Cyber Fraud: ಬೆಂಗಳೂರಲ್ಲಿ 854 ಕೋಟಿ ರೂಪಾಯಿ ಸೈಬರ್ ವಂಚನೆ, 6 ಆರೋಪಿಗಳನ್ನು ಬಂಧಿಸಿದ ಸೈಬರ್ ಪೊಲೀಸರು
Sep 30, 2023 04:13 PM IST
ಬೃಹತ್ ಸೈಬರ್ ವಂಚನೆ ಪ್ರಕರಣವನ್ನು ಪತ್ತೆಹಚ್ಚಿ ಆರು ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು, (ಸಾಂಕೇತಿಕ ಚಿತ್ರ)
ಬೆಂಗಳೂರು ಸಿಸಿಬಿ ಪೊಲೀಸರು ಬೃಹತ್ ಸೈಬರ್ ವಂಚನೆ ಪ್ರಕರಣ ಬೇಧಿಸಿದ್ದು, 854 ಕೋಟಿ ರೂಪಾಯಿ ವಂಚಿಸಿದ ದೊಡ್ಡ ಜಾಲದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಮೂರು ಶಂಕಿತರು ಇದ್ದು, ಅವರು ಈ ಜಾಲದ ಕಿಂಗ್ಪಿನ್ಗಳು ಎಂದು ಊಹಿಸಲಾಗಿದೆ. ಈ ಬೃಹತ್ ವಂಚನೆಯ ವಿವರ ವರದಿ ಇಲ್ಲಿದೆ.
ಬೆಂಗಳೂರು ಪೊಲೀಸರು 854 ಕೋಟಿ ರೂಪಾಯಿ ಮೊತ್ತದ ಬೃಹತ್ ಸೈಬರ್ ವಂಚನೆ ಹಗರಣವನ್ನು ಭೇದಿಸಿದ್ದಾರೆ. ಹೂಡಿಕೆ ಯೋಜನೆಯ ನೆಪದಲ್ಲಿ ಭಾರತದಾದ್ಯಂತ ಸಾವಿರಾರು ಸಂತ್ರಸ್ತರನ್ನು ವಂಚಿಸಿದ ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮನೋಜ್ ಪಣೀಂದ್ರ, ಚಕ್ರಧರ್, ಶ್ರೀನಿವಾಸ್, ಸೋಮಶೇಖರ್, ವಸಂತ್ ಬಂಧಿತರು. ಇವರೆಲ್ಲೂ ಬೆಂಗಳೂರು ವಾಸಿಗಳು. ಈ ಸೈಬರ್ ವಂಚನೆಯ ಪಿತೂರಿಗಾರರು ಅಥವಾ ಕಿಂಗ್ಪಿನ್ಗಳು ಎಂದು ಮೂವರನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸುವ ಪ್ರಯತ್ನ ನಡೆದಿದೆ. ವಂಚಿಸಿದ ಒಟ್ಟು ಮೊತ್ತದಲ್ಲಿ ಐದು ಕೋಟಿ ರೂಪಾಯಿಯನ್ನು ಸ್ತಂಭನಗೊಳಿಸಲಾಗಿದೆ. ಬೆಂಗಳೂರು ಒಂದರಲ್ಲೇ ವಂಚಕರು 49 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೃಹತ್ ಸೈಬರ್ ವಂಚನೆಯ ಸ್ವರೂಪ ಹೀಗಿತ್ತು
ಆರೋಪಿಗಳ ತಂಡವು ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಸಂತ್ರಸ್ತರನ್ನು ವಂಚನೆಯ ಜಾಲಕ್ಕೆ ಬೀಳಿಸಿಕೊಳ್ಳಲು ಆಮಿಷವೊಡ್ಡಿತ್ತು. ಆರಂಭದಲ್ಲಿ, ಅವರು ದಿನಕ್ಕೆ 1,000 ರಿಂದ 5,000 ರೂಪಾಯಿ ಲಾಭವಾಗಿ ಗಳಿಸಬಹುದು ಎಂಬ ನೆಪದಲ್ಲಿ 1,000 ರಿಂದ 10,000 ರೂಪಾಯಿ ತನಕ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಕೇಳಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸೈಬರ್ ವಂಚನೆಯ ವಿವರ ನೀಡುವುದಕ್ಕಾಗಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು, ಕೆಲವರಿಗೆ ಹೆಚ್ಚಿನ ಬಡ್ಡಿಯ ಆಮಿಷ ಒಡ್ಡಿ ವಂಚಿಸಿರುವ ಬಹಳ ಕುತೂಹಲಕಾರಿ ಸೈಬರ್ ವಂಚನೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಯಶಸ್ವಿಯಾಗಿದೆ. ಸಾವಿರಾರು ಸಂತ್ರಸ್ತರು 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದರು ಎಂದು ವಿವರಿಸಿದರು.
ವಂಚಕರ ಕಾರ್ಯಾಚರಣೆಯ ವಿಧಾನವನ್ನು ವಿವರಿಸಿದ ಅವರು, ಆರೋಪಿಗಳು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದರು.
ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ಒದಗಿಸುವ ನೆಪದಲ್ಲಿ ಅವರ ನಂಬಿಕೆಯನ್ನು ಗಳಿಸಿದ ನಂತರ, ಆರೋಪಿಗಳು ಸಂತ್ರಸ್ತರಿಂದ ದೊಡ್ಡ ಮೊತ್ತದ ಠೇವಣಿ ಮಾಡಿಸಿಕೊಂಡರು. ಆದರೆ, ಅವರು ಭರವಸೆ ನೀಡಿದ ಪ್ರಕಾರ ಹಣ ಅಥವಾ ಬಡ್ಡಿಯನ್ನು ಹಿಂದಿರುಗಿಸಲಿಲ್ಲ ಎಂದು ಹೇಳಿದರು.
ಬೃಹತ್ ಸೈಬರ್ ವಂಚನೆಯ ಕುರಿತು ಎಷ್ಟು ದೂರು ದಾಖಲಾಗಿವೆ
ದೇಶಾದ್ಯಂತ ಸೈಬರ್ ಹೂಡಿಕೆ ವಂಚನೆಯ ಇದೇ ರೀತಿಯ 5,013 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ ಇಂತಹ 17 ಪ್ರಕರಣಗಳು ಇಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಕಮಿಷನರ್ ಹೇಳಿದರು.
84 ವಿವಿಧ ಬ್ಯಾಂಕ್ ಖಾತೆಗಳಿಗೆ ಆರೋಪಿಗಳಿಂದ 854 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ವಂಚಿಸಿದ ಒಟ್ಟು ಮೊತ್ತದಲ್ಲಿ 5 ಕೋಟಿ ರೂಪಾಯಿಯನ್ನು ಸ್ತಂಭನಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಂಚಿಸಿದ ಮೊತ್ತವನ್ನು ವರ್ಗಾಯಿಸಿದ 84 ಬ್ಯಾಂಕ್ ಖಾತೆಗಳನ್ನು ವಿವಿಧ ರಾಜ್ಯಗಳಲ್ಲಿ ತೆರೆಯಲಾಗಿದೆ. ಇವುಗಳಲ್ಲಿ ಕೆಲವು ಖಾತೆಗಳನ್ನು ನಕಲಿ ವಿಳಾಸ ಮತ್ತು ಗುರುತಿನ ಮೂಲಕ ತೆರೆಯಲಾಗಿದೆ. ಕೆಲವರ ಅಸಲಿ ಬ್ಯಾಂಕ್ ಅಕೌಂಟ್ ಗಳನ್ನು ಬಳಸಿ ಅದಕ್ಕೆ ಕಮಿಷನ್ ಕೊಟ್ಟಿದ್ದಾರೆ.
ಬಂಧಿತ ಆರು ಆರೋಪಿಗಳೂ ಬೇರೆ ಬೇರೆ ಪಾತ್ರ ನಿರ್ವಹಿಸಿದ್ದಾರೆ. ಅವರಲ್ಲಿ ಕೆಲವರು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ತಮ್ಮ ಟಾರ್ಗೆಟ್ ಅನ್ನು ಗುರುತಿಸಲು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವ ಕಾರ್ಯವನ್ನು ನಿರ್ವಹಿಸಿದರೆ, ಇತರರ ಕೆಲಸವು ವಂಚಿಸಿದ ಮೊತ್ತವನ್ನು ಠೇವಣಿ ಮಾಡಲು ಮತ್ತು ವರ್ಗಾಯಿಸಲು ಬ್ಯಾಂಕ್ ಖಾತೆಗಳನ್ನು ವ್ಯವಸ್ಥೆಗೊಳಿಸುವುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ 487, ಆಂಧ್ರಪ್ರದೇಶ 296, ಬಿಹಾರ 200, ದೆಹಲಿ 194, ಗುಜರಾತ್ 642, ಕೇರಳ 188, ಮಹಾರಾಷ್ಟ್ರ 332, ರಾಜಸ್ಥಾನ 270, ತಮಿಳುನಾಡು 472, ತೆಲಂಗಾಣ 719, ಉತ್ತರಪ್ರದೇಶ 505 ಹಾಗೂ ಪಶ್ಚಿಮಬಂಗಾಳದಲ್ಲಿ 118 ಸೇರಿ ಒಟ್ಟು 5,013 ಪ್ರಕರಣಗಳು ದಾಖಲಾಗಿವೆ.
ವೈನ್ ಗ್ರೂಪ್ ಎಂಬ ಬಹುದೊಡ್ಡ ವಂಚನೆಯ ಜಾಲದ ಆರೋಪಿಗಳು ಪೊಲೀಸ್ ಬಲೆಗೆ
ಪೊಲೀಸರ ಪ್ರಕಟಣೆಯ ಪ್ರಕಾರ, ಏಪ್ರಿಲ್ 28ರಂದು ಬೆಂಗಳೂರು ಸೈಬರ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ದಿ ವೈನ್ ಗ್ರೂಪ್ (https://www.winegroup.life/h5) ಹೆಸರು ಉಲ್ಲೇಖವಾಗಿದೆ.
- ಸ್ನೇಹಿತರೊಬ್ಬರು ಹಣ ಹೂಡಿಕೆ ಮಾಡಿ ಹಣ ಗಳಿಸುತ್ತಿರುವುದರಿಂದ ಪ್ರೇರಿತರಾಗಿ ಈ ಆಪ್ನಲ್ಲಿ ಹಂತ ಹಂತವಾಗಿ 8.5 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
- ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು ವಿವಿಧ ಬ್ಯಾಂಕ್ಗಳ ಅಕೌಂಟ್ಗಳಿಗೆ ಹಣವು ವರ್ಗಾವಣೆಯಾಗಿರುವುದು ಕಂಡು ಬಂದಿತ್ತು.
- ಹೀಗಾಗಿ ಪ್ರಕರಣದಲ್ಲಿ ಬಳಕೆಯಾಗಿರುವ ಬ್ಯಾಂಕ್ ಖಾತೆಗಳ ಖಾತೆದಾರರ ವಿವರಗಳನ್ನು ಪಡೆದುಕೊಂಡು ನಂತರ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.
- ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕ್ರೋಢೀಕರಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್ ಖಾತೆ ತೆರೆದು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮತ್ತು ಟೆಲಿಗ್ರಾಮ್ ಆಪ್ಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ ಅವರಿಂದ ಕಡಿಮೆ ಹಣವನ್ನು ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಕೊಡುವುದಾಗಿ ನಂಬಿಸಿ ವಂಚಿಸುತ್ತಿರುವುದು ಪೊಲೀಸರಿಗೆ ದೃಢಪಟ್ಟಿದೆ.
- ಇದೇ ಆಧಾರದ ಮೇಲೆ ಬೆಂಗಳೂರು ನಗರದ ಸೈಬ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಂಚಕರು ಸಂಗ್ರಹಿಸಿದ 854 ಕೋಟಿ ರೂಪಾಯಿ ಎಲ್ಲಿ ಹೋಯಿತು
ಸಿಸಿಬಿ ಪೊಲೀಸ್ ತಂಡ ಕಳೆದ ಮೂರು ತಿಂಗಳಿನಿಂದ ಪ್ರಕರಣವನ್ನು ಬೇಧಿಸಲು ಕೆಲಸ ಮಾಡುತ್ತಿದೆ. ತಾಂತ್ರಿಕ ಕಣ್ಗಾವಲು ಮತ್ತು ಇತರ ಪ್ರಮುಖ ಸುಳಿವುಗಳನ್ನು ಬಳಸಿಕೊಂಡು ಅವರು ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ದೃಢಪಟ್ಟ ಅಂಶಗಳಿವು.
- ಸಂತ್ರಸ್ತರು ಹೂಡಿಕೆ ಮಾಡಿದ ಹಣವನ್ನು ಆನ್ಲೈನ್ ಪಾವತಿಗಳ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ಡಂಪ್ ಮಾಡಲಾಗಿದೆ. ಆದಾಗ್ಯೂ, ಹೂಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಸಂತ್ರಸ್ತೆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಅವರಿಂದ ಆ ಹಣ ಹಿಂಪಡೆಯುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
- ಸಂತ್ರಸ್ತರಿಂದ ಹೂಡಿಕೆ ಮಾಡಿಸಿಕೊಂಡ ಹಣವನ್ನು ಕೂಡಲೇ ಒಟ್ಟುಗೂಡಿಸಿ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ಖಾತೆಗಳಿಂದ ಆ ಹಣವನ್ನು ಅಕ್ರಮ ಲೇವಾದೇವಿಗೆ ಬಳಸಲಾಗುತ್ತದೆ.
- ಸಂತ್ರಸ್ತರಿಂದ ಸಂಗ್ರಹಿಸಿದ ಒಟ್ಟು 854 ಕೋಟಿ ರೂಪಾಯಿಯನ್ನು ವಿವಿಧ ಆನ್ಲೈನ್ ಪಾವತಿ ಮೂಲಕ ಕ್ರಿಪ್ಟೋ ಕರೆನ್ಸಿಗೆ ವರ್ಗಾವಣೆ ಆಗಿದೆ. ಗೇಮಿಂಗ್ ಆಪ್ಗಳಿಗೂ ವರ್ಗಾವಣೆ ಆಗಿದೆ.
- ಇಷ್ಟು ದೊಡ್ಡ ಮೊತ್ತದ ಹಣ 84 ಬ್ಯಾಂಕ್ ಖಾತೆಗಳಿಂದಲೇ ಆಗಿದ್ದು, ಆ ಖಾತೆಗಳನ್ನು ಈಗ ಸ್ತಂಭನಗೊಳಿಸಲಾಗಿದೆ. ಅದರಲ್ಲಿ ಬಾಕಿ ಉಳಿದಿದ್ದ 5 ಕೋಟಿ ರೂಪಾಯಿಯನ್ನು ಕೂಡ ತೆಗೆಯದಂತೆ ತಡೆಯಲಾಗಿದೆ.