Belagavi News: ಟೆಲಿಗ್ರಾಂ ಆ್ಯಪ್ ಮೂಲಕ ಮಹಿಳೆಯರಿಗೆ ವಂಚನೆ; ಸಂತ್ರಸ್ತ ಮಹಿಳೆಯರಿಗೆ 46 ಲಕ್ಷ ಮರಳಿಸಿದ ಪೊಲೀಸರು
Sep 09, 2023 01:25 PM IST
ಟೆಲಿಗ್ರಾಂ ಆ್ಯಪ್ ಮೂಲಕ ವಂಚನೆಗೊಳಗಾಗಿದ್ದ ಮಹಿಳೆಯರಿಗೆ ಹಣ ಮರಳಿಸಿದ ಬೆಳಗಾವಿ ಪೊಲೀಸರು
- ಆನ್ಲೈನ್ ವಂಚಕರ ತಂಡವು ಬೇನಾಮಿ ಹೆಸರುಗಳಲ್ಲಿ 21 ಬ್ಯಾಂಕ್ ಖಾತೆಗಳನ್ನು ತೆರೆದಿತ್ತು. ಅದರಲ್ಲಿ 72.57 ಲಕ್ಷ ಹಣ ಫ್ರೀಜ್ ಮಾಡಲಾಗಿತ್ತು. ಹಲವು ಮಹಿಳೆಯರಿಗೆ ಲಾಭಾಂಶದ ಆಮಿಷವೊಡ್ಡಿ ವಂಚಿಸಿದ್ದಾರೆ.
ಬೆಳಗಾವಿ: ಟೆಲಿಗ್ರಾಮ್ ಆ್ಯಪ್ ಬಳಸಿ ಮಹಿಳೆಯರಿಂದ ಹಣ ವಂಚನೆ ಮಾಡಿದ್ದ ಪ್ರಕರಣವನ್ನು ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಕಳೆದುಕೊಂಡ ಕುರಿತು ರಾಯಬಾಗದ ಡಾ. ಶಿಲ್ಪಾ ಹಾಗೂ ನಿಪ್ಪಾಣಿಯ ಆಶಾ ಎಂಬುವವರು ಬೆಳಗಾವಿಯ ಸಿಐಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು. ಟೆಲಿಗ್ರಾಂ ಆ್ಯಪ್ ಮೂಲಕ ಡಾ. ಶಿಲ್ಪಾಮತ್ತು ಆಶಾ ಅವರನ್ನು ಸಂಪರ್ಕಿಸಿದ ವಂಚಕರು ಹಣ ಹೂಡಿಕೆ ಯೋಜನೆಯ ಮಾಹಿತಿ ನೀಡಿದ್ದರು. ಅವರ ಮಾತು ನಂಬಿ ಆರಂಭದಲ್ಲಿ ಅಲ್ಲಿ ಹಣ ಹೂಡಿಕೆ ಮಾಡಿದ್ದರು. ಮೊದಲ ಬಾರಿ ಹೂಡಿಕೆ ಮಾಡಿದ ಹಣಕ್ಕೆ ಒಪ್ಪಂದದ ಪ್ರಕಾರ ಹೆಚ್ಚಿನ ಹಣ ವಾಪಸ್ ನೀಡಿದ್ದರು.
ಬಳಿಕ ಡಾ. ಶಿಲ್ಪಾ 27.74 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ಆಶಾ ಅವರು 18.41 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆದರೆ, ಒಪ್ಪಂದದ ಪ್ರಕಾರ ಹಣ ವಾಪಸ್ ನೀಡಿರಲಿಲ್ಲ. ದೊಡ್ಡ ಮೊತ್ತದ ಹಣ ಅಕೌಂಟಿಗೆ ಬಂದ ತಕ್ಷಣ ವಂಚಕರು ಅಕೌಂಟ್ ‘ಫ್ರೀಜ್’ಮಾಡಿದ್ದರು. ತಾವು ವಂಚನೆಗೆ ಒಳಗಾದ ಸಂಗತಿ ತಿಳಿದ ಮಹಿಳೆಯರು ಬೆಳಗಾವಿ ಐಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಜಾಲ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆನ್ಲೈನ್ ವಂಚಕರ ತಂಡವು ಬೇನಾಮಿ ಹೆಸರುಗಳಲ್ಲಿ 21 ಬ್ಯಾಂಕ್ ಖಾತೆಗಳನ್ನು ತೆರೆದಿತ್ತು. ಅದರಲ್ಲಿ 72.57 ಲಕ್ಷ ಹಣ ಫ್ರೀಜ್ ಮಾಡಲಾಗಿತ್ತು. ಹಲವು ಮಹಿಳೆಯರಿಗೆ ಲಾಭಾಂಶದ ಆಮಿಷವೊಡ್ಡಿ ವಂಚಿಸಿದ್ದಾರೆ. ಡಾ.ಶಿಲ್ಪಾ ಹಾಗೂ ಆಶಾ ಅವರು ಕಳೆದುಕೊಂಡಿದ್ದ ಹಣವನ್ನು ಅವರಿಗೆ ಜಿಲ್ಲಾ ಸಿಇಎನ್ ಠಾಣೆಯ ಪೊಲೀಸರು ಮರಳಿಸಿದ್ದಾರೆ.
ಆನ್ಲೈನ್ ಮೂಲಕ ಹಣ ಹೂಡಿಕೆ, ಗಿಫ್ಟ್ ಸೇರಿದಂತೆ ಇತರ ಆಫರ್ಗಳಿಗೆ ಮರುಳಾಗಬಾರದು. ವಸ್ತು ಸ್ಥಿತಿ ಅರಿಯಬೇಕು. ಯಾರಿಂದಾದಲೂ ಮೋಸ ಹೋದ ಅನುಮಾನ ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಬೇಕು. ಈ ಪ್ರಕರಣದಲ್ಲಿ ವಂಚನೆಗೊಳಗಾದ ಮಹಿಳೆಯರು ತಕ್ಷಣ ದೂರು ನೀಡಿದ್ದರು. ತನಿಖೆ ಆರಂಭಿಸುವ ವೇಳೆಗೆ ಹಣ ವಂಚಕರ ಬ್ಯಾಂಕ್ ಖಾತೆಯಲ್ಲೇ ಇತ್ತು. ಹೀಗಾಗಿ ಹಣ ಮರಳಿ ಪಡೆಯಲು ಸಾಧ್ಯವಾಯಿತು ಎಂದು ಬೆಳಗಾವಿ ಸಿಇಎನ್ ಅಪರಾಧ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್ನಿಂದ ಬಿದ್ದು ಯೋಧ ಸಾವು
ಬೈಕ್ನಿಂದ ಆಯತಪ್ಪಿ ಬಿದ್ದು ತಾಲೂಕಿನ ನದಿ ಇಂಗಳಗಾಂವ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಲಕ್ಷ್ಮಣ ಘೋರ್ಪಡೆ (24) ಮೃತಪಟ್ಟಿದ್ದಾರೆ. ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ್ದ ಅವರು ತಮ್ಮ ಸ್ನೇಹಿತ ಹಾಗೂ ಯೋಧರೂ ಆದ ಸತೀಶ್ ಘೋರ್ಪಡೆ ಅವರೊಂದಿಗೆ ಬೈಕ್ನಲ್ಲಿ ಬೆಳಗಾವಿಗೆ ತೆರಳಿದ್ದರು. ಬೈಕ್ನಲ್ಲಿ ಮರಳಿ ಸ್ವಗ್ರಾಮಕ್ಕೆ ಬರುತ್ತಿದ್ದಾಗ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಬಳಿ ಬೈಕ್ ಸ್ಕಿಡ್ ಆಗಿತ್ತು. ಲಕ್ಷ್ಮಣ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಬೈಕ್ ಚಾಲನೆ ಮಾಡುತ್ತಿದ್ದ ಸತೀಶ್ ಅವರಿಗೆ ಗಾಯಗಳಾಗಿದ್ದು ಮಹಾರಾಷ್ಟ್ರದ ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮಣ ಘೋರ್ಪಡೆ ಅವರ ತೋಟದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಥಣಿ ತಾಲೂಕು ಆಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.