Rajinikanth Temple Run: ಒಂದೇ ದಿನ ಮಗಳೊಂದಿಗೆ ತಿರುಪತಿ, ಎ.ಆರ್.ರೆಹಮಾನ್ ಜೊತೆ ದರ್ಗಾಕ್ಕೆ ಭೇಟಿ ನೀಡಿದ ತಲೈವಾ..ಫೋಟೋ, ವಿಡಿಯೋ ವೈರಲ್
Dec 15, 2022 06:51 PM IST
ತಿರುಪತಿ ಭೇಟಿ ಬಳಿಕ ಕಡಪಾದ ದರ್ಗಾಕ್ಕೆ ಭೇಟಿ ನೀಡಿದ ರಜನಿಕಾಂತ್
- ತಿರುಪತಿಯಿಂದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಜೊತೆ ಆಂಧ್ರದ ಕಡಪದ ಅಮೀನ್ ಪೀರ್ ದರ್ಗಾಕ್ಕೆ ಕೂಡಾ ತಲೈವಾ ಭೇಟಿ ನೀಡಿದರು. ಇಬ್ಬರು ಮಹಾನ್ ಸಿನಿ ಗಣ್ಯರು ದರ್ಗಾಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿದು ಅಭಿಮಾನಿಗಳು ಕಿಕ್ಕಿರಿದು ಕಾಯುತ್ತಿದ್ದರು.
ಮೂರು ದಿನಗಳ ಹಿಂದಷ್ಟೇ ಸೂಪರ್ಸ್ಟಾರ್ ರಜನಿಕಾಂತ್, 72ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಭಿಮಾನಿಗಳು ,ಸಿನಿ ಗಣ್ಯರು ತಲೈವಾಗೆ ಹುಟ್ಟುಹಬ್ಬದ ಶುಭ ಕೋರಿದ್ದರು. ಸೂಪರ್ ಸ್ಟಾರ್ ಹುಟ್ಟುಹಬ್ಬದ ಅಂಗವಾಗಿ ಡಿಸೆಂಬರ್ 10 ರಂದು ಅವರ ಹಳೆಯ ಸಿನಿಮಾ 'ಬಾಬಾ' ರೀ ರಿಲೀಸ್ ಆಗಿತ್ತು. 'ಕಾಂತಾರ' ಸಿನಿಮಾದಿಂದ ಪ್ರೇರಣೆಯಿಂದ ತಲೈವಾ 'ಬಾಬಾ' ಚಿತ್ರವನ್ನು ಹೊಸದಾಗಿ ಡಬ್ ಮಾಡಿ ಬಿಡುಗಡೆಗೊಳಿಸಿದ್ದರು.
ಈ ನಡುವೆ ರಜನಿಕಾಂತ್ ಮಗಳೊಂದಿಗೆ ತಿರುಪತಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಜೊತೆ ಅಮೀನ್ ಪೀರ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಬುಧವಾರ ಸಂಜೆಯೇ ತಮ್ಮ ಪುತ್ರಿ ಐಶ್ವರ್ಯ ಜೊತೆ ತಿರುಪತಿಗೆ ತೆರಳಿದ್ದ ರಜನಿಕಾಂತ್, ಗುರುವಾರ ಬೆಳಗ್ಗೆ ಶ್ರೀನಿವಾಸನ ದರ್ಶನ ಪಡೆದು, ಬೆಳಗಿನ ಸುಪ್ರಭಾತ ಸೇವೆ ಸೇರಿ ವಿವಿಧ ಪೂಜೆಗಳಲ್ಲಿ ಭಾಗವಹಿಸಿದ್ದರು. ಇನ್ನಿತರ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ನಂತರ ಎ.ಆರ್. ರೆಹಮಾನ್ ಜೊತೆ ಆಂಧ್ರದ ಕಡಪದಲ್ಲಿರುವ ಅಮೀನ್ ಪೀರ್ ದರ್ಗಾಗೆ ಭೇಟಿ ನೀಡಿದರು.
ದೇವರ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಜನಿಕಾಂತ್, ''ಆಗ್ಗಾಗ್ಗೆ ತಿರುಪತಿಗೆ ಭೇಟಿ ನೀಡುತ್ತೇನೆ. ಇಲ್ಲಿಗೆ ಭೇಟಿ ನೀಡುವ ಅದ್ಭುತ ಅನುಭವವನ್ನು ಎಂದಿಗೂ ಮಾತುಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ'' ಎಂದರು. ಇನ್ನು ತಮಿಳುನಾಡಿನ ನಟ-ರಾಜಕಾರಣಿ ಉದಯನಿಧಿ ಸ್ಟಾಲಿನ್ ಮಂತ್ರಿ ಪದವಿ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ರಜನಿಕಾಂತ್, 'ನಾನು ಈಗಾಗಲೇ ಸ್ಟಾಲಿನ್ ಅವರಿಗೆ ಶುಭ ಕೋರಿ ಸಂದೇಶ ಕಳಿಸಿದ್ದೇನೆ' ಎಂದರು.
ಇನ್ನು ತಿರುಪತಿಯಿಂದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಜೊತೆ ಆಂಧ್ರದ ಕಡಪದ ಅಮೀನ್ ಪೀರ್ ದರ್ಗಾಕ್ಕೆ ಕೂಡಾ ತಲೈವಾ ಭೇಟಿ ನೀಡಿದರು. ಇಬ್ಬರು ಮಹಾನ್ ಸಿನಿ ಗಣ್ಯರು ದರ್ಗಾಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿದು ಅಭಿಮಾನಿಗಳು ಕಿಕ್ಕಿರಿದು ಕಾಯುತ್ತಿದ್ದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿತ್ತು. ದರ್ಗಾದಲ್ಲಿ ರಜನಿಕಾಂತ್ ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಸಂಪ್ರದಾಯದಂತೆ ರಜನಿಕಾಂತ್ ಹಾಗೂ ರೆಹಮಾನ್ ತಲೆಗೆ ಕೆಂಪು ಟವೆಲ್ ಸುತ್ತಲಾಗಿತ್ತು. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ರಜನಿಕಾಂತ್ ಸಿನಿಮಾಗಳ ವಿಚಾರಕ್ಕೆ ಬರೋದಾದ್ರೆ ಸದ್ಯಕ್ಕೆ ಅವರು 'ಜೈಲರ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು ನೆಲ್ಸನ್, ನಿರ್ದೇಶನ ಮಾಡುತ್ತಿದ್ದಾರೆ. 'ಜೈಲರ್' ಸಿನಿಮಾದಲ್ಲಿ ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಶಿವರಾಜ್ಕುಮಾರ್, ರಜನಿಕಾಂತ್ ಎದುರಾಳಿ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇನ್ನು ಸುಮಾರು 20 ವರ್ಷಗಳ ನಂತರ ರಮ್ಯಕೃಷ್ಣ ಹಾಗೂ ರಜನಿಕಾಂತ್ ಜೊತೆಯಾಗಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ನಲ್ಲಿ ತೆರೆ ಕಾಣಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಜನಿಕಾಂತ್..?
ಮೊನ್ನೆ ರಜನಿಕಾಂತ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅವರ ಫೋಟೋ ಹಂಚಿಕೊಂಡು ಶುಭ ಕೋರಿತ್ತು. ಸಾಮಾನ್ಯವಾಗಿ ಹೊಂಬಾಳೆ ಫಿಲ್ಮ್ಸ್, ತನ್ನ ಪ್ರೊಡಕ್ಷನ್ ಹೌಸ್ ಅಡಿ ಕೆಲಸ ಮಾಡಿದ ನಟ-ನಟಿಯರಿಗೆ , ಹಾಗೂ ಆಕ್ಟ್ ಮಾಡಲು ಹೊರಟವರಿಗೆ ಶುಭ ಕೋರುತ್ತಾ ಬಂದಿದೆ. ಇತ್ತೀಚೆಗೆ ಮಲಯಾಳಂ ನಟ ಫಹಾದ್ ಫಾಸಿಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಸಂಸ್ಥೆ ಕೆಲವು ದಿನಗಳ ನಂತರ ಆ ನಟನೊಂದಿಗೆ ಸಿನಿಮಾವೊಂದನ್ನು ಅನೌನ್ಸ್ ಮಾಡಿತ್ತು. ಇದೇ ರೀತಿ ಹಲವು ನಟ-ನಟಿಯರಿಗೆ ಹೊಂಬಾಳೆ ಫಿಲ್ಮ್ಸ್ ಶುಭ ಕೋರಿತ್ತು. ಇದೀಗ ರಜನಿಕಾಂತ್ಗೆ ಕೂಡಾ ಹುಟ್ಟುಹಬ್ಬದ ಶುಭ ಕೋರಿದ್ದು ಶೀಘ್ರದಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಜೊತೆ ರಜನಿಕಾಂತ್ ಕೈ ಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.