ಕನ್ನಡ ಸುದ್ದಿ  /  Karnataka  /  Basavaraj Bommai On Congress Allegations

Basavaraj Bommai: 'ಕಾಂಗ್ರೆಸ್‌ನವರು ಅವರ ವಿಚಾರಗಳಲ್ಲಿ ದಿವಾಳಿಯಾಗಿದ್ದಾರೆ; ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ'

ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ. ಸಂಬಂಧವಿಲ್ಲದ್ದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಈವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರರಹಿತ ಆರೋಪ ಎಂದು ಸಿಎಂ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ (Twitter)

ಬೆಂಗಳೂರು : ಕಾಂಗ್ರೆಸ್‌ನವರು ತಮ್ಮ ವಿಚಾರಗಳಲ್ಲಿ ದಿವಾಳಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗೀತನಕ್ಕೆ ಕನ್ನ ಹಾಕಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವಹಿಸಿರುತ್ತಾರೆ. ಅವರು ಸಮೀಕ್ಷಾ ಕೆಲಸವನ್ನು ಎನ್.ಜಿ.ಓಗಳಿಗೆ ನೀಡಿರುತ್ತಾರೆ. ಇದೇನು ಮೊದಲ ಬಾರಿ ನೀಡಿರುವುದಲ್ಲ. 2018 ರಲ್ಲಿ ಇದ್ದ ಸರ್ಕಾರದ ಕಾಲದಲ್ಲಿಯೂ ನೀಡಿದ್ದಾರೆ. ಎನ್.ಜಿ.ಒ. ಬಿ.ಎಲ್.ಡಿ ದುರ್ಬಳಕೆ ಮಾಡಿದ್ದಾರೆ. ಆದ್ದರಿಂದ ಚುನಾವಣಾ ಆಯೋಗ ನೀಡಿರುವ ಆದೇಶದಿಂದ ಮೊದಲುಗೊಂಡು ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ. ನಿಜ ಹೊರಗೆ ಬರಲಿ ಎಂದರು.

ಆಧಾರರಹಿತ ಆರೋಪ

ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ. ಸಂಬಂಧವಿಲ್ಲದ್ದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಈವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರರಹಿತ ಆರೋಪ ಎಂದರು.

ಆರೋಪವೇನು?

ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ ಆರೋಪಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕೈ ನಾಯಕರು ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ಮತದಾರರ ಮಾಹಿತಿ ಕಳ್ಳತನ ಪ್ರಕರಣದ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕಾಗಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿತ್ತು. ಇದು ಸಿಎಂ ಮತ್ತು ಬಿಬಿಎಂಪಿ ಎಲೆಕ್ಷನ್ ಕಮಿಷನರ್ ಎಲ್ಲರೂ ಸೇರಿ ಮಾಡಿದ ಸಂಚು ಅನಿಸುತ್ತದೆ. ಜಾಹೀರಾತು ನೀಡದೆ ಖಾಸಗಿ ಕಂಪನಿಗೆ ಮತದಾರರ ಪಟ್ಟಿ ಸಂಸ್ಕರಣೆ ಮಾಡಿ ಡಿಲಿಷನ್ ಅಡಿಷನ್ ಮಾಡ್ತಾರೆ. ಚಿಲುಮೆ ಸಂಸ್ಥೆಯವರಿಗೆ ಅನುಭವವೂ ಇಲ್ಲ. ಬಿಎಲ್ಓ- ಬೂತ್ ಲೆವೆಲ್ ಆಫೀಸರ್ ಅಂತ ಅವರಿಗೆ ಐಡಿ ಕಾರ್ಡ್ ನೀಡಿದ್ದಾರೆ. ಪೀಪಲ್ಸ್ ರೆಪ್ರೆಸೆಂಟೇಷನ್ ಆ್ಯಕ್ಟ್ ಪ್ರಕಾರ ಸರ್ಕಾರಿ ನೌಕರರು ಅಲ್ಲದಿರುವವರು ಯಾರೂ ಬಿಲ್‌ಓ ಆಗುವುದಕ್ಕೆ ಸಾಧ್ಯವಿಲ್ಲ. ಈ ಕೃಷ್ಣಪ್ಪ ರವಿಕುಮಾರ್ ಅಕ್ರಮವಾಗಿ ಐಡಿ ಕಾರ್ಡ್ ಕೊಟ್ಟು ನೇಮಕ ಮಾಡಿಕೊಂಡಿದ್ದಾನೆ. ಇದು ಅಕ್ರಮ ದುರ್ಬಳಕೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

ಅನುಮತಿ ರದ್ದು

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಆನ್‌ಲೈನ್ ಅಥವಾ VHA ಮಖಾಂತರ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಆದರೆ, ಈ ಸಂಸ್ಥೆಯು ಪತ್ರದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿಸಿದೆ ಎಂಬ ಆರೋಪದಡಿ ಅನುಮತಿ ರದ್ದುಪಡಿಸಲಾಗಿದೆ. ಸಂಸ್ಥೆಯು ಪತ್ರದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅನುಮತಿ ಹಿಂಪಡೆಯಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

IPL_Entry_Point