ಅಬ್ಬಬ್ಬಾ ಸೂಪರ್... ಬೆಳಗಾವಿಯ ಫೇಮಸ್ ದುರ್ಗಾ ಹೋಟೆಲ್ ಪೂರಿ -ಬಾಜಿ ಸವಿದ ಅಭಿಷೇಕ್ ಅಂಬರೀಶ್
Nov 21, 2023 12:21 PM IST
ಅಬ್ಬಬ್ಬಾ ಸೂಪರ್... ಕುಂದಾನಗರಿ ಬೆಳಗಾವಿಯ ಫೇಮಸ್ ದುರ್ಗಾ ಹೋಟೆಲ್ ಪೂರಿ -ಬಾಜಿ ಸವಿದ ಅಭಿಷೇಕ್ ಅಂಬರೀಶ್
- Bad manners movie Promotion: ಬ್ಯಾಡ್ ಮ್ಯಾನರ್ಸ್ ಸಿನಿಮಾದ ಪ್ರಚಾರದ ಗುಂಗಿನಲ್ಲಿದ್ದಾರೆ ನಟ ಅಭಿಷೇಕ್ ಅಂಬರೀಶ್. ಈ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಗೆ ತಂಡದ ಜತೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಫೇಮಸ್ ಪೂರಿ- ಬಾಜಿ ಸವಿದಿದ್ದಾರೆ.
Abhishek Ambareesh: ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದುನಿಯಾ ಸೂರಿ ಮತ್ತು ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ಚಿತ್ರಕ್ಕೆ ಪ್ರೇಕ್ಷಕ ಸಹ ಕಾಯುತ್ತಿದ್ದಾನೆ. ಈಗಾಗಲೇ ಟ್ರೇಲರ್ ಮೂಲಕ ಧಮಾಕಾ ಸೃಷ್ಟಿಸಿರುವ ಈ ಸಿನಿಮಾ, ಪ್ರಚಾರದ ಕೆಲಸದಲ್ಲೂ ಬಿಜಿಯಾಗಿದೆ. ಕರ್ನಾಟಕ ರೌಂಡ್ಸ್ ಹಾಕುತ್ತಿದ್ದಾರೆ ಚಿತ್ರದ ನಾಯಕ ಅಭಿಷೇಕ್ ಅಂಬರೀಶ್. ಈ ನಡುವೆ ಕುಂದಾನಗರಿ ಬೆಳಗಾವಿಗೆ ಆಗಮಿಸಿದ್ದಾರೆ.
ಹೀಗೆ ಪ್ರಚಾರದ ಸಲುವಾಗಿ ಬೆಳಗಾವಿಗೆ ಆಗಮಿಸುತ್ತಿದ್ದಂತೆ, ಮೊದಲು ಬೆಳಗಾವಿಯಲ್ಲಿ ಉಪಹಾರಕ್ಕೆ ಒಳ್ಳೇ ಹೋಟೆಲ್ ಹುಡುಕಿದ್ದಾರೆ. ಆಗ ಅವರಿವರಿಂದ ಅವರಿಗೆ ಸಿಕ್ಕ ಹೆಸರು ದುರ್ಗಾ ದರ್ಶಿನಿ ಹೋಟೆಲ್. ಆಪ್ತರ ಜತೆಗೆ ನೇರವಾಗಿ ಹೋಟೆಲ್ಗೆ ಹೋಗಿ ಪೂರಿ ಬಾಜಿ ಸವಿದಿದ್ದಾರೆ. ಕಳೆದ 60 ವರ್ಷಗಳಿಂದ ಈ ಹೋಟೆಲ್ ನಡೆಸುತ್ತ ಬರಲಾಗುತ್ತಿದೆ. ತುಂಬ ಇಷ್ಟಪಟ್ಟೇ ಪೂರಿ ಸವಿದಿದ್ದಾರೆ ಅಭಿಷೇಕ್.
ಊಟದ ವಿಚಾರದಲ್ಲಿ ನಟ ಅಭಿಷೇಕ್ ತುಂಬ ಉತ್ಸಾಹಿ. ತಾವು ಹೋಗುವ ಸ್ಥಳದಲ್ಲಿ, ಅಲ್ಲಿನ ವಿಶೇಷ ಖಾದ್ಯಗಳು ಏನು ಸಿಗುತ್ತವೆ ಎಂಬುದನ್ನೇ ಅವರು ಹುಡುಕಾಡುತ್ತಾರೆ. ಇದೀಗ ಬೆಳಗಾವಿಯಲ್ಲಿ ಆಗಮಿಸಿ ಇಲ್ಲಿನ ಹಳೇ ಹೋಟೆಲ್ನಲ್ಲಿ ಪೂರಿ ಟೇಸ್ಟ್ ಮಾಡಿದ್ದಾರೆ.
ಮತ್ತೊಂದು ಕಡೆ ಅಭಿಷೇಕ್ ಅಂಬರೀಶ್ ಆಗಮಿಸಿದ್ದಾರೆ ಎನ್ನುತ್ತಿದ್ದಂತೆ, ಸಾಕಷ್ಟು ಮಂದಿ ಅಭಿಮಾನಿಗಳು ಹೋಟೆಲ್ ಬಳಿ ಜಮಾಯಿಸಿದ್ದರು. ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಇದೇ ವೇಳೆ ಹೋಟೆಲ್ ಮುಂಭಾಗದಲ್ಲಿ ಅಭಿಷೇಕ್ಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನವನ್ನೂ ಮಾಡಿದರು.
ಅಂದಹಾಗೆ ಕೆ.ಎಂ.ಸುಧೀರ್ ನಿರ್ಮಾಣದ, ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟ್ರೇಲರ್ ದೀಪಾವಳಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದರು. ಸುಮಲತ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ಅವಿವಾ ಅಭಿಷೇಕ್, ವಿನೋದ್ ಪ್ರಭಾಕರ್, ವಿಕ್ರಮ್ ರವಿಚಂದ್ರನ್, ಧನ್ವೀರ್ ಮುಂತಾದವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದರು.
ದರ್ಶನ್ ಬಗ್ಗೆ ಅಭಿ ಮನದಾಳ
“ತುಂಬ ಸಾಫ್ಟ್ ಮನುಷ್ಯ. ತುಂಬ ಸೆನ್ಸಿಟಿವ್.. ಆ ಸೆನ್ಸಿಟಿವ್ ಗುಡ್ ಆಗಿರಬಹುದು, ಬ್ಯಾಡ್ ಆಗಿರಲೂ ಬಹುದು. ತುಂಬ ಜೆನ್ಯೂನ್. ಯಾವುದೇ ಥರದ ಮುಚ್ಚುಮರೆ ಇಲ್ಲ. ಅದೂ ಒಮ್ಮೊಮ್ಮೆ ಒಳ್ಳೆಯದಾಗಬಹುದು, ಕೆಟ್ಟದ್ದಾಗಬಹುದು, ಅದನ್ನು ತೆಗೆದುಕೊಳ್ಳುವವರ ಮೇಲೆ ಅದು ನಿರ್ಧರಿತವಾಗಿರುತ್ತದೆ. ನಾವು ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇವೆ. ಅವರು ಮಾಡೋದೆಲ್ಲ ಗುಡ್ ಅನಿಸುತ್ತೆ. ಆ ವ್ಯಕ್ತಿಯ ಹಾರ್ಟ್ ಇದೆಯಲ್ಲ ಅದು ತುಂಬ ಜೆನ್ಯೂನ್. ಮನುಷ್ಯ ಒರಟಿರಬಹುದು. ಅಲ್ಲಿ ಇಲ್ಲಿ ಒಂಚೂರು ರಫ್ ಅನಿಸಬಹುದು. ಆದರೆ ಪ್ರಾಮಾಣಿಕ ಹೃದಯವದು. ಮಗುವಿನಂಥ ಮನಸ್ಸು. ಅದನ್ನು ನೀವು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು” ಎಂದಿದ್ದಾರೆ.
ಯಶ್ ಬಗ್ಗೆ ಅಭಿಷೇಕ್ ಮಾತು
“ತುಂಬ ಹಾರ್ಡ್ವರ್ಕಿಂಗ್.. ಕನಸುಗಾರ. ಯೋಚನಾಲಹರಿಯೇ ಬೇರೆ. ನಾವು ಸಾಮಾನ್ಯವಾಗಿ ಸಿನಿಮಾ, ಸಕ್ಸಸ್ ಅಂತ ನಾವು ವಿಚಾರ ಮಾಡಿದರೆ, ಅದನ್ನು ಮೀರಿ ಲೆಗೆಸಿ ಬಗ್ಗೆ ಅವರು ಯೋಚನೆ ಮಾಡುತ್ತಾರೆ. ಇದರಿಂದ ಇಂಡಸ್ಟ್ರಿಗೆ ನನ್ನ ಕೊಡುಗೆ ಏನು ಎಂಬುದನ್ನು ವಿಚಾರ ಮಾಡುತ್ತಾರೆ. ಇಂಡಸ್ಟ್ರಿಗೆ ನಾನು ಏನನ್ನಾದರೂ ನೀಡಬೇಕೆಂಬ ಥಾಟ್ ಸಾಮಾನ್ಯವಾಗಿ ಎಲ್ಲರಿಗೂ ಬರಲ್ಲ. ಆ ವಿಷ್ಯದಲ್ಲಿ ನಾನು ಇಂಡಸ್ಟ್ರಿಗೆ ಏನನ್ನಾದರೂ ನೀಡಬೇಕೆಂದು ಹಾತೊರೆಯುತ್ತಿರುತ್ತಾರೆ. ಇದು ಅವರ ಗುಡ್ ಮ್ಯಾನರ್ಸ್. ಬ್ಯಾಡ್ ಮ್ಯಾನರ್ಸ್ ಏನು ಅಂದರೆ, ಅವರ ಮುಂದಿನ ಸಿನಿಮಾ ಬಗ್ಗೆ ನನಗೂ ಹೇಳಿಲ್ಲ. ಅಣ್ಣ ತಮ್ಮ ಆಗಿದ್ದುಕೊಂಡು, ನನಗೂ ಅದರ ಬಗ್ಗೆ ಒಂದು ಮಾತು ಹೇಳಿಲ್ಲ” ಎಂದು ಯಶ್ ಬಗ್ಗೆ ಮಾತನಾಡಿದ್ದಾರೆ ಅಭಿ.