Cyber Tip A Day: ವಿಮೆ, ಮ್ಯೂಚುವಲ್ ಫಂಡ್ ಹೆಸರಲ್ಲಿ ವಂಚನೆ, ಪೊಲೀಸ್ ಆಯುಕ್ತ ಬಿ ದಯಾನಂದ ಜಾಗೃತಿ ಸಂದೇಶ
Sep 16, 2023 10:43 PM IST
ಸೈಬರ್ ವಂಚನೆ ತಡೆಗೆ ಬೆಂಗಳೂರು ಪೊಲೀಸ್ ಜಾಗೃತಿ ಸಂದೇಶ (ಸಾಂಕೇತಿಕ ಚಿತ್ರ)
Cyber Tip A Day: ಸೈಬರ್ ವಂಚನೆ ಈಗ ನಿತ್ಯದ ಮಾತು. ಸುತ್ತಮುತ್ತ ಇರುವವರ ಪೈಕಿ ಒಬ್ಬರಲ್ಲದೇ ಇದ್ದರೆ ಮತ್ತೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದೇ ಬೀಳುತ್ತಾರೆ. ಬೆವರು ಸುರಿಸಿ ಗಳಿಸಿದ ಹಣವನ್ನು ಕಳೆದುಕೊಳ್ಳುತ್ತಾರೆ. ಈ ರೀತಿ ವಂಚನೆಗಳ ಕುರಿತು ಜಾಗೃತಿ ಮೂಡಿಸುವುದಕ್ಕೆ ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.
ಫೋನ್ ಕರೆ ಮಾಡಿ ಒಟಿಪಿ ಪಡೆದು ಹಣ ದೋಚುವುದು ಸೈಬರ್ ವಂಚನೆಯ (Cyber Fraud) ಒಂದು ವಿಧಾನ. ಈ ರೀತಿ ಹಲವು ವಿಧಾನಗಳ ಜತೆಗೆ ನಿತ್ಯವೂ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತ ಜನರನ್ನು ವಂಚಿಸಿ ಹಣ ದೋಚುವ ಕೆಲಸವನ್ನು ಸೈಬರ್ ವಂಚಕರು ಮಾಡುತ್ತಲೇ ಇದ್ದಾರೆ. ಕೆಲವು ಪೊಲೀಸರಿಗೆ ದೂರು ನೀಡಿದರೆ, ಇನ್ನು ಕೆಲವರು ಹೋಗಲಿ ಬಿಡಿ ಎಂದು ದುಃಖಿಸುತ್ತ ಅದನ್ನು ಅಲ್ಲಿಗೇ ಬಿಟ್ಟುಬಿಡುವುದು ಸಾಮಾನ್ಯ.
ಆದರೆ ಈ ರೀತಿ ವಂಚಕರ ಜಾಲಕ್ಕೆ ಬೀಳದಂತೆ ಎಷ್ಟು ಜಾಗರೂಕರಾಗಿದ್ದರೂ ಸಾಕಾಗುವುದಿಲ್ಲ. ಹೀಗಾಗಿ ವಂಚಕರ ಕಾರ್ಯವಿಧಾನದ ಬಗ್ಗೆ ತಿಳಿವಳಿಕೆ ಇದ್ದಷ್ಟೂ ಒಳ್ಳೆಯದು. ಈ ಹಿಂದೆ ಆಗಿರುವ ವಂಚನೆಯ ಘಟನೆಗಳು, ವಂಚಕರ ಕಾರ್ಯವಿಧಾನಗಳು ಈಗಾಗಲೇ ಹಲವರಿಗೆ ಗೊತ್ತಾಗಿರುತ್ತದೆ. ಅನೇಕರಿಗೆ ಇನ್ನೂ ಆ ರೀತಿ ವಂಚನೆಯ ಅರಿವು ಇರುವುದಿಲ್ಲ. ಹೀಗಾಗಿ ಸೈಬರ್ ವಂಚನೆಯ ಕುರಿತು ನಿರಂತರ ಜಾಗೃತಿ ಮೂಡಿಸಬೇಕಾದ್ದು ಅವಶ್ಯ.
ಇದನ್ನು ಮನಗಂಡಿರುವ ಬೆಂಗಳೂರು ನಗರ ಪೊಲೀಸರು, "ವಂಚನೆಯ ಬಲೆಗೆ ಬೀಳಬೇಡಿ" (Don't Fall for the Trap) ಎಂಬ ಅಭಿಯಾನವನ್ನು ಶುರುಮಾಡಿದೆ. ವಿಮೆ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ನಿಮ್ಮ ಹೂಡಿಕೆ ವಿಚಾರದಲ್ಲಿ ಆಗಬಹುದಾದ ವಂಚನೆಗಳ ಕುರಿತು ಎಚ್ಚರದಿಂದ ಇರಬೇಕಾದ್ದು ಅವಶ್ಯ ಎಂಬ ಸಂದೇಶವನ್ನು ಎಕ್ಸ್ನಲ್ಲಿ ಶೇರ್ ಮಾಡಿದ್ದಾರೆ.
ಸೈಬರ್ ಟಿಪ್ ಎ ಡೇ - ಪೊಲೀಸ್ ಆಯುಕ್ತ ಬಿ ದಯಾನಂದ ಜಾಗೃತಿ ಸಂದೇಶ
ಬಿ ಸೈಬರ್ ಸೇಫ್ ಮತ್ತು ಸೈಬರ್ ಟಿಪ್ ಎ ಡೇ (Cyber Tip A Day) ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ವಿಮೆ ಮತ್ತು ಮ್ಯೂಚುವಲ್ ಫಂಡ್ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಗಮನಸೆಳೆದಿದ್ದಾರೆ.
"ನಿವೃತ್ತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಡುವ ಇನ್ಶುರೆನ್ಸ್ ಫ್ರಾಡ್ ಅಥವಾ ಮ್ಯೂಚುವಲ್ ಫಂಡ್ ಫ್ರಾಡ್ ಬಗ್ಗೆ ತಿಳಿದುಕೊಳ್ಳೋಣ. ಈ ರೀತಿಯ ಫ್ರಾಡ್ನಲ್ಲಿ ಸೈಬರ್ ವಂಚಕರು ನಿವೃತ್ತಿಯ ಅಂಚಿನಲ್ಲಿರುವ ಅಥವಾ ನಿವೃತ್ತಿ ಆಗಿರುವ ಜನರನ್ನು ಗುರುತಿಸಿ ಅವರಿಗೆ ಎಸ್ಎಂಎಸ್ ಅನ್ನು ಕಳುಹಿಸುವ ಮೂಲಕ ಅಥವಾ ವಾಟ್ಸ್ಆಪ್ ಮೂಲಕ ಅಥವಾ ಕೆಲವು ವೆಬ್ಸೈಟ್ಗಳ ಮೂಲಕ ಸಂಪರ್ಕಿಸಿ ಅವರ ರಿಟೈರ್ಮೆಂಟ್ ಬೆನಿಫಿಟ್ಸ್ ಹಣವನ್ನು ತಮ್ಮ ಕಂಪನಿಯ ಇನ್ಶುರೆನ್ಸ್ ಅಥವಾ ಮ್ಯೂಚುವಲ್ ಫಂಡ್ನಲ್ಲಿ ತೊಡಗಿಸಿದರೆ ಉತ್ತಮ ಲಾಭವನ್ನು ಗಳಿಸಬಹುದು ಎಂದು ನಂಬಿಸುತ್ತಾರೆ.
ಅಲ್ಲದೆ ಇದಕ್ಕಾಗಿ ಬೇಕಾಗಿರುವ ಕಾಗದ ಪತ್ರಗಳನ್ನು ತಯಾರಿಸಲು ಮತ್ತು ಬಂಡವಾಳ ಹೂಡಿಕೆಗಾಗಿ ಕೊಡಬೇಕಾಗಿರುವ ಚೆಕ್ಗಳನ್ನು ತಮ್ಮ ಕಂಪನಿಯ ಎಕ್ಸಿಕ್ಯೂಟಿವ್ಗಳು ಮನೆಗೆ ಬಂದು ಸಂಗ್ರಹಿಸುತ್ತಾರೆ ಎಂದು ತಿಳಿಸಿ, ತಮ್ಮ ಏಜೆಂಟ್ಗಳನ್ನು ಕಳುಹಿಸಿ ಚೆಕ್ಗಳನ್ನು ಪಡೆದು ಅದನ್ನು ಬೇರೆ ಯಾವುದೋ ರಾಜ್ಯದಲ್ಲಿ, ಅಥವಾ ಊರಿನಲ್ಲಿ ನಗದು ಮಾಡಿಸಿಕೊಳ್ಳುತ್ತಾರೆ. ಆ ವ್ಯಕ್ತಿಗೆ ನಿಜ ಸಂಗತಿ ತಿಳಿಯುವುದರೊಳಗೆ ಅವರ ಹಣ ಸಂಪೂರ್ಣವಾಗಿ ಮಾಯವಾಗಿರುತ್ತದೆ.
ಇದು ಬಹಳ ಸರಳವಾಗಿ ಕಂಡರೂ, ಅನೇಕ ಜನ ಈ ರೀತಿಯ ವಂಚನೆಗೆ ಬಲಿಯಾಗಿದ್ದಾರೆ. ಮತ್ತು ಜೀವನ ಪರ್ಯಂತ ಮಾಡಿದ ತಮ್ಮ ಉಳಿತಾಯದ ಹಣವನ್ನು ಕಳೆದುಕೊಂಡಿದ್ದಾರೆ. ಇಂತಹ ವಂಚನೆಯಿಂದ ದೂರ ಇರಲು ಜನರು ತಮ್ಮ ನಿವೃತ್ತಿಯ ಹಣವನ್ನು ತೊಡಗಿಸಿಕೊಳ್ಳುವಲ್ಲಿ ಜಾಣ್ಮೆಯನ್ನು ತೋರಬೇಕು. ಮತ್ತು ಇದಕ್ಕಾಗಿ ಪೂರ್ವಭಾವಿಯಾಗಿ ಸಿದ್ಧತೆಯನ್ನು ಮಾಡಿ, ಹಣ ತೊಡಗಿಸಬೇಕು. ಅಗತ್ಯ ಬಿದ್ದಲ್ಲಿ ಪರಿಣತರ ಸಲಹೆಯನ್ನು ಪಡೆಯಬೇಕು.
ಹೊರತಾಗಿ ಈ ರೀತಿ ಅಂತರ್ಜಾಲದಲ್ಲಿ ಆಕರ್ಷಕವಾಗಿ ಕಾಣುವ ಜಾಹೀರಾತುಗಳಿಗೆ, ವೆಬ್ಸೈಟ್ಗಳಿಗೆ ಮರುಳಾಗಬಾರದು. ಅಂತರ್ಜಾಲದಲ್ಲಿ ಯಾವುದಾದರೂ ಇನ್ಶುರೆನ್ಸ್, ಮ್ಯೂಚುವಲ್ ಫಂಡ್ ವೆಬ್ಸೈಟ್ ತೆರೆಯುವಾಗ, ನೋಡುವಾಗ, ಆ ಮೂಲಕ ವ್ಯವಹಾರ ಮಾಡುವಾಗ ಅವು, ಆ ಕಂಪನಿಯ ಅಧಿಕೃತ ವೆಬ್ಸೈಟ್ಗಳೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. ಒಂದು ವೇಳೆ ಏನಾದರೂ, ಸಂಶಯ ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವುದು ಸೂಕ್ತ" ಎಂದು ಬಿ.ದಯಾನಂದ ವಿವರಿಸಿದ್ದಾರೆ.
ಸೈಬರ್ ಟಿಪ್ ಎ ಡೇ ಟ್ವೀಟ್ ಹೀಗಿದೆ..