ಇಸ್ರೋ ಭೇಟಿ ವೇಳೆ ರಾಜಕಾರಣ ದೂರ ಇಟ್ಟು ಮೋದಿ ಚಾಣಾಕ್ಷ ನಡೆ; ಬಿಜೆಪಿ ಅಬ್ಬೇಪಾರಿಯಾಯ್ತು ಎಂದ ಕಾಂಗ್ರೆಸ್
Aug 26, 2023 12:35 PM IST
ಮೋದಿ ಭೇಟಿ ವೇಳೆ ಸಾಮಾನ್ಯ ಜನರೊಂದಿಗೆ ರಸ್ತೆಬದಿ ನಿಂತಿರುವ ಬಿಜೆಪಿ ನಾಯಕರು
- PM Modi in Bengaluru: ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗುವ ಸಲುವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣವನ್ನ ದೂರ ಇಟ್ಟಿದ್ದರು. ಮೋದಿ ಭೇಟಿ ವೇಳೆ ಸಾಮಾನ್ಯ ಜನರೊಂದಿಗೆ ರಸ್ತೆಬದಿ ನಿಂತಿರುವ ಬಿಜೆಪಿ ನಾಯಕರ ಫೋಟೋ ಇದೀಗ ಟ್ರೋಲ್ ಆಗುತ್ತಿದೆ.
ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಹಿಂದಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಲು ಇಂದು ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣವನ್ನ ದೂರ ಇಟ್ಟಿದ್ದರು. ತಮ್ಮ ಪಕ್ಷದವರನ್ನೂ ಹತ್ತಿರ ಸೇರಿಸಿಕೊಳ್ಳದೇ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ ಮೋದಿ.
ಬೆಂಗಳೂರಿಗೆ ಬಂದ ಪ್ರಧಾನಿ ಮೋದಿಯನ್ನು ಭೇಟಿಯಾಗಲು ಹೆಚ್ಎಎಲ್ ವಿಮಾನ ನಿಲ್ದಾಣದ ಹೊರಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಯುತ್ತಿದ್ದರು. ಆದರೆ ಪಿಎಂ ಮೋದಿ ಅವರ ಬಳಿ ಹೋಗಿ ಮಾತನಾಡಿಲ್ಲ, ಅವರನ್ನು ತಮ್ಮ ಬಳಿ ಬರಲೂ ಅವಕಾಶ ನೀಡಿಲ್ಲ.
ಆನಂತರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್ಗೆ ಕಾರಿನಲ್ಲಿ ತೆರಳುತ್ತಿರುವಾಗ ರಸ್ತೆಯುದ್ದಕ್ಕೂ ನೆರೆದಿದ್ದ ಜನರೆಡೆ ಕೈ ಬೀಸಿದರು. ಈ ವೇಳೆ ರಸ್ತೆ ಬದಿ ಸಾಮಾನ್ಯ ಜನರೊಂದಿಗೆ ನಳಿನ್ ಕುಮಾರ್ ಕಟೀಲ್, ಆರ್ ಅಶೋಕ್, ಮುನಿರತ್ನ, ಕೆ ಗೋಪಾಲಯ್ಯ ಸೇರಿದಂತೆ ಬಿಜೆಪಿ ನಾಯಕರು ಕೂಡ ಮೋದಿಯನ್ನು ನೋಡಲು ನಿಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕರ್ನಾಟಕ ಬಿಜೆಪಿ ಅಬ್ಬೇಪಾರಿ -ಕಾಂಗ್ರೆಸ್ ಟ್ವೀಟ್
ಈ ಸನ್ನಿವೇಶವನ್ನು ಬಳಸಿಕೊಂಡಿರುವ ಕರ್ನಾಕಟ ಕಾಂಗ್ರೆಸ್ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿದೆ. “ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ! ಕರ್ನಾಟಕ ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. “ಬಿಜೆಪಿ ನಾಯಕರನ್ನ ಮೋದಿ ಬೀದಿಯಲ್ಲಿ ನಿಲ್ಲಿಸಿದ್ರು” ಅಂತ ಕೆಲವರು, “ಈ ಫೋಟೋಗೆ ಕ್ಯಾಪ್ಶನ್ ನೀಡಿ” ಅಂತ ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ನ ಟ್ವೀಟ್ ಅನ್ನು ಅನೇಕರು ಖಂಡಿಸಿ, ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ.
“ಬೀದಿಯಲ್ಲಿ ನಿಂತವರೆಲ್ಲ ಕೀಳು ಎಂದು ತಿಳಿಯುವುದು ನಿಮ್ಮ ದಡ್ಡತನ, ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ರೀತಿಯಾದಂತಹ ಸ್ಥಾನ ಇಲ್ಲಿ ಕಾರ್ಯಕರ್ತನು ಒಂದೇ ರಾಜ್ಯಧ್ಯಕ್ಷರು ಒಂದೇ, ಪಕ್ಷದ ವಿಚಾರ ಬಂದಾಗ ಪಕ್ಷದ ಸಿದ್ಧಾಂತಗಳಿಗೆ ಅನುಸಾರವಾಗಿ ಇರುತ್ತಾರೆ, ಇದೊಂದು ಪಕ್ಷತೀತವಾದ ಕಾರ್ಯಕ್ರಮ ಹಾಗಾಗಿ ಕಾರ್ಯಕರ್ತನ ಸಾಲಿನಲ್ಲಿ ನಾಯಕರು ಇದ್ದಾರೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
“ಅಲ್ಲ ರೀ. ರಸ್ತೆಯ ಬದಿಗೆ ನಿಂತುಕೊಂಡರೆ ಬೀದಿ ಪಾಲು ಆದಹಾಗೆ ನಾ? ಜನಸಾಮಾನ್ಯರಲ್ಲಿ ನಿಂತುಕೊಂಡರೆ ಇಷ್ಟೊಂದು ನೋವೇ?” ಎಂದು ಮತ್ತೊಬ್ಬ ಟ್ವೀಟ್ ಬಳಕೆದಾರ ಪ್ರಶ್ನಿಸಿದ್ದಾರೆ. ಈ ಹಿಂದೆ ಸೋನಿಯಾಗಾಂಧಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೌರವ ನೀಡದ ವಿಡಿಯೋವೊಂದನ್ನು ನೆಟ್ಟಿಗರು ಶೇರ್ ಮಾಡಿದ್ದಾರೆ.