ದರ್ಶನ್ ಈ ವಿಚಾರದಲ್ಲಿ ಗುಡ್, ಯಶ್ ಈ ವಿಷ್ಯದಲ್ಲಿ ಬ್ಯಾಡ್; ಜೋಡೆತ್ತುಗಳನ್ನು ವರ್ಣಿಸಿದ ಅಭಿಷೇಕ್ ಅಂಬರೀಶ್
Nov 08, 2023 01:43 PM IST
ದರ್ಶನ್ ಈ ವಿಚಾರದಲ್ಲಿ ಗುಡ್, ಯಶ್ ಈ ವಿಷ್ಯದಲ್ಲಿ ಬ್ಯಾಡ್; ಜೋಡೆತ್ತುಗಳನ್ನು ವರ್ಣಿಸಿದ ಅಭಿಷೇಕ್ ಅಂಬರೀಶ್
- ನಟ ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ. ಪ್ರಮೋಷನ್ ಕೆಲಸದಲ್ಲೂ ತಂಡ ಬಿಜಿಯಾಗಿದೆ. ಈ ನಡುವೆ ಇದೇ ಸಿನಿಮಾದ ಪ್ರಚಾರದ ವೇಳೆ ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಬಗ್ಗೆಯೂ ಮಾತನಾಡಿದ್ದಾರೆ.
Abhishak Ambareesh: ಅಭಿಷೇಕ್ ಅಂಬರೀಶ್ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ನಟ ದರ್ಶನ್ ಹಾಜರಿ ಇದ್ದೇ ಇರುತ್ತದೆ. ಅದೇ ರೀತಿ ನಟ ಯಶ್ ಸಹ ಅಲ್ಲಿ ಕಾಣಿಸುತ್ತಾರೆ. ಕಳೆದ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪರವಾಗಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ಮಾಡಿದ್ದರು ದರ್ಶನ್ ಮತ್ತು ಯಶ್. ಈ ಇಬ್ಬರನ್ನು ಆವತ್ತೇ ಜೋಡೆತ್ತು ಎಂದು ಬಿಂಬಿಸಲಾಗಿತ್ತು. ಇದೀಗ ಇದೇ ಜೋಡೆತ್ತುಗಳ ಬಗ್ಗೆ ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.
ಇನ್ನೇನು ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಗೆ ಹತ್ತಿರ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದ ಕೆಲಸದಲ್ಲೂ ಅಭಿಷೇಕ್ ಅಂಬರೀಶ್ ಬಿಜಿಯಾಗಿದ್ದಾರೆ. ಸಿನಿಮಾ ಸೇರಿ ಹಲವು ವಿಚಾರಗಳ ಬಗ್ಗೆಯೂ ತಮಗನಿಸಿದ್ದನ್ನು ಹೇಳುತ್ತಿದ್ದಾರೆ. ಹೀಗಿರುವಾಗಲೇ ದರ್ಶನ್ ಮತ್ತು ಯಶ್ ಬಗ್ಗೆಯೂ ಅಭಿ ಬಳಿ ಪ್ರಶ್ನೆ ಬಂದಿದೆ. ಈ ಬಗ್ಗೆ ಅಭಿಷೇಕ್ ನೀಡಿದ ಉತ್ತರ ಹೀಗಿದೆ.
ದರ್ಶನ್ ಬಗ್ಗೆ ಅಭಿ ಮಾತು
ನಿಮ್ಮ ಪ್ರಕಾರ ದರ್ಶನ್ ಬಗ್ಗೆ ನಿಮ್ಮ ಗುಡ್ ಮ್ಯಾನರ್ಸ್, ಬ್ಯಾಡ್ ಮ್ಯಾನರ್ಸ್ ಏನು ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರ ನೀಡಿದ ಅಭಿ, “ತುಂಬ ಸಾಫ್ಟ್ ಮನುಷ್ಯ. ತುಂಬ ಸೆನ್ಸಿಟಿವ್.. ಆ ಸೆನ್ಸಿಟಿವ್ ಗುಡ್ ಆಗಿರಬಹುದು, ಬ್ಯಾಡ್ ಆಗಿರಲೂ ಬಹುದು. ತುಂಬ ಜೆನ್ಯೂನ್. ಯಾವುದೇ ಥರದ ಮುಚ್ಚುಮರೆ ಇಲ್ಲ. ಅದೂ ಒಮ್ಮೊಮ್ಮೆ ಒಳ್ಳೆಯದಾಗಬಹುದು, ಕೆಟ್ಟದ್ದಾಗಬಹುದು, ಅದನ್ನು ತೆಗೆದುಕೊಳ್ಳುವವರ ಮೇಲೆ ಅದು ನಿರ್ಧರಿತವಾಗಿರುತ್ತದೆ”
“ನಾವು ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇವೆ. ಅವರು ಮಾಡೋದೆಲ್ಲ ಗುಡ್ ಅನಿಸುತ್ತೆ. ಆ ವ್ಯಕ್ತಿಯ ಹಾರ್ಟ್ ಇದೆಯಲ್ಲ ಅದು ತುಂಬ ಜೆನ್ಯೂನ್. ಮನುಷ್ಯ ಒರಟಿರಬಹುದು. ಅಲ್ಲಿ ಇಲ್ಲಿ ಒಂಚೂರು ರಫ್ ಅನಿಸಬಹುದು. ಆದರೆ ಪ್ರಾಮಾಣಿಕ ಹೃದಯವದು. ಮಗುವಿನಂಥ ಮನಸ್ಸು. ಅದನ್ನು ನೀವು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು” ಎಂದಿದ್ದಾರೆ.
ಯಶ್ ಬಗ್ಗೆ ಅಭಿ ಏನಂದ್ರು?
“ತುಂಬ ಹಾರ್ಡ್ವರ್ಕಿಂಗ್.. ಕನಸುಗಾರ. ಯೋಚನಾಲಹರಿಯೇ ಬೇರೆ. ನಾವು ಸಾಮಾನ್ಯವಾಗಿ ಸಿನಿಮಾ, ಸಕ್ಸಸ್ ಅಂತ ನಾವು ವಿಚಾರ ಮಾಡಿದರೆ, ಅದನ್ನು ಮೀರಿ ಲೆಗೆಸಿ ಬಗ್ಗೆ ಅವರು ಯೋಚನೆ ಮಾಡುತ್ತಾರೆ. ಇದರಿಂದ ಇಂಡಸ್ಟ್ರಿಗೆ ನನ್ನ ಕೊಡುಗೆ ಏನು ಎಂಬುದನ್ನು ವಿಚಾರ ಮಾಡುತ್ತಾರೆ. ಇಂಡಸ್ಟ್ರಿಗೆ ನಾನು ಏನನ್ನಾದರೂ ನೀಡಬೇಕೆಂಬ ಥಾಟ್ ಸಾಮಾನ್ಯವಾಗಿ ಎಲ್ಲರಿಗೂ ಬರಲ್ಲ. ಆ ವಿಷ್ಯದಲ್ಲಿ ನಾನು ಇಂಡಸ್ಟ್ರಿಗೆ ಏನನ್ನಾದರೂ ನೀಡಬೇಕೆಂದು ಹಾತೊರೆಯುತ್ತಿರುತ್ತಾರೆ. ಇದು ಅವರ ಗುಡ್ ಮ್ಯಾನರ್ಸ್. ಬ್ಯಾಡ್ ಮ್ಯಾನರ್ಸ್ ಏನು ಅಂದರೆ, ಅವರ ಮುಂದಿನ ಸಿನಿಮಾ ಬಗ್ಗೆ ನನಗೂ ಹೇಳಿಲ್ಲ. ಅಣ್ಣ ತಮ್ಮ ಆಗಿದ್ದುಕೊಂಡು, ನನಗೂ ಅದರ ಬಗ್ಗೆ ಒಂದು ಮಾತು ಹೇಳಿಲ್ಲ” ಎಂದು ಯಶ್ ಬಗ್ಗೆ ಮಾತನಾಡಿದ್ದಾರೆ ಅಭಿ.
ದರ್ಶನ್ ಕಡೆಯಿಂದ ಟ್ರೇಲರ್ ರಿಲೀಸ್
ಇನ್ನು ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟ್ರೇಲರ್ ಇದೇ ನ. 12ರಂದು ಬಿಡುಗಡೆ ಆಗಲಿದೆ. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ರಾಕ್ಲೈನ್ ಮಾಲ್ನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದ್ದು, ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜತೆಗೆ ಸುಮಲತಾ ಅಂಬರೀಶ್ ಸಗ ಭಾಗವಹಿಸಲಿದ್ದಾರೆ.