Bagalkot News: ಮಾಜಿ ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಬಾಗಲಕೋಟೆ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
Jun 26, 2023 03:23 PM IST
ಬೊಮ್ಮಾಯಿ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
- Basavaraj Bommai: ಬಸವರಾಜ ಬೊಮ್ಮಾಯಿ ಅವರ ಸಮ್ಮಖದಲ್ಲಿಯೇ ನಡೆದ ಸಭೆಯಲ್ಲಿ ಕಾರ್ಯಕರ್ತರ ನಟುವಿನ ಗಲಾಟೆಯಿಂದಾಗಿ ಕೆಲ ಸಮಯ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಮ್ಮುಖದಲ್ಲಿಯೇ ಬಾಗಲಕೋಟೆ (Bagalkot) ಬಿಜೆಪಿ ವಲಯದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಜಿಲ್ಲೆಯಲ್ಲಿ ನಡೆದ ಸಮಾವೇಶ ಅಕ್ಷರಶಃ ಕಾರ್ಯಕರ್ತರ ಮಾತಿನ ಚಕಮಕಿ, ವಾಗ್ದಾಳಿಗೆ ಸಾಕ್ಷಿಯಾಯಿತು.
ಬಸವರಾಜ ಬೊಮ್ಮಾಯಿ ಅವರ ಸಮ್ಮಖದಲ್ಲಿಯೇ ನಡೆದ ಸಭೆಯಲ್ಲಿ ಕಾರ್ಯಕರ್ತರ ನಟುವಿನ ಗಲಾಟೆಯಿಂದಾಗಿ ಕೆಲ ಸಮಯ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಸಭೆಯ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿದ ಬಳಿಕ ವೇದಿಕೆ ಮುಂದೆ ಕುಳಿತುಕೊಂಡಿರುವ ರಾಜು ರೇವಣಕರ ಮಾತನಾಡಿ, ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ವಿರೋಧಿ ಚಟುವಟಿಕೆ ಮಾಡಿರುವರು ಈ ಸಭೆಯಲ್ಲಿ ಆಗಮಿಸಿ ಕುಳಿತುಕೊಂಡಿದ್ದಾರೆ. ಅವರಿಗೆ ಸಭೆಯಿಂದ ಹೊರಗೆ ಹಾಕಿರಿ ಎಂದು ಹೇಳಿ, ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ಸೇರಿಕೊಂಡು, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವರು ಹೊರಗೆ ಹೋಗಿರಿ, ಇಲ್ಲವೇ ನಾವೇ ಹೂರಗೆ ಹಾಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಈ ವೇಳೆ ಮಾಜಿ ಸಚಿವರಾದ ಗೋವಿಂದ ಕಾರಜೋಳ ಅವರು ಸಮಾಧಾನ ಪಡಿಸಿದರು ಕಾರ್ಯಕರ್ತರು ಮೌನ ವಹಿಸದೆ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮಾತನಾಡಿ, ಸಮಾಧಾನ ಪಡಿಸಲು ಮುಂದಾದರು.
ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ.ಶೇಖರ ಮಾನೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ನಿನ್ನೆ ದಿವಸ ಶಿವಾಜಿ ಪುತ್ಥಳಿ ಸ್ಥಾಪನೆ ಮಾಡುವ ವಿಷಯ ವಾಗಿ ಸಹ ಬಿಜೆಪಿ ಪಕ್ಷದ ವಿರೋಧ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಸಭೆಯಿಂದ ಹೂರಗೆ ಹಾಕಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಮಾನೆ ವೇದಿಕೆಗೆ ಆಗಮಿಸಿ, ಮುಖಂಡರಿಗೆ ಸಮಜಾಯಿಷಿ ಹೇಳಲು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರು ಆಗಮಿಸಿ, ಡಾ.ಮಾನೆಯನ್ನು ಹೊರಗೆ ಕರೆದುಕೊಂಡು ಹೋದರು. ಇವರ ಜೊತೆಗೆ ಅವರ ಬೆಂಬಲಿಗರನ್ನು ಸಹ ಕರೆದುಕೊಂಡು ಹೋದರು. ನಂತರ ಸಭೆಯು ಮುಂದುವರೆಯಿತು.
ವೇದಿಕೆಯ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದರಾದ ರಮೇಶ ಜಿಗಜಿಣಗಿ, ಪಿ ಸಿ ಗದ್ದಿಗೌಡರ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರಗೇಶ ನಿರಾಣಿ, ಎ ಎಸ್ ನಡಹಳ್ಳಿ ಪಾಟೀಲ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಶಾಸಕ ಸಿದ್ದು ಸವದಿ ಸೇರಿದಂತೆ ಇತರ ಗಣ್ಯರು, ಮುಖಂಡರು ಭಾಗಿಯಾಗಿದ್ದರು, ಎಲ್ಲ ಮುಖಂಡರ ಸಮ್ಮುಖದಲ್ಲಿಯೇ ಈ ಪ್ರಹಸನ ನಡೆದಿದೆ.
ವರದಿ: ಸಮೀವುಲ್ಲಾ ಉಸ್ತಾದ