ಬೆಂಗಳೂರು ಹವಾಮಾನ; ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಶಿಯಸ್ ಆಸುಪಾಸು, ರಣಬಿಸಿಲು, ಬಿಸಿಗಾಳಿ ಹೆಚ್ಚಳ, ಮಳೆಯ ಮಾತು ದೂರ
Apr 30, 2024 12:52 PM IST
ಬೆಂಗಳೂರು ಹವಾಮಾನ; ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಶಿಯಸ್ ತಲುಪಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಹವಾಮಾನ ಜನರನ್ನು ಕಂಗೆಡುವಂತೆ ಮಾಡಿದ್ದು, ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಶಿಯಸ್ ಆಸುಪಾಸು ತಲುಪಿದೆ. ರಣಬಿಸಿಲು, ಬಿಸಿಗಾಳಿ ಹೆಚ್ಚಳವಾಗಿದ್ದು, ಮಳೆಯ ಮಾತು ದೂರವೇ ಇದೆ. ಬೆಂಗಳೂರಿನಲ್ಲಿ ಈ ದಿನ (ಏಪ್ರಿಲ್ 30) ಗರಿಷ್ಠ ತಾಪಮಾನವು 39 ಡಿಗ್ರಿ ಸೆಲ್ಶಿಯಸ್ ತಲುಪಬಹುದು ಎಂದು ಹವಾಮಾನ ಕೇಂದ್ರ ತಿಳಿಸಿದೆ.
ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಲ್ಸಿಯಸ್ ಇತ್ತು. ಏತನ್ಮಧ್ಯೆ, ಏಪ್ರಿಲ್ 29 ರಂದು, ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿನ ಹವಾಮಾನ ಕೇಂದ್ರದ ನಿರ್ದೇಶಕ ಸಿ.ಪಿ.ಪಾಟೀಲ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಈ ದಿನ (ಏಪ್ರಿಲ್ 30) ಗರಿಷ್ಠ ತಾಪಮಾನವು 39 ಡಿಗ್ರಿ ಸೆಲ್ಶಿಯಸ್ ತಲುಪಬಹುದು. ದಿನೇದಿನೆ ಹೆಚ್ಚುತ್ತಿರುವ ಗರಿಷ್ಠ ತಾಪಮಾನ ಬೆಂಗಳೂರಿಗರನ್ನು ಕಂಗೆಡಿಸಿದ್ದು, ಭಾಗಶಃ ಮೋಡ ಕವಿದ ವಾತಾವರಣ ವಾರದಲ್ಲೊಂದರಡು ದಿನ ಕಂಡರೂ ಮಳೆಯ ಮಾತು ದೂರವೇ ಆಯಿತು ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ.
ಭಾರತದ ಐಟಿ ನಗರ ಬೆಂಗಳೂರಿನ ಗರಿಷ್ಠ ತಾಪಮಾನ ಏಪ್ರಿಲ್ 27ರಂದು 37.4 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇದು ಸದ್ಯದ ಸರಾಸರಿ ಗರಿಷ್ಠ ತಾಪಮಾನದಿಂದ 3.3 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಎಂಬುದನ್ನು ತೋರಿಸಿಕೊಡುತ್ತದೆ. ಈ ವರ್ಷದ ಗರಿಷ್ಠ ತಾಪಮಾನವು 2016ರ ಏಪ್ರಿಲ್ 25ರ ಗರಿಷ್ಠ ತಾಪಮಾನ 39.2 ಡಿಗ್ರಿ ಸೆಲ್ಶಿಯಸ್ ಅನ್ನು ಮೀರುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಪಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ| ಕರ್ನಾಟಕ ಹವಾಮಾನ ಏಪ್ರಿಲ್ 30; ಬಾಗಲಕೋಟೆ, ಕಲಬುರಗಿ, ಬೆಳಗಾವಿ, ರಾಯಚೂರು ಸೇರಿ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್- ಇಲ್ಲಿದೆ ವಿವರ
ಬೆಂಗಳೂರು ಹವಾಮಾನ ಗಮನಿಸಿದರೆ ಏಪ್ರಿಲ್ 30 ರಂದು ಕೂಡ ಒಣಹವೆಯೇ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ ಬಹುಶಃ 39 ಡಿಗ್ರಿ ಸೆಲ್ಶಿಯಸ್ ತಲುಪಬಹುದು. ಆದಾಗ್ಯೂ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು, ಕೊಡಗು, ಮೈಸೂರು, ಬೆಳಗಾವಿ, ಬಾಗಲಕೋಟೆ, ರಾಯಚೂರುಗಳಲ್ಲಿ ಒಂದೆರಡು ಕಡೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
40 ಡಿಗ್ರಿ ಸೆಲ್ಶಿಯಸ್ ಮೇಲಿದೆ ಕರ್ನಾಟಕದ 18 ಜಿಲ್ಲೆಗಳ ತಾಪಮಾನ, ಆರೆಂಜ್ ಅಲರ್ಟ್ ಘೋಷಣೆ
ಕರ್ನಾಟಕದಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ,ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಕೋಲಾರ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನವು 40 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ರಣಬಿಸಿಲು ಜನರನ್ನು ಕಾಡಿದೆ. ಶಾಖದ ಅಲೆಗಳ ತೀವ್ರತೆಗೆ ಅನುಗುಣವಾಗಿ ಹವಮಾನಾ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಈ ನಡುವೆ, ಕರ್ನಾಟದಲ್ಲಿ ರಾಯಚೂರಿನಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಕಲಬುರಗಿಯಲ್ಲಿ ಕಳೆದ ಭಾನುವಾರ 40.5 ಡಿಗ್ರಿ ಸೆಲ್ಶಿಯಸ್ ಮತ್ತು ಹಿಂದಿನ ದಿನವಾದ ಶನಿವಾರ 42.4 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ಇದನ್ನೂ ಓದಿ| ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್
ಮುಂಗಾರು ಮಳೆ ಯಾವಾಗ ಬರಲಿದೆ; ಮಳೆ ಮುನ್ಸೂಚನೆ ಹೇಳುವುದೇನು?
ಭಾರತೀಯ ಹವಾಮಾನ ಇಲಾಖೆಯೂ ಸೇರಿದಂತೆ ಜಗತ್ತಿನ ಹವಾಮಾನ ಏಜೆನ್ಸಿಗಳು, ಶೀಘ್ರವೇ ಲಾ ನಿನಾ ಪರಿಸ್ಥಿತಿಯನ್ನು ನಿರೀಕ್ಷಿಸುತ್ತಿವೆ. ಮಧ್ಯ ಪೆಸಿಫಿಕ್ ಮಹಾಸಾಗರದ ಮೇಲ್ಮೈನಲ್ಲಿ ಎಲ್ ನಿನೊ ಪರಿಸ್ಥಿತಿಯು ನೀರಿನ ಆವರ್ತಕ ತಾಪಮಾನಗಳಿಂದ ನಿರೂಪಿಸಲ್ಪಟ್ಟಿದೆ. ಆಗ್ಗಾಗ್ಗೆ ದುರ್ಬಲ ಮಾನ್ಸೂನ್ ಮಾರುತವನ್ನು ಉಂಟುಮಾಡಿ, ಭಾರತದಲ್ಲಿ ಶುಷ್ಕ ಹವಾಮಾನ ಸೃಷ್ಟಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಲಾ ನಿನಾ ಪರಿಸ್ಥಿತಿ ಮಾನ್ಸೂನ್ ಋತುವಿನಲ್ಲಿ ಹೇರಳ ಮಳೆಯನ್ನು ಉಂಟುಮಾಡುತ್ತದೆ.
ಏಪ್ರಿಲ್ ಮಧ್ಯಭಾಗದಲ್ಲೇ ಈ ಕುರಿತು ಭಾರತದ ಹವಾಮಾನ ಇಲಾಖೆ ಮಳೆ ಮುನ್ಸೂಚನೆಯಲ್ಲಿ ವಿವರ ನೀಡಿತ್ತು. ಈ ಸಲದ ಮುಂಗಾರು ಮಳೆ ಸೀಸನ್, ಹೇರಳ ಮಳೆಯಿಂದ ಕೂಡಿರಲಿದೆ ಎಂದು ಮುನ್ಸೂಚನೆ ನೀಡಿದೆ. ಲಾ ನಿನಾ ಪರಿಸ್ಥಿತಿಯು ಬಹುತೇಕ ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಉಂಟಾಗಲಿದೆ ಎಂಬುದು ನಿರೀಕ್ಷೆ.
ಭಾರತದ ಕೃಷಿ ಕ್ಷೇತ್ರ ಬಹುಪಾಲು ಅಂದರೆ ಶೇಕಡ 52ರಷ್ಟು ಮಳೆಯಾಧಾರಿತವಾದ ಕೃಷಿಯನ್ನು, ಬೆಳೆಯನ್ನು ಹೊಂದಿದೆ. ಇದಲ್ಲದೆ, ರಾಷ್ಟ್ರವ್ಯಾಪಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯ ಜಲಾಶಯಗಳ ಮರುಪೂರಣಗೊಳಿಸುವುದಕ್ಕೂ ಮಳೆಯೇ ನಿರ್ಣಾಯಕವಾಗಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.