದು ಸಕಾಲ' -ಸುಪ್ರೀಂ ಕೋರ್ಟ್

ರಾಜಕಾರಣಿಗಳ ಆಕ್ಷೇಪಾರ್ಹ ಹೇಳಿಕೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ, ಸಂಸತ್ತು ಹೊಸ ಕಾನೂನಿನ ರಚನೆ ಬಗ್ಗೆ ಯೋಚಿಸಲು ಇದು ಸಕಾಲ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಸೂಚಿಸಿದೆ.

ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ) (ANI)

ಜನನಾಯಕರುಗಳಾದ ಸಂಸದರು ಮತ್ತು ಶಾಸಕರ ನಾಲಿಗೆಗೆ ಸೂಕ್ತ ಲಗಾಮು ಇರಬೇಕು. ಕೆಲವೊಮ್ಮೆ ಸಾರ್ವಜನಿಕವಾಗಿ ಮಾತನಾಡುವಾಗ ಇದೇ ಜನಪ್ರತಿನಿಧಿಗಳು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾರೆ. ಇದು ಹಲವರ ಮನನೋಯಿಸುತ್ತದೆ. ಹೆಚ್ಚಿನ ಬಾರಿ ರಾಜಕಾರಣಿಗಳು ಪ್ರತಿಪಕ್ಷದ ನಾಯಕರು ಹಾಗೂ ಇತರ ರಾಜಕಾರಣಿಗಳ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಹಲವು ಸಂದರ್ಭಗಳಲ್ಲಿ ಇದು ಪ್ರತಿಭಟನೆ ಹಾಗೂ ಕ್ಷಮೆ ಕೇಳುವ ಹಂತದವರೆಗೆ ಬಂದಿರುತ್ತದೆ. ಹೀಗಾಗಿ ರಾಜಕಾರಣಿಗಳ ಆಕ್ಷೇಪಾರ್ಹ ಹೇಳಿಕೆ ವಿಚಾರವನ್ನು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

ರಾಜಕಾರಣಿಗಳ ಆಕ್ಷೇಪಾರ್ಹ ಹೇಳಿಕೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ, ಸಂಸತ್ತು ಹೊಸ ಕಾನೂನಿನ ರಚನೆ ಬಗ್ಗೆ ಯೋಚಿಸಲು ಇದು ಸಕಾಲ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಸೂಚಿಸಿದೆ. ಈ ಬಗ್ಗೆ ಮಂಗಳವಾರ ಮಹತ್ವದ ಹೇಳಿಕೆ ನೀಡಿರುವ ಉನ್ನತ ನ್ಯಾಯಾಲಯವು, “ಸಾಂವಿಧಾನಿಕ ಸಂಸ್ಕೃತಿ”ಯನ್ನೊಂಗೊಂಡ ಸ್ವಯಂ ನಿರ್ಬಂಧವನ್ನು ರಾಜಕಾರಣಿಗಳು ತಮ್ಮಲ್ಲಿ ತಾವು ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದೆ.

ಐವರು ನ್ಯಾಯಾಧೀಶರ ಪೀಠವು, ರಾಜಕಾರಣಿಗಳ ಮಾತಿನಲ್ಲಿ ಗುಣಮಟ್ಟದ ಅವನತಿಗೆ ವಿಷಾದ ವ್ಯಕ್ತಪಡಿಸಿತು. ಹೀಗಾಗಿ ಜನನಾಯಕರಿಗೆ ನಿರ್ದಿಷ್ಟ ಕಾನೂನಿನ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತು. ಅಲ್ಲದೆ ಉನ್ನತ ಕಚೇರಿಗಳಲ್ಲಿ ಇರುವವರು ಕೂಡಾ ಈಗ ಆಕ್ಷೇಪಾರ್ಹ ಭಾಷಣಗಳನ್ನು ಮಾಡುತ್ತಿದರೂ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅದು ಹೇಳಿದೆ.

“ಇಲ್ಲಿಯವರೆಗೆ ಇಂತಹ ಆಕ್ಷೇಪಾರ್ಹ ಬಹಿರಂಗ ಹೇಳಿಕೆಗೆ ಯಾವುದೇ ಕಾನೂನು ಇರಲಿಲ್ಲ. ಇದಕ್ಕೆ ಕಾರಣ, ಇತರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದರ ವಿರುದ್ಧ ಸ್ವಯಂ ನಿರ್ಬಂಧ ಹೇರಿಕೊಳ್ಳಲಾಗಿತ್ತು. ಅಂದರೆ, ನಾಯಕರು ತಮ್ಮ ಮಾತಿನ ಮೇಲೆ ಹಿಡಿತ ಹೊಂದಿದ್ದರು. ಆದರೆ ಈಗ ಅಂತಹ ನಿರ್ಬಂಧಗಳು ನಿಧಾನವಾಗಿ ಸಡಿಲಗೊಳ್ಳುತ್ತಿವೆ. ಮತ್ತೊಬ್ಬರಿಗೆ ನೋವುಂಟುಮಾಡುವಂತಹ ಭಾಷಣಗಳನ್ನು ಮಾಡಲಾಗುತ್ತಿದೆ,” ಎಂದು ನ್ಯಾಯಮೂರ್ತಿಗಳಾದ ಎಸ್‌ ಎ ನಜೀರ್, ಬಿ ಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿ ವಿ ನಾಗರತ್ನ ಅವರನ್ನು ಒಳಗೊಂಡ ಪಂಚಪೀಠವು ಒತ್ತಿ ಹೇಳಿದೆ.

“ರಾಜಕಾರಣಿಗಳನ್ನು ಯಾರೂ ಮೇಲ್ವಿಚಾರಣೆ ಮಾಡುತ್ತಿರುವಂತೆ ತೋರುತ್ತಿಲ್ಲ. ಮತ್ತೊಂದೆಡೆ ಉನ್ನತ ಸ್ಥಾನದಲ್ಲಿರುವ ಇತರರು ಕೂಡಾ ಅವಹೇಳನಕಾರಿ ಹೇಳಿಕೆ ನೀಡಿ ತಪ್ಪಿಸಿಕೊಳ್ಳಬಹುದು. ವಿಶೇಷವಾಗಿ ಉನ್ನತ ಸ್ಥಾನಗಳನ್ನು ಹೊಂದಿರುವ ಜನನಾಯಕರು ಮತ್ತು ಸರ್ಕಾರಿ ನೌಕರರು,” ಎಂದು ನ್ಯಾಯಾಲಯ ಹೇಳಿದೆ.

ಪೀಠದ ಪ್ರಕಾರ, ಸಾರ್ವಜನಿಕ ಕರ್ತವ್ಯದಲ್ಲಿರುವವರಿಗೆ “ಸಾಂವಿಧಾನಿಕ ಸಂಸ್ಕೃತಿ” ಅಂತರ್ಗತವಾಗಿ ಅನ್ವಯಿಸಬೇಕು. ಅಂದರೆ, ಅವರೇ ಖುದ್ದು ನಾಲಗೆಗೆ ಲಗಾಮು ಹಾಕಿಕೊಳ್ಳಬೇಕು. “ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿಗಳು ಅಂತಹ ಹುದ್ದೆಗಳನ್ನು ಹೊಂದಿರುವಾಗ, ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದರ ಬಗ್ಗೆ ಸ್ವಯಂ ನಿರ್ಬಂಧ ಹೊಂದಿರುತ್ತಾರೆ ಎಂಬುದು ಅಲಿಖಿತ ನಿಯಮ. ಪ್ರತಿಯೊಬ್ಬರಿಗೂ ಸಾಂವಿಧಾನಿಕ ಸಂಸ್ಕೃತಿ ಇರಬೇಕಲ್ಲವೇ? ಇದನ್ನು ನಮ್ಮ ರಾಜಕೀಯ ಸಮಾಜ ಮತ್ತು ನಾಗರಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಪೀಠವು ಒತ್ತಿ ಹೇಳಿದೆ.

2017ರಲ್ಲಿ, ಮೂವರು ನ್ಯಾಯಾಧೀಶರ ತ್ರಿಸದಸ್ಯ ಪೀಠವು, ಶಾಸಕರ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಸುತ್ತುವರೆದಿರುವ ಕಾನೂನು ಪ್ರಶ್ನೆಗಳ ರಾಫ್ಟ್ ಅನ್ನು ರೂಪಿಸಿತು. ಆ ಸಮಯದಲ್ಲಿ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಈ ಪ್ರಕರಣ ಹುಟ್ಟಿಕೊಂಡಿತು. ಆಗ ಖಾನ್ ಅವರು ಉನ್ನತ ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದರು.

ಸದ್ಯ ಜನನಾಯಕರ ಮಾತಿಗೆ ಲಗಾಮು ಹಾಕುವ ವಿಚಾರವಾಗಿ ಸಂಸತ್ತಿನಲ್ಲಿ ಕಾನೂನು ರೂಪಿಸುವ ಕುರಿತಾಗಿ, ಪೀಠವು ಈ ವಿಷಯಕ್ಕೆ ಹೆಚ್ಚಿನ ತೀರ್ಪು ಅಗತ್ಯವಿದೆಯೇ ಎಂಬ ಬಗ್ಗೆ ತನ್ನ ಆದೇಶವನ್ನು ಕಾಯ್ದಿರಿಸಿದೆ.

IPL_Entry_Point