ಚೆನ್ನೈ ಮ್ಯೂಸಿಕ್ ಶೋ ವಿವಾದದ ಬೆನ್ನಲ್ಲೇ ಎಆರ್ ರೆಹಮಾನ್ ವಿರುದ್ಧ ಮತ್ತೊಂದು ಆರೋಪ
Oct 05, 2023 03:54 PM IST
ಸಂಗೀತ ನಿರ್ದೇಶಕ ಎಆರ್ ರೆಹಮಾನ್ ವಿರುದ್ಧ ಮತ್ತೊಂದು ಆರೋಪ
5 ವರ್ಷಗಳ ಹಿಂದೆ ಸಂಗೀತ ಕಾರ್ಯಕ್ರಮ ನೀಡುತ್ತೇನೆಂದು ಎಆರ್ ರೆಹಮಾನ್ ಹಣ ಪಡೆದು ಅದನ್ನು ವಾಪಸ್ ನೀಡಿಲ್ಲ ಎಂದು ಸರ್ಜನ್ಸ್ ಅಸೋಸಿಯೇಷನ್ ಇಂಡಿಯಾ ಆರೋಪಿಸಿದೆ.
ಚೆನ್ನೈನಲ್ಲಿ ಇತ್ತೀಚೆಗಷ್ಟೇ ಏರ್ಪಡಿಸಿದ್ದ ಎಆರ್ ರೆಹಮಾನ್ ಮ್ಯೂಸಿಕ್ ಶೋನಲ್ಲಿ ಟಿಕೆಟ್ ಇದ್ದರೂ ಕೆಲವರು ಕಾರ್ಯಕ್ರಮ ನೋಡಲಾಗಿರಲಿಲ್ಲ, ಸಾವಿರಾರು ರೂಪಾಯಿ ಖರ್ಚು ಮಾಡಿ ಆಸೆಯಿಂದ ಕಾರ್ಯಕ್ರಮ ನೋಡಲು ಬಂದವರಿಗೆ ನಿರಾಸೆ ಕಾದಿತ್ತು. ಆ ಪ್ರಕರಣದ ಬಗ್ಗೆ ರೆಹಮಾನ್ ಕ್ಷಮೆ ಕೇಳಿದ್ದರು. ಇದೀಗ ಮತ್ತೆ ಅವರು ಹೊಸ ವಿವಾದಕ್ಕೆ ಸಿಲುಕಿದ್ಧಾರೆ.
ಸೆಪ್ಟೆಂಬರ್ 10 ರಂದು ನಡೆದಿದ್ದ ಮ್ಯೂಸಿಕ್ ಶೋ
ಕಳೆದ ಸೆಪ್ಟೆಂಬರ್ 10 ರಂದು ಚೆನ್ನೈನ ಈಸ್ಟ್ ಬೀಚ್ ರೋಡ್ ಬಳಿ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಶೋ ಅನೌನ್ಸ್ ಆಗುತ್ತಿದ್ದಂತೆ ಜನರು ಎಆರ್ ರೆಹಮಾನ್ ಕಾರ್ಯಕ್ರಮವನ್ನು ಲೈವ್ನಲ್ಲಿ ನೋಡಲು ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದರು. ಸಿಲ್ವರ್, ಗೋಲ್ಡ್, ಡೈಮಂಡ್, ಪ್ಲಾಟಿನಂ ಝೋನ್ಗಳಲ್ಲಿ 500-50 ಸಾವಿರ ರೂಪಾಯಿ ಖರ್ಚು ಮಾಡಿ ಟಿಕೆಟ್ ಖರೀದಿಸಿದ್ದರು. ಚೆನ್ನೈ ಮಾತ್ರವಲ್ಲದೆ ಬೆಂಗಳೂರು, ಹೈದಾರಾಬಾದ್ನಿಂದ ಕೂಡಾ ರೆಹಮಾನ್ ಅಭಿಮಾನಿಗಳು ಕಾರ್ಯಕ್ರಮ ನೋಡಲು ತೆರಳಿದ್ದರು.
ಅಭಿಮಾನಿಗಳಿಗೆ ನಿರಾಸೆ
ಆದರೆ ಸಂಜೆ ಕಾರ್ಯಕ್ರಮ ಆರಂಭವಾದರೂ ಟಿಕೆಟ್ ಖರೀದಿಸಿದವರಿಗೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶ ದೊರೆತಿರಲಿಲ್ಲ ಪ್ರೇಕ್ಷಕರು ಜನಜಂಗುಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಮಹಿಳೆಯರು, ವೃದ್ಧರು ಜನಸಂದಣಿಯಲ್ಲಿ ಸಿಲುಕಿ ಹೊರ ಬರಲಾಗದೆ ಪರದಾಡಿದ್ದರು. ಪಾರ್ಕಿಂಗ್ ಅವ್ಯವಸ್ಥೆಯಿಂದ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ಅದೇ ಸಮಯಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಯಾಣಿಸುತ್ತಿದ್ದ ಕಾರು ಕೂಡಾ ಟ್ರಾಫಿಕ್ಗೆ ಸಿಲುಕಿತ್ತು. ತನಿಖೆ ನಡೆಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.
ರೆಹಮಾನ್ ಹಣ ಪಡೆದು ಮೋಸ ಮಾಡಿದ್ದಾರೆಂದು ಆರೋಪ
ಇಷ್ಟೆಲ್ಲಾ ಅವಾಂತರದ ನಡುವೆ ಇದೀಗ ರೆಹಮಾನ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. 5 ವರ್ಷಗಳ ಹಿಂದೆ ಸಂಗೀತ ಕಾರ್ಯಕ್ರಮ ನೀಡುತ್ತೇನೆಂದು ಎಆರ್ ರೆಹಮಾನ್ ಹಣ ಪಡೆದು ಅದನ್ನು ವಾಪಸ್ ನೀಡಿಲ್ಲ ಎಂದು ಸರ್ಜನ್ಸ್ ಅಸೋಸಿಯೇಷನ್ ಇಂಡಿಯಾ ಆರೋಪಿಸಿದೆ. 2018ರಲ್ಲಿ ಎಆರ್ ರೆಹಮಾನ್, ಕಾರ್ಯಕ್ರಮ ನೀಡುತ್ತೇನೆಂದು 29 ಲಕ್ಷ ರೂಪಾಯಿ ಹಣ ನೀಡಿದ್ದರು. ಆದರೆ ಅಂದು ಕಾರ್ಯಕ್ರಮವನ್ನೂ ನೀಡಲಿಲ್ಲ, ಹಣವನ್ನೂ ವಾಪಸ್ ನೀಡಲಿಲ್ಲ ಎಂದು ಈ ಸಂಬಂಧ ರೆಹಮಾನ್ ವಿರುದ್ಧ ದೂರು ನೀಡಲಾಗಿದೆ.
ಆರೋಪ ನಿರಾಕರಿಸಿದ ಎಆರ್ ರೆಹಮಾನ್
ತಮ್ಮ ಮೇಲಿನ ಆರೋಪವನ್ನು ರೆಹಮಾನ್ ಇದನ್ನು ನಿರಾಕರಿಸಿದ್ದಾರೆ. ಇದು ಸುಳ್ಳು ಸುದ್ದಿ, ರೆಹಮಾನ್ ಹೆಸರಿಗೆ ಮಸಿ ಬಳಿಯಲು ಈ ರೀತಿ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ರೆಹಮಾನ್ ವಿರುದ್ಧ ಈ ರೀತಿ ಆರೋಪ ಮಾಡುತ್ತಿರುವುದಕ್ಕೆ ಸರ್ಜನ್ಸ್ ಅಸೋಸಿಯೇಷನ್ ಇಂಡಿಯಾ ಕ್ಷಮೆ ಕೇಳಬೇಕು, ಜೊತೆಗೆ 10 ಕೋಟಿ ರೂಪಾಯಿ ಪರಿಹಾರ ಕೂಡಾ ನೀಡಬೇಕು ಎಂದು ಬೇಡಿಕೆ ಇಟ್ಟಿದೆ.