ಎಆರ್ ರೆಹಮಾನ್ ಚೆನ್ನೈ ಕಾನ್ಸರ್ಟ್ ಅವ್ಯವಸ್ಥೆ; ಇಬ್ಬರು ಐಪಿಎಸ್ ಅಧಿಕಾರಿಗಳ ಎತ್ತಂಗಡಿ
Sep 12, 2023 03:16 PM IST
ಭಾನುವಾರ ಸಂಜೆ ಚೆನ್ನೈನಲ್ಲಿ ನಡೆದಿದ್ದ ಎಆರ್ ರೆಹಮಾನ್ ಕಾನ್ಸರ್ಟ್
ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆ ಬಗ್ಗೆ ಅರಿತ ತಮಿಳುನಾಡು ಸರ್ಕಾರ ಅಸಮಾಧಾನ ಹೊರ ಹಾಕಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಇಬ್ಬರು ಅಧಿಕಾರಿಗಳನ್ನು ವೇಟಿಂಗ್ ಲಿಸ್ಟ್ಗೆ ವರ್ಗಾಯಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಭಾನುವಾರ ಚೆನ್ನೈನಲ್ಲಿ ನಡೆದ ಎಆರ್ ರೆಹಮಾನ್ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಉಂಟಾಗಿದ್ದ ಅವ್ಯವಸ್ಥೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಆರೋಪದ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ.
ಭಾನುವಾರ ಸಂಜೆ ನಡೆದಿದ್ದ ಕಾರ್ಯಕ್ರಮ
ಭಾನುವಾರ ಸಂಜೆ ಚೆನ್ನೈನ ಈಸ್ಟ್ ಬೀಚ್ ರೋಡ್ ಬಳಿ ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಕಾನ್ಸರ್ಟ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಅನೌನ್ಸ್ ಆದಾಗಲೇ ಜನರು ಎಆರ್ ರೆಹಮಾನ್ ಕಾರ್ಯಕ್ರಮವನ್ನು ಲೈವ್ನಲ್ಲಿ ನೋಡಲು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಸಿಲ್ವರ್, ಗೋಲ್ಡ್, ಡೈಮಂಡ್, ಪ್ಲಾಟಿನಂ ಝೋನ್ಗಳಲ್ಲಿ 500 ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಿ ಟಿಕೆಟ್ ಖರೀದಿಸಿದ್ದರು. ಬೆಂಗಳೂರಿನಿಂದ ಕೂಡಾ ರೆಹಮಾನ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ತೆರಳಿದ್ದರು.
ಸೋಷಿಯಲ್ ಮೀಡಿಯಾ ಮೂಲಕ ಜನರ ಆಕ್ರೋಶ
ಆದರೆ ಸಂಜೆ ಕಾರ್ಯಕ್ರಮ ಆರಂಭವಾದರೂ ಟಿಕೆಟ್ ಖರೀದಿಸಿದವರಿಗೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶ ದೊರೆತಿರಲಿಲ್ಲ. ಹೇಗೋ ದೂರದಲ್ಲೇ ನಿಂತು ಕಾರ್ಯಕ್ರಮ ನೋಡೋಣ ಎಂದರೆ ಆಡಿಯೋ ಕೂಡಾ ಸರಿ ಇರಲಿಲ್ಲ. ಕಾರ್ಯಕ್ರಮದ ಸ್ಥಳದಲ್ಲಿ ನಿಗದಿಗಿಂತ ಮಿತಿ ಮೀರಿ ಪಾಸ್ಗಳನ್ನು ಮಾರಾಟ ಮಾಡಿದ್ದರಿಂದ ಅಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದರು. ಆಯೋಜಕರ ಬಗ್ಗೆ ಜನರು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರೇಕ್ಷಕರು ಜನಜಂಗುಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಮಹಿಳೆಯರು, ವೃದ್ಧರು ಜನಸಂದಣಿಯಲ್ಲಿ ಸಿಲುಕಿ ಹೊರ ಬರಲಾಗದೆ ಪರದಾಡಿದ್ದರು.
ಟ್ರಾಫಿಕ್ನಲ್ಲಿ ಸಿಲುಕಿದ್ದ ಸಿಎಂ ಎಂಕೆ ಸ್ಟಾಲಿನ್ ಕಾರು
ಅಷ್ಟೇ ಅಲ್ಲದೆ, ಪಾರ್ಕಿಂಗ್ ಅವ್ಯವಸ್ಥೆಯಿಂದ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಡನೆಮ್ಮೆಲಿಯಲ್ಲಿ ನಡೆದ ಆಪ್ತರೊಬ್ಬರ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡು ಚೆನ್ನೈಗೆ ಹಿಂತಿರುಗುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಯಾಣಿಸುತ್ತಿದ್ದ ಕಾರು ಕೂಡಾ ಟ್ರಾಫಿಕ್ಗೆ ಸಿಲುಕಿತ್ತು. ನಂತರ ತಮಿಳುನಾಡು ಡಿಜಿಪಿ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದರು.
ಇಬ್ಬರು ಐಪಿಎಸ್ ಅಧಿಕಾರಿಗಳ ಎತ್ತಂಗಡಿ
ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆ ಬಗ್ಗೆ ಅರಿತ ತಮಿಳುನಾಡು ಸರ್ಕಾರ ಅಸಮಾಧಾನ ಹೊರ ಹಾಕಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಇಬ್ಬರು ಅಧಿಕಾರಿಗಳನ್ನು ವೇಟಿಂಗ್ ಲಿಸ್ಟ್ಗೆ ವರ್ಗಾಯಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರ ಪ್ರಕಾರ ಚೆನ್ನೈ ತಂಬರಮ್ನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಆಯುಕ್ತೆ ದೀಪಾ ಸತ್ಯನ್, ಪೂರ್ವ, ಚೆನ್ನೈ ಮೆಟ್ರೋಪಾಲಿಟನ್ ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ ದಿಶಾ ಮಿತ್ತಲ್ ಅವರನ್ನು ಮುಂದಿನ ಸೂಚನೆವರೆಗೂ ವೇಟಿಂಗ್ ಲಿಸ್ಟ್ಗೆ ವರ್ಗಾಯಿಸಲಾಗಿದೆ. ಚೆನ್ನೈನ ಜಾರಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ ಆದರ್ಶ್ ಬಚೇರಾ ಅವರನ್ನು ತಿರುನೆಲ್ವೇಲಿ ಪೂರ್ವದ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.