Weekend with Ramesh Season 5: ಜೀ ಕನ್ನಡದಲ್ಲಿ ಇಂದಿನಿಂದ ಸಾಧಕರ ಸ್ಫೂರ್ತಿದಾಯಕ ಪಯಣ ಶುರು; ವೀಕೆಂಡ್ ವಿಥ್ ರಮೇಶ್ ಸೀಸನ್ 5 ಆರಂಭ
Mar 25, 2023 01:39 PM IST
ಇಂದಿನಿಂದ ಜೀ ಕನ್ನಡದಲ್ಲಿ ವೀಕೆಂಡ್ ವಿಥ್ ರಮೇಶ್ ಸೀಸನ್ 5 ಶುರು..
ವಾರಾಂತ್ಯವನ್ನು ಮತ್ತಷ್ಟು ಉಲ್ಲಾಸಗೊಳಿಸಲು ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರಸಾರವಾಗಲಿದೆ ವೀಕೆಂಡ್ ವಿಥ್ ರಮೇಶ್ ಸೀಸನ್ 5
Weekend with Ramesh season 5: ಜೀ ಕನ್ನಡದಲ್ಲಿ ನಾಲ್ಕು ವರ್ಷದ ಬಳಿಕ ಮತ್ತೆ ವೀಕೆಂಡ್ ವಿಥ್ ರಮೇಶ್ ಸೀಸನ್ 5 ಶುರುವಾಗಿದೆ. ಸಿನಿಮಾ ಸೇರಿ ಹಲವು ಕ್ಷೇತ್ರದ ಸಾಧಕರ ಸಾಧನೆಯನ್ನು ಮತ್ತೆ ಕಿರುತೆರೆಯಲ್ಲಿ ವೀಕ್ಷಿಸುವ ಸಮಯ ಬಂದಿದೆ. ಇಂದಿನಿಂದ ರಾತ್ರಿ 9 ಗಂಟೆಗೆ ಈ ಶೋ ಶುರುವಾಗಲಿದೆ. ಹೊಸ ಹೊಸ ಸಾಧಕರು ಮತ್ತು ಹಲವು ವಿಶೇಷತೆಗಳೊಂದಿಗೆ ಈ ಸಲದ ಸೀಸನ್ ಮೂಡಿಬರಲಿದೆ ಎಂದು ವಾಹಿನಿ ಹೇಳಿಕೊಂಡಿದೆ.
ವ್ಯಾಪಾರ, ರಾಜಕೀಯ, ಕ್ರೀಡೆ ಮತ್ತು ಮನರಂಜನೆ ಸೇರಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ನಿರೂಪಕ ರಮೇಶ್ ಅರವಿಂದ್ ಸಂವಾದ ನಡೆಸಲಿದ್ದಾರೆ. ಅದರಲ್ಲೂ ಈ ಸಲದ ವೀಕೆಂಡ್ ವಿತ್ ರಮೇಶ್ 5- ಅನ್ಸೀನ್ ಎಂಬ ವಿಶೇಷ 30 ನಿಮಿಷಗಳ ಕಾರ್ಯಕ್ರಮದೊಂದಿಗೆ ವಾಹಿನಿಯು ತನ್ನ ಪ್ರೇಕ್ಷಕರ ಪ್ರೀತಿಗೆ ಬೋನಸ್ ನೀಡಿದೆ. ಅದೇನು ಎಂಬುದನ್ನು ಇಂದಿನ ಶೋ ಪ್ರಸಾರವಾದ ಬಳಿಕವಷ್ಟೇ ಗೊತ್ತಾಗಲಿದೆ.
ಅಂದಹಾಗೆ ‘ವೀಕೆಂಡ್ ವಿತ್ ರಮೇಶ್’ ಸೀಸನ್ 5 ಕಾರ್ಯಕ್ರಮದ ಮೊದಲ ಸಂಚಿಕೆ ಮಾರ್ಚ್ 25 ಹಾಗೂ 26ರಂದು ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಹತ್ತು ಹಲವು ಸಾಧಕರು..
ಸದ್ಯಕ್ಕೆ ಸೀಸನ್ 5ರ ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಿದ್ದಾರೆ. ಅವರ ಏಪಿಸೋಡ್ನ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಅದೇ ರೀತಿ ಇಂಡಿಯನ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾದ ಪ್ರಭುದೇವ ಸಹ ಆಗಮಿಸಲಿದ್ದಾರೆ. ಅದೇ ರೀತಿ ಈ ಸೀಸನ್ನಲ್ಲಿ ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್, ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿ ಇನ್ನೂ ಹಲವರು ಸಾಧಕರ ಕುರ್ಚಿ ಮೇಲೆ ಕೂರಲಿದ್ದಾರೆ ಎನ್ನಲಾಗುತ್ತಿದೆ.
ನಾಲ್ಕು ಸೀಸನ್ಗಳೂ ಹಿಟ್!
ಇಲ್ಲಿಯವರೆಗೂ ವೀಕೆಂಡ್ ವಿಥ್ ರಮೇಶ್ ಶೋ ಒಟ್ಟು ನಾಲ್ಕು ಸೀಸನ್ಗಳನ್ನು ಮುಗಿಸಿಕೊಂಡಿದೆ. ಇದೀಗ 5ನೇ ಸೀಸನ್ ಶುರುವಾಗಿದೆ. 2014ರಲ್ಲಿ ಶುರುವಾದ ವೀಕೆಂಡ್ ವಿಥ್ ರಮೇಶ್ ಮೊದಲ ಸೀಸನ್ನಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಅದಾದ ಬಳಿಕ ಕನ್ನಡ ಸಿನಿಮಾರಂಗ ಸೇರಿ, ಉದ್ಯಮ, ರಾಜಕೀಯ ಸೇರಿ ಹಲವು ರಂಗಗಳ ಸಾಕಷ್ಟು ಗಣ್ಯರು ಈ ಸಾಧಕರ ಕುರ್ಚಿ ಏರಿದ್ದಾರೆ. ಇದೀಗ ಸೀಸನ್ 5ಕ್ಕೆ ಕ್ಷಣಗಣನೆ ಆರಂಭವಾಗಿದೆ.
ರಾಘವೇಂದ್ರ ಹುಣಸೂರು ಹೇಳುವುದೇನು?
"ಜೀ ಕನ್ನಡದ ಸ್ಫೂರ್ತಿದಾಯಕ ಶೋವನ್ನು ಮರಳಿ ತರುತ್ತಿರುವುದಕ್ಕೆ ಸಂತೋಷದಲ್ಲಿದ್ದೇನೆ. ವೀಕೆಂಡ್ ವಿತ್ ರಮೇಶ್ ಶೋ ಯಾವಾಗಲೂ ಕನ್ನಡ ಮಾತನಾಡುವ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿದೆ. ಹೊಚ್ಚ ಹೊಸ ಸೀಸನ್ನೊಂದಿಗೆ ಕಾರ್ಯಕ್ರಮವನ್ನು ಮರಳಿ ತರಲು ಮತ್ತು ನಾಡಿನ ಸಾಧಕ ವ್ಯಕ್ತಿಗಳ ಸ್ಪೂರ್ತಿದಾಯಕ ಮತ್ತು ಚಿಂತನಶೀಲ ಕಥೆಗಳನ್ನು ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಹಿಂದಿನ ಸೀಸನ್ಗಳಂತೆ ಈ ಸೀಸನ್ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂಬ ಭರವಸೆ ಇದೆ" ಎಂದು ಹೇಳಿದರು.