KD Movie Update: 17 ವರ್ಷಗಳ ಬಳಿಕ ಕನ್ನಡಕ್ಕೆ ಬಳುಕುವ ಬಳ್ಳಿಯ ಆಗಮನ; ಧ್ರುವ ಸರ್ಜಾ ‘ಕೆಡಿ’ ಚಿತ್ರದಲ್ಲಿ ಕರಾವಳಿ ಬೆಡಗಿ
Feb 28, 2023 04:43 PM IST
17 ವರ್ಷಗಳ ಬಳಿಕ ಕನ್ನಡಕ್ಕೆ ಬಳುಕುವ ಬಳ್ಳಿಯ ಆಗಮನ; ಧ್ರುವ ಸರ್ಜಾ ‘ಕೆಡಿ’ ಚಿತ್ರದಲ್ಲಿ ಕರಾವಳಿ ಬೆಡಗಿ
- ಕ್ರೇಜಿಸ್ಟಾರ್ ಜತೆಗೆ ಸ್ಯಾಂಡಲ್ವುಡ್ಗೆ ಆಗಮಿಸಿದ್ದ ಚೆಲುವೆ ಶಿಲ್ಪಾ ಶೆಟ್ಟಿ ಇದೀಗ, ಅದೇ ಕ್ರೇಜಿಸ್ಟಾರ್ ನಟಿಸುತ್ತಿರುವ ‘ಕೆಡಿ’ ಚಿತ್ರದ ಮೂಲಕ 17 ವರ್ಷದ ಬಳಿಕ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ.
KD Movie Update: ನಿರ್ದೇಶಕ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ‘ಕೆಡಿ’ ಚಿತ್ರ ಶೀರ್ಷಿಕೆ ಟೀಸರ್ ಮೂಲಕವೇ ಸುದ್ದಿಯಲ್ಲಿದೆ. ಸ್ಟಾರ್ ಕಾಸ್ಟ್ ವಿಚಾರವಾಗಿಯೂ ಅಷ್ಟೇ ಟಾಕ್ ಕ್ರಿಯೇಟ್ ಮಾಡಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಖಳನಾಗಿ ಅಬ್ಬರಿಸಲಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅಣ್ಣಯ್ಯಪ್ಪ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಈಗಾಗಲೇ ಹೊರಬಿದ್ದಿದೆ. ಇದೀಗ ಇದೇ ಬಳಗಕ್ಕೆ ಇನ್ನೋರ್ವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಗಮನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
17 ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ..
ಬಾಲಿವುಡ್ ಅಂಗಳದಲ್ಲಿಯೇ ದೊಡ್ಡ ಹೆಸರು ಮಾಡಿರುವ ನಟಿ ಶಿಲ್ಪಾ ಶೆಟ್ಟಿ, ಸೌತ್ನ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿಯೂ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸುದೀರ್ಘ 17 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಚಂದನವನಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅಂದರೆ 1998ರಲ್ಲಿ ರವಿಚಂದ್ರನ್ ಜತೆಗೆ ಪ್ರೀತ್ಸೋದ್ ತಪ್ಪಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದ ಈ ಚೆಲುವೆ ಅದಾದ ಬಳಿಕ ಒಂದಾಗೋಣ ಬಾ ಮತ್ತು ಉಪೇಂದ್ರ ಜತೆಗೆ ಆಟೋ ಶಂಕರ್ ಸಿನಿಮಾದಲ್ಲಿ ನಟಿಸಿದ್ದರು. ಅದೇ ಕೊನೇ ಆ ಬಳಿಕ ಮತ್ತೆಂದೂ ಕನ್ನಡದತ್ತ ಮುಖ ಮಾಡಿರಲಿಲ್ಲ. ಇದೀಗ ‘ಕೆಡಿ’ ಜತೆ ಆಗಮಿಸಲಿದ್ದಾರಂತೆ. ಇನ್ನಷ್ಟೇ ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಬೇಕಿದೆ.
ಚಿತ್ರಕ್ಕಾಗಿ 18ಕೆಜಿ ತೂಕ ಇಳಿಸಿದ ಧ್ರುವ
'ಕೆಡಿ' ಚಿತ್ರಕ್ಕಾಗಿ ನಟ ಧ್ರುವ ಸರ್ಜಾ ಮತ್ತೆ ತೂಕ ಇಳಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತ: ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ''ಧ್ರುವ ಸರ್ಜಾ 23 ದಿನಗಳಲ್ಲಿ 18 ಕಿಲೋ ತೂಕ ಇಳಿಸಿಕೊಂಡು ಕೆಡಿ ವಾರ್ ಫೀಲ್ಡ್ಗೆ ಎಂಟ್ರಿ ಕೊಡಲು'' ರೆಡಿ ಆಗಿದ್ದಾರೆ ಎಂದು ಪ್ರೇಮ್ ಬರೆದುಕೊಂಡಿದ್ದರು. ''ಕೆಡಿ ಚಿತ್ರಕ್ಕೆ ಮುನ್ನ ಕೆಡಿ ಚಿತ್ರದ ನಂತರ'' ಎಂದು ಕ್ಯಾಪ್ಷನ್ ಕೊಟ್ಟು ಧ್ರುವ ಜೊತೆಗೆ ಅಂದು-ಇಂದು ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದರು. ನಟನ ಈ ಅಚ್ಚರಿಯ ಬದಲಾವಣೆಗೆ ಅವರ ಅಭಿಮಾನಿಗಳು ಶಾಕ್ ಆಗಿದ್ದರು.
ಪ್ಯಾನ್ ಇಂಡಿಯಾ ಸಿನಿಮಾ
ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. 70- 80ರ ಕಾಲಘಟ್ಟದ ಭೂಗತ ಜಗತ್ತಿನ ಹಿನ್ನೆಲೆಯುಳ್ಳ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್ ನಿರ್ಮಾಣ ಕೆಲಸ ಶುರುವಾಗಿದ್ದು, ಕೆಲ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ ನಿರ್ದೇಶಕರು.