logo
ಕನ್ನಡ ಸುದ್ದಿ  /  Karnataka  /  Bommai S Government Is Animosity Against People Of Kalyan Karnataka Says Randeep Surjewala

Randeep Surjewala on Kalyan Karnataka: ಕಲ್ಯಾಣ ಕರ್ನಾಟಕದ ಜನರ ವಿರುದ್ಧ ಬೊಮ್ಮಾಯಿ ಸರ್ಕಾರ ದ್ವೇಷ ಸಾಧಿಸುತ್ತಿದೆ: ಸುರ್ಜೇವಾಲ

HT Kannada Desk HT Kannada

Dec 02, 2022 06:31 AM IST

ಕಲಬುರಗಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಮಾತನಾಡಿದರು.

  • ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವುದರ ವಿರುದ್ಧ ನಿಂತಿತ್ತು. ಬಿಜೆಪಿಯ ಆಗಿನ ಅಧ್ಯಕ್ಷರು ಹಾಗೂ ಉಪ ಪ್ರಧಾನಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು ಕಲಬುರಗಿಯಿಂದ ವಿಜಯಪುರದವರೆಗೂ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಆರೋಪಿಸಿದ್ದಾರೆ. 

ಕಲಬುರಗಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಮಾತನಾಡಿದರು.
ಕಲಬುರಗಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಮಾತನಾಡಿದರು.

ಕಲಬುರಗಿ: ಕಲ್ಯಾಣ ಕರ್ನಾಟಕದ ಜನರ ವಿರುದ್ದ ಬೊಮ್ಮಾಯಿ ಅವರ ಸರ್ಕಾರ ದ್ವೇಷ ಸಾಧಿಸುತ್ತಿದೆ. ದ್ವೇಷ, ಬೇಧ ಭಾವದ ಮೂಲಕ, ಈ ಭಾಗದ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಈ ಮಹತ್ವದ ಪ್ರದೇಶಕ್ಕೆ ಸಂವಿಧಾನಬದ್ಧವಾಗಿ ವಿಶೇಷ ಸ್ಥಾನಮಾನ ನೀಡಲು ಸಂಸತ್ತಿನಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೀದರ್‌ನಲ್ಲಿ ಭೀಕರ ಅಪಘಾತ; ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆ ಗಡುವು ಮೇ 7 ರವರೆಗೆ ವಿಸ್ತರಣೆ; ಮರುದಿನದಿಂದಲೇ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ

Mangalore News: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿಗಳು

Bengaluru Crime News: ಸಹಪಾಠಿ ಬಳಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ

ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವುದರ ವಿರುದ್ಧ ನಿಂತಿತ್ತು. ಬಿಜೆಪಿಯ ಆಗಿನ ಅಧ್ಯಕ್ಷರು ಹಾಗೂ ಉಪ ಪ್ರಧಾನಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು ಕಲ್ಬುರ್ಗಿಯಿಂದ ವಿಜಯಪುರದವರೆಗೂ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷ ಈ ಭಾಗದ ಜನರಿಗೆ ವಿಶೇಷ ಸ್ಥಾನಮಾನ ನೀಡಲು ಸಂಕಲ್ಪ ಮಾಡಿ, 2013ರಲ್ಲಿ ಇದನ್ನು ಮಾಡಿ ತೋರಿಸಿತು. ನಾವು ದೇಶದ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ಹೊರತು ಉಳಿದ ಎಲ್ಲಾ ಪಕ್ಷಗಳ ಒಪ್ಪಿಗೆ ಪಡೆದು 371ಜೆ ವಿಶೇಷ ಸ್ಥಾನಮಾನ ನೀಡುವಲ್ಲಿ ಯಶಸ್ವಿಯಾದೆವು.

ಖರ್ಗೆ, ದಿ. ಧರಂಸಿಂಗ್ ಒಟ್ಟಾಗಿ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ

ಈ ದೇಶದ ಎರಡು ಕಡೆ ಅತಿಹೆಚ್ಚು ಒಣ ಪ್ರದೇಶಗಳಿವೆ. ಒಂದು ರಾಜಸ್ಥಾನ ಮತ್ತೊಂದು ಕಲ್ಯಾಣ ಕರ್ನಾಟಕ. ಇಲ್ಲಿನ ಜನರು ಶ್ರಮಜೀವಿಗಳು, ಧೈರ್ಯಶಾಲಿಗಳಾದರೂ ಪ್ರಾಕೃತಿಕ ಅನಾನುಕೂಲ ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ಅವರು ಒಟ್ಟಾಗಿ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಆರಂಭಿಸಿದರು. ಸ್ವಾತಂತ್ರ್ಯ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಈ ಭಾಗದಲ್ಲಿ ತುಂಗಭದ್ರಾ ಆಣೆಕಟ್ಟು, ರಾಯಚೂರಿನಲ್ಲಿ ರಾಜೀವ್ ಗಾಂಧಿ ಥರ್ಮಲ್ ಕೇಂದ್ರ, ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ, ಇಎಸ್ಐ ಆಸ್ಪತ್ರೆ ನಿರ್ಮಾಣ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ವಿಶೇಷ ಸ್ಥಾನಮಾನ ನೀಡುವುದರವರೆಗೂ ಎಲ್ಲವನ್ನೂ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಸುರ್ಜೇವಾಲ ಹೇಳಿದರು.

ಡಿ.10ಕ್ಕೆ ಹೊಸ ಸಂಕಲ್ಪದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಯಜ್ಞ ಆರಂಭ

ಈ ವಿಶೇಷ ಸ್ಥಾನಮಾನದ ಪರಿಣಾಮ ಈ ಭಾಗದ ಸುಮಾರು 40 ಸಾವಿರ ಮಕ್ಕಳಿಗೆ ವೈದ್ಯಕೀಯ ಸೀಟು ಲಭಿಸಿದೆ. ಕಾಂಗ್ರೆಸ್ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 30 ಸಾವಿರ ಯುವಕರಿಗೆ ಸರ್ಕಾರಿ ನೌಕರಿ ನೀಡಲಾಗಿದೆ. ಈಗ ಈ ಎಲ್ಲಾ ಕಾರ್ಯಗಳನ್ನು ಪ್ರಶ್ನೆ ಮಾಡಲಾಗುತ್ತಿದೆ. ಈಗ ಈ ಭಾಗದ ಅಭಿವೃದ್ಧಿಗೆ ಹೊಸ ಯಜ್ಞ ಆರಂಭವಾಗಬೇಕಿದೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣ ಸಿಗುವಂತೆ ಆಗಬೇಕು. ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಎಲ್ಲಾ ನಾಯಕರ ನೇತೃತ್ವದಲ್ಲಿ ಡಿ.10 ರಂದು ಹೊಸ ಸಂಕಲ್ಪದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಯಜ್ಞ ಆರಂಭಿಸಬೇಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ 40 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆರೋಗ್ಯ, ಶಿಕ್ಷಣ, ಉದ್ಯೋಗ, ವಿದ್ಯುತ್, ನೀರಿನ ವಿಚಾರವಾಗಿ ಹಲವು ಭಾಗಗಳಲ್ಲಿ ಸಮಸ್ಯೆ ಇವೆ.

ಈ ಭಾಗದಲ್ಲಿ ಬಡವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಒಂದನೇ ತರಗತಿಯಿಂದ 8 ನೇ ತರಗತಿವರೆಗಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ದಶಕಗಳಿಂದ ಕಾಂಗ್ರೆಸ್ ಸರ್ಕಾರ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿ ಸರ್ಕಾರ ನಿಲ್ಲಿಸಿದೆ. ಆ ಮೂಲಕ ಬಡವರಿಂದ ಶಿಕ್ಷಣದ ಹಕ್ಕು ಕಸಿಯಲಾಗಿದೆ.

ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷ ವಹಿಸಿದೆ. ಕಾಗದದ ಮೇಲೆ ಮೀಸಲಾತಿ ಹೆಚ್ಚಳ ಮಾಡಿದರೆ ಸಾಲದು. ಅದನ್ನು ಸಂವಿಧಾನದಲ್ಲಿ ಸೇರಿಸಬೇಕು. ಈ ಭಾಗದ ರಕ್ಷಣೆಗಾಗಿ ನಾವು ಸಂವಿಧಾನದಲ್ಲಿ ಬದಲಾವಣೆ ತಂದಿದ್ದೇವೆ. ನಾವು ಕೂಡ ವಿಶೇಷ ಸ್ಥಾನಮಾನ ಅಸಾಧ್ಯ ಎಂದು ಭಾವಿಸಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.

ಈಗ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬೊಮ್ಮಾಯಿ ಅವರ ಸರ್ಕಾರ ಕೇವಲ ಆಸೆ ತೋರಿಸುತ್ತಿದೆ. ಈ ವಿಚಾರವಾಗಿ ಬೊಮ್ಮಾಯಿ ಅವರ ಸರ್ಕಾರದ ಪ್ರಸ್ತಾವನೆಯನ್ನು ಮೋದಿ ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ. ಹೀಗಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಬಿಜೆಪಿಯಿಂದ ಅಸಾಧ್ಯ. ಇದು ಕೇವಲ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ನಾವು ಅದನ್ನು ಮಾಡಲು ಕಟಿಬದ್ಧರಾಗಿದ್ದೇವೆ. ಬಡವರು, ರೈತರು, ಯುವಕರು, ಮಹಿಳೆಯರ ಮೇಲೆ ಆಗುತ್ತಿರುವ ಪ್ರಹಾರದ ವಿರುದ್ಧ ನಾವು ಜನಾಂದೋಲನ ರೂಪಿಸುತ್ತಿದ್ದು, ಮುಂದಿನ 10 ರಂದು ಸಮಾವೇಶ ಮಾಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಅಧ್ಯಕ್ಷರು ಸೂಚನೆ ನೀಡಲಿದ್ದಾರೆ ಎಂದು

ಜನರ ಬದುಕಿನ ಜತೆ ಚೆಲ್ಲಾಟ ಆಡುವುದು ಬಿಜೆಪಿ ಕೆಲಸ. ಆದರೆ ಕಾಂಗ್ರೆಸ್ ದು ಜನರ ಬದುಕು ಕಟ್ಟುವ ಕೆಲಸವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಜತೆ ಬಿಜೆಪಿ ಸರ್ಕಾರ ಆಡುತ್ತಿರುವ ಆಟವನ್ನು ನಿಲ್ಲಿಸಬೇಕಿದೆ. ಬಿಜೆಪಿ ಸಮಾಜ ಒಡೆದರೆ, ನಾವು ಸಮಾಜ ಒಂದುಗೂಡಿಸುತ್ತೇವೆ ಎಂದು ಸುರ್ಜೇವಾಲ ಹೇಳಿದರು.

ಕಲ್ಯಾಣ ಕರ್ನಾಟಕಕ್ಕೆ 371 ಜೆ ವಿಶೇಷ ಸ್ಥಾನಮಾನ ನೀಡಿ 10 ವರ್ಷ: ಡಿ. 10 ರಂದು ದೊಡ್ಡ ಕಾರ್ಯಕ್ರಮ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗದ ಕಲ್ಯಾಣಕ್ಕೆ ಶಕ್ತಿ ತಂದ 371 ಜೆ ವಿಶೇಷ ಸ್ಥಾನಮಾನಕ್ಕೆ 10 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿ.10 ರಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಡಿಸೆಂಬರ್ 1 ರಂದು ನಮ್ಮ ಎಲ್ಲಾ ನಾಯಕರ ಜತೆ ಚರ್ಚೆ ಮಾಡಲಾಗಿದೆ. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಅವರು ತಮ್ಮ ರಾಜಕೀಯ ಜೀವನದಲ್ಲಿ ಅತಿ ದೊಡ್ಡ ಸಾಕ್ಷಿ ಗುಡ್ಡೆ ಹಾಕಿದ್ದಾರೆ. ಆ ಮೂಲಕ ಈ ಭಾಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತಮ್ಮ ಜನ್ಮ ಭೂಮಿಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಖರ್ಗೆ ಅವರು ಸಂವಿಧಾನ ತಿದ್ದುಪಡಿ ಮೂಲಕ ಈ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತಂದರು. ಹೀಗಾಗಿ ನಾವು ಅವರಿಗೆ ಅಭಿನದನೆ ಸಲ್ಲಿಸಬೇಕು. ಇಂತಹ ಹಲವು ಹೋರಾಟಗಳ ಮೂಲಕ ಇಂದು ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರಿಗೆ ಕೆಲವು ಮಾರ್ಗದರ್ಶನ ನೀಡಲು ಇಲ್ಲಿಗೆ ಬಂದಿದ್ದೇವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೈತ್ರಿ ಸರ್ಕಾರದ ರೀತಿ ಕೆಲಸ ಮಾಡುತ್ತಿದೆ. ಈ ಭಾಗದಿಂದ ಹೆಚ್ಚಿನ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ಭಾಗದ ಜನರ ಮೇಲೆ ದ್ವೇಷದ ಮನೋಭಾವ ತೋರುತ್ತಿದೆ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ನಮ್ಮ ನಾಯಕರು ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂದರು.

ಸರ್ಕಾರದ ತಪ್ಪುಗಳನ್ನು ನಾವು ತೋರಿಸಿ, ಅವರು ಎಲ್ಲಿ ತಿದ್ದಿಕೊಳ್ಳಬೇಕು ಎಂದು ತೋರಿಸಬೇಕಾದ ಅಗತ್ಯವಿದೆ. ನಮ್ಮ ಪಕ್ಷದ ಉದ್ದೇಶ ಜನರ ಬದುಕು ಸುಧಾರಣೆ ಕಾಣುವುದು. ಬಿಜೆಪಿಯವರ ಉದ್ದೇಶ ಭಾವನೆಗಳ ಮೇಲೆ ರಾಜಕೀಯ ಮಾಡುವುದು. ಭಾವನೆ ಹಾಗೂ ಬದುಕಿನ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಬಿಜೆಪಿ ಭಾವನಾತ್ಮಕ ವಿಷಯಗಳಿಗೆ ಒತ್ತು ನೀಡಿದರೆ, ನಾವು ಜನರ ಬದುಕಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ಈ ಬೃಹತ್ ಕಾರ್ಯಕ್ರಮವನ್ನು ನಮ್ಮ ಎಲ್ಲಾ ನಾಯಕರು ರೂಪಿಸಿದ್ದಾರೆ ಎಂದು ಡಿಕೆಶಿ ವಿವರಿಸಿದರು.

    ಹಂಚಿಕೊಳ್ಳಲು ಲೇಖನಗಳು