Janaki Samsara: ‘ಜಾನಕಿ ಸಂಸಾರ’ಕ್ಕೆ ಹುಳಿ ಹಿಂಡಲು ಬಂದ ಕಾವ್ಯಾ ಶಾಸ್ತ್ರಿ! ಹೊಸ ಧಾರಾವಾಹಿಯಲ್ಲಿ ಖಳನಾಯಕಿಯಾದ ‘ರಾಧಿಕಾ’
May 02, 2024 02:19 PM IST
Janaki Samsara: ‘ಜಾನಕಿ ಸಂಸಾರ’ಕ್ಕೆ ಹುಳಿ ಹಿಂಡಲು ಬಂದ ಕಾವ್ಯಾ ಶಾಸ್ತ್ರಿ! ಹೊಸ ಧಾರಾವಾಹಿಯಲ್ಲಿ ಖಳನಾಯಕಿಯಾದ ‘ರಾಧಿಕಾ’
- ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಸೀರಿಯಲ್ ಶುರುವಾಗುತ್ತಿದೆ. ಜಾನಕಿ ಸಂಸಾರ ಹೆಸರಿನ ಆ ಹೊಸ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಆಗಮಿಸಿದ್ದಾರೆ ಕಾವ್ಯಾ ಶಾಸ್ತ್ರಿ.
Janaki Samsara Serial: ನಟಿ ಕಾವ್ಯಾ ಶಾಸ್ತ್ರಿ ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದವರು. ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ಶುಭ ವಿವಾಹ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಕಾವ್ಯಾ, ಬಿಗ್ ಬಾಸ್ ಸೀಸನ್ 4ರಲ್ಲಿಯೂ ಸ್ಪರ್ಧಿಯಾಗಿ ಮನೆ ಮಾತಾಗಿದ್ದರು. ಇತ್ತೀಚೆಗಷ್ಟೇ ಉದಯ ಟಿವಿಯಲ್ಲಿ ಪ್ರಸಾರ ಕಂಡ ರಾಧಿಕಾ ಧಾರಾವಾಹಿಯಲ್ಲೂ ನಾಯಕಿಯಾಗಿ ಗಮನ ಸೆಳೆದಿದ್ದರು. ಈಗ ಹೊಸ ವರ್ಷನ್ ಜತೆಗೆ ಆಗಮಿಸುತ್ತಿದ್ದಾರೆ. ನಾಯಕಿ ಬದಲು ಖಳನಾಯಕಿಯ ಅವತಾರದಲ್ಲಿ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಸೀರಿಯಲ್ ಶುರುವಾಗುತ್ತಿದೆ. ಜಾನಕಿ ಸಂಸಾರ ಹೆಸರಿನ ಆ ಹೊಸ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಆಗಮಿಸಿದ್ದಾರೆ ಕಾವ್ಯಾ ಶಾಸ್ತ್ರಿ. ಈ ಸೀರಿಯಲ್ ಮೂಲಕ 13 ವರ್ಷಗಳ ಬಳಿಕ ಕಿರುತೆರೆಗೆ ಆಗಮಿಸುತ್ತಿದ್ದಾರೆ ನಟಿ ಅಂಜನಾ ಶ್ರೀನಿವಾಸ್. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಕೃಷ್ಣ ರುಕ್ಮಿಣಿ ಸೀರಿಯಲ್ ಪ್ರಸಾರವಾಗುತ್ತಿತ್ತು. ಈಗ ಅದೇ ಅಂಜನಾ ಶ್ರೀನಿವಾಸ್, ಜಾನಕಿ ಸಂಸಾರ ಧಾರಾವಾಹಿಗೆ ನಾಯಕಿಯಾಗಿದ್ದಾರೆ.
ತುಂಬು ಸಂಸಾರದ ಕಥೆ
ಹೊಸ ಹೊಸ ಸೀರಿಯಲ್ ಮತ್ತು ಶೋಗಳ ಮೂಲಕ ಕನ್ನಡಿಗರನ್ನು ಸೆಳೆಯುತ್ತಿರುವ ಸ್ಟಾರ್ ಸುವರ್ಣ, ಈಗ ಜಾನಕಿ ಸಂಸಾರದ ಕಥೆ ಹೇಳಲು ಬರ್ತಿದೆ. ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರು ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ.
ಇಡೀ ಮನೆಯನ್ನು ಮನೆ ಮಂದಿಯನ್ನು ಸದಾಕಾಲ ಒಗ್ಗಟ್ಟಾಗಿಡಲು ಜಾನಕಿ ಬಯಸುತ್ತಾಳೆ. ಹಾಗೆ ಬಯಸುವ ಜಾನಕಿಯ ಸಂಸಾರವನ್ನು ಹಾಳು ಮಾಡಲು, ಮನೆ ಒಡೆಯುವ ವ್ಯಕ್ತಿಯ ಆಗಮನವಾಗುತ್ತದೆ. ಆಗ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಕಲಾವಿದರು ಯಾರ್ಯಾರು?
'ಜಾನಕಿ ಸಂಸಾರ' ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, 'ಕೃಷ್ಣರುಕ್ಮಿಣಿ' ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು 13 ವರ್ಷಗಳ ಬಳಿಕ ಮತ್ತೊಮ್ಮೆ ರಂಜಿಸಲು 'ಜಾನಕಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೂರಜ್ ಹೊಳಲು, ಕಾವ್ಯಾ ಶಾಸ್ತ್ರೀ, ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.
ಯಾವಾಗಿಂದ ಶುರು?
ನೋವು-ನಲಿವನು ತೂಗೋ ಈ ಹೊಸ ಧಾರಾವಾಹಿ ಜಾನಕಿ ಸಂಸಾರ ಇದೇ ಮೇ 6ರ ಸೋಮವಾರದಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಹಿಂದೆ ಇದೇ 8 ಗಂಟೆಯ ಸ್ಲಾಟ್ಗೆ ನಮ್ಮ ಲಚ್ಚಿ ಸೀರಿಯಲ್ ಪ್ರಸಾರವಾಗುತ್ತಿತ್ತು. ಈಗ ಅದೇ ಸಮಯಕ್ಕೆ ಜಾನಕಿ ಸಂಸಾರ ಸೀರಿಯಲ್ ಎಂಟ್ರಿಕೊಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಧಾರಾವಾಹಿಯ ಪ್ರೋಮೋಕ್ಕೆ ನೋಡುಗರಿಂದಲೂ ಮೆಚ್ಚುಗೆ ಸಿಕ್ಕಿದೆ.