Kaviraj: ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು; ಮಾಡಿದ್ದುಣ್ಣೋ ಮಾರಾಯ ಅರ್ಥದಲ್ಲಿ ಗೀತಸಾಹಿತಿ ಕವಿರಾಜ್ ಬರಹ
May 14, 2023 03:21 PM IST
ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು; ಮಾಡಿದ್ದುಣ್ಣೋ ಮಾರಾಯ ಅರ್ಥದಲ್ಲಿ ಕವಿರಾಜ್ ಬರಹ
- ಪದೇ ಪದೇ ನಾಡಿನ ಶಾಂತಿ ಕದಡಿದ್ದು, ಶಾಲೆ – ಪಠ್ಯಪುಸ್ತಕಗಳಲ್ಲೂ ರಾಜಕೀಯ ತಂದು ಮಲೀನಗೊಳಿಸಿದ್ದು, ಕುವೆಂಪು , ಬಸವಣ್ಣ, ಅಂಬೇಡ್ಕರ್, ಅವರಂತಹ ಮಹನೀಯರನ್ನು ಅವಮಾನಿಸಿದ್ದು. ಧರ್ಮ – ದೇವರು ಎಲ್ಲವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು.. ಹೀಗೆ ಬಿಜೆಪಿಯ ಸೋಲಿಗೆ ಹತ್ತು ಹಲವು ಕಾರಣ ಕೊಟ್ಟಿದ್ದಾರೆ ಚಿತ್ರಸಾಹಿತಿ ಕವಿರಾಜ್.
Karnataka Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೆ, ಬಿಜೆಪಿ ಸೋತು ಸುಣ್ಣವಾಗಿದೆ. ಯಾರ ಬೆಂಬಲ ಪಡೆಯದೇ ಸ್ಪಷ್ಟ ಬಹುಮತ ಗಿಟ್ಟಿಸಿಕೊಂಡ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಕಾತರದಲ್ಲಿದೆ. ಇತ್ತ ಸೋತ ಬಿಜೆಪಿ ನಾಯಕರು, ನಾಡಿನ ಜನ ನೀಡಿದ ತೀರ್ಪಿಗೆ ತಲೆಬಾಗಿ, ಮುಂದಿನ ಚುನಾವಣೆಗಳಿಗೆ ನಮ್ಮ ಹೋರಾಟ ಮುಂದುವರಿಸಲಿದ್ದೇವೆ ಎಂದಿದ್ದಾರೆ. ಹೀಗಿರುವಾಗಲೇ ಬಿಜೆಪಿ ಸೋಲಿನ ಬಗ್ಗೆ ಚಿತ್ರಸಾಹಿತಿ ಕವಿರಾಜ್ ಹೀಗೆ ಬರೆದುಕೊಂಡಿದ್ದಾರೆ.
ಹೀಗಿದೆ ಕವಿರಾಜ್ ಬರಹ..
ಪದೇ ಪದೇ ನಾಡಿನ ಶಾಂತಿ ಕದಡಿದ್ದು, ಶಾಲೆ – ಪಠ್ಯಪುಸ್ತಕಗಳಲ್ಲೂ ರಾಜಕೀಯ ತಂದು ಮಲೀನಗೊಳಿಸಿದ್ದು, ಕುವೆಂಪು , ಬಸವಣ್ಣ, ಅಂಬೇಡ್ಕರ್, ಅವರಂತಹ ಮಹನೀಯರನ್ನು ಅವಮಾನಿಸಿದ್ದು. ಧರ್ಮ – ದೇವರು ಎಲ್ಲವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು, ಕನ್ನಡತನ, ಕನ್ನಡದ ಆಸ್ಮಿತೆಗಳ ವಿರುದ್ಧ ನಿಂತಿದ್ದು , ಹಿಂದಿ ಹೇರಿಕೆ ಬೆಂಬಲಿಸಿದ್ದು, ಈ ಮಣ್ಣಿನ ಹೋರಾಟಗಾರರನ್ನು ಕಡೆಗಣಿಸಿ, ಶಿವಾಜಿ, ಸಾವರ್ಕರ್ ಅಂತಹ ಉತ್ತರದ ಹೋರಾಟಗಾರರನ್ನು ಮೆರೆಸಿದ್ದು.
ಹಿಂದೆಂದು ಕಂಡಿರದ ಭ್ರಷ್ಟಾಚಾರ -ಅಹಂಕಾರದ ಆಡಳಿತ, ಬೆಲೆ ಏರಿಕೆಗಳಿಂದ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು, ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜನ ಉಗಿದ ನಂತರ ಯೂ ಟರ್ನ್ ಹೊಡೆದಿದ್ದು, ಕರೊನಾದಂತ ವಿಕೋಪದ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ಹೊಣೆಗೇಡಿತನ ತೋರಿದ್ದು, ಅಮಾಯಕ ಯುವಕರ ಹೆಣಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು.
ನಾಗಪುರ ನಿರ್ದೇಶಿತ ಮೂಲಭೂತವಾದದ ಪ್ರಯೋಗಗಳಿಗೆ ಕರ್ನಾಟಕವನ್ನು ಪ್ರಯೋಗಶಾಲೆಯಾಗಿಸಿದ್ದು, ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಂತ ಅನೈತಿಕ ರಾಜಕಾರಣದಿಂದ ರಾಷ್ಟ್ರಮಟ್ಟದಲ್ಲಿ ನಾಡಿನ ಗೌರವ ಹಾಳುಮಾಡಿದ್ದು, ವಿರೋಧಿಸಿದವರನ್ನು ಹೆದರಿಸಲು ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡಿದ್ದು ಇವೆಲ್ಲವುಗಳ ವಿರುದ್ಧ ಕರ್ನಾಟಕದ ಮತದಾರರು ಜಾಗೃತನಾಗಿ ತೀರ್ಪು ನೀಡಿದ್ದಾರೆ.
ಕೇಂದ್ರ ನಾಯಕರ ಅಬ್ಬರದ ರ್ಯಾಲಿಯಿಂದ ಅಲೆ ಸೃಷ್ಟಿಯಾಗಿಬಿಡುತ್ತೆ ಎಂಬ ಭ್ರಮೆ, ಹಣ ಬಲದ ಧಿಮಾಕು, ಜಾತಿ ರಾಜಕೀಯ, ದ್ವೇಷ ಭಾಷಣ ಇವಕ್ಕೆಲ್ಲಾ ಸೊಪ್ಪು ಹಾಕದ ಕರುನಾಡಿನ ಮತದಾರರ ಪ್ರಜ್ಞಾವಂತಿಕೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಅತಂತ್ರ ಫಲಿತಾಂಶ ಕೊಟ್ಟರೇ ಅನೈತಿಕ ರಾಜಕಾರಣದ ರೂವಾರಿಗಳು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡು ಹಣಬಲ, ಅಧಿಕಾರ ಬಲದಿಂದ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುತ್ತಾರೆ ಎಂಬ ಸ್ಪಷ್ಟ ಅರಿವು ಮತದಾರ ಪ್ರಭುಗಳಿಗೆ ಇದೆ. ಹಾಗಾಗಿಯೇ ನಿರ್ಣಾಯಕ ಫಲಿತಾಂಶ ನೀಡಿ ಯಾರ್ಯಾರು ಎಲ್ಲಿರಬೇಕು ಎಂದು ಖಚಿತವಾಗಿ ತೋರಿಸಿರುವ ಮತದಾರರು ಅಭಿನಂದನಾರ್ಹರು. ಮತದಾರರ ಪ್ರಜ್ಞಾವಂತಿಕೆ ಮತ್ತು ಪ್ರಜಾಪ್ರಭುತ್ವ ಹೀಗೆ ಪ್ರಬುದ್ಧವಾಗುತ್ತ ಚಿರಾಯುವಾಗಲಿ.