CM Bommai on Chikkaballapur Utsava: ಚಿಕ್ಕಬಳ್ಳಾಪುರ ಉತ್ಸವ ಜನರ ಬದುಕಿನ ಭವಿಷ್ಯ ಬರೆಯಲು ಮುನ್ನುಡಿ: ಸಿಎಂ ಬೊಮ್ಮಾಯಿ
Jan 08, 2023 07:24 AM IST
ಚಿಕ್ಕಬಳ್ಳಾಪುರ ಉತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿ ಕೋವಿಡ್ ನಿರ್ವಹಣೆಯನ್ನು ದೇಶಕ್ಕೇ ಮಾದರಿ ಎಂಬಂತೆ ಮಾಡಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಸಚಿವರಿಗೆ, ಆರೋಗ್ಯ ಸಿಬ್ಬಂದಿಗೆ ಸಲ್ಲಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಭಗವಂತ ಆಶೀರ್ವಾದ ಮಾಡುತ್ತಾನೆ ಎಂದು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ: ಬಯಲುಸೀಮೆಯ ಭಾಗ, ಐತಿಹಾಸಿಕ ತಾಣಗಳ ಕೇಂದ್ರವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಉತ್ಸವಕ್ಕೆ ನಿನ್ನೆ (ಜ.7, ಶನಿವಾರ 2023) ಅದ್ದೂರಿಯ ಚಾಲನೆ ದೊರೆಯಿತು.
ಕಲೆ, ಕ್ರೀಡೆ, ಆಹಾರ, ಉದ್ಯೋಗಾವಕಾಶ, ಆರೋಗ್ಯ ಮೇಳ ಮೊದಲಾದವುಗಳನ್ನೊಳಗೊಂಡ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಹಾಗೆಯೇ, ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ʼಚಿಕ್ಕಬಳ್ಳಾಪುರ ಉತ್ಸವʼವು ಮುನ್ನುಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಜನವರಿ 7 ರಿಂದ 14 ವರೆಗೆ ಚಿಕ್ಕಬಳ್ಳಾಪುರ ಉತ್ಸವ ನಡೆಯಲಿದೆ. ಈ ವಿಜೃಂಭಣೆಯ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ‘ಚಿಕ್ಕಬಳ್ಳಾಪುರ ಉತ್ಸವ’ವು ಮುನ್ನುಡಿಯಾಗಲಿದೆ. ಪ್ರಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನದಲ್ಲಿ ಸಾಧನೆ ಮಾಡಿದ ಸಿಎನ್ಆರ್ ರಾವ್ ಇಲ್ಲಿಯವರೇ ಆಗಿದ್ದಾರೆ. ಹೀಗೆ ಇಬ್ಬರು ಭಾರತರತ್ನಗಳನ್ನು ಈ ಜಿಲ್ಲೆ ನೀಡಿದೆ. ಇತಿಹಾಸ ಪ್ರಸಿದ್ಧ ಭೋಗನಂದೀಶ್ವರ ದೇವಸ್ಥಾನ ಇಲ್ಲೇ ಇದೆ. ಇಂತಹ ವಿಶಿಷ್ಟ ಜಿಲ್ಲೆಯನ್ನು ಈಗ ಫಲ ಪುಷ್ಪ ಗಿರಿಧಾಮ ನಾಡು ಎಂದು ಕರೆಯಲಾಗಿದೆ. ಈ ಹೆಸರನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತಗೊಳಿಸಲಾಗುವುದು ಎಂದು ತಿಳಿಸಿದರು.
ಡಾ.ಕೆ.ಸುಧಾಕರ್ ಅವರು ಆರೋಗ್ಯ ಸಚಿವರಾಗಿ ಕೋವಿಡ್ ನಿರ್ವಹಣೆಯನ್ನು ದೇಶಕ್ಕೇ ಮಾದರಿ ಎಂಬಂತೆ ಮಾಡಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಸಚಿವರಿಗೆ, ಆರೋಗ್ಯ ಸಿಬ್ಬಂದಿಗೆ ಸಲ್ಲಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಭಗವಂತ ಆಶೀರ್ವಾದ ಮಾಡುತ್ತಾನೆ. ಅದರಂತೆ ಸುಧಾಕರ್ ಅವರು ರಾಜ್ಯದ ಸೇವೆ ಮಾಡಿದ ಬಳಿಕ ಬರಡು ಭೂಮಿಯಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಮಳೆಯಾಗಿದೆ. ಇಲ್ಲಿ ಬೆಳೆಯುವ ತರಕಾರಿ, ರೇಷ್ಮೆ, ಹಾಲು ಉತ್ಕೃಷ್ಟವಾಗಿದೆ. ನಮ್ಮ ಮನೆಯಲ್ಲೂ ಚಿಕ್ಕಬಳ್ಳಾಪುರದ ತರಕಾರಿ ಬಳಸುತ್ತೇವೆ ಎಂದರು.
ಭಗೀರಥ ಬೊಮ್ಮಾಯಿ
ಸಚಿವ ಡಾ ಕೆ ಸುಧಾಕರ್ ಮಾತನಾಡಿ, ನೀರಾವರಿ ಸಚಿವರಾಗಿದ್ದಾಗ ಎತ್ತಿನಹೊಳೆ ಯೋಜನೆ ರೂಪಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ಈ ಜಿಲ್ಲೆಯ ನಿಜವಾದ ಭಗೀರಥ. ಅಷ್ಟೇ ಅಲ್ಲ ಈ ಯೋಜನೆಯ ಮೂಲ ವೆಚ್ಚವನ್ನು 13,000 ಕೋಟಿ ರೂ. ನಿಂದ 23,000 ಕೋಟಿ ರೂ.ಗೆ ಏರಿಸಿ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ದಿ.ಶಂಕರ್ನಾಗ್ ಅವರ ಕನಸಾಗಿದ್ದ ನಂದಿಬೆಟ್ಟದ ರೋಪ್ ವೇ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಎಲ್ಲವನ್ನೂ ಮುಂದಿನ 7 ದಿನಗಳಲ್ಲಿ ಹಬ್ಬವನ್ನಾಗಿ ಆಚರಿಸಿಕೊಂಡು, ಬೆಂಗಳೂರಿಗೆ ಸಹಕಾರವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಲು ಪ್ರಯತ್ನ ಪಡುವುದಾಗಿ ಅವರು ಹೇಳಿದರು.
ಅದ್ಧೂರಿ ಮೆರವಣಿಗೆ
ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಗ್ಗೆ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡಂತೆ ವಿಜೃಂಭಣೆಯ ಮೆರವಣಿಗೆ ನಡೆಯಿತು. ಚಿಕ್ಕಬಳ್ಳಾಪುರದ ಇತಿಹಾಸ, ಕಲಾ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಮೆರವಣಿಗೆ ಜನಮನಸೂರೆಗೊಂಡಿತು.
ಫಲ ಪುಷ್ಪ ಗಿರಿಧಾಮ ನಾಡು
ಚಿಕ್ಕಬಳ್ಳಾಪುರ ಜಿಲ್ಲೆಗೆ ‘ಫಲ ಪುಷ್ಪ ಗಿರಿಧಾಮ ನಾಡು’ ಎಂಬ ಹೆಸರನ್ನು ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಈ ಹೆಸರನ್ನು ಅನಾವರಣ ಮಾಡಲಾಯಿತು.
ಕಿಚ್ಚ ಸುದೀಪ್ ಮೆರುಗು
ಕಾರ್ಯಕ್ರಮಕ್ಕೆ ಬಂದ ಜನಪ್ರಿಯ ಚಿತ್ರ ನಟ ಸುದೀಪ್ ಅವರು ಹೆಚ್ಚು ಮೆರುಗು ತಂದರು. ಕೋವಿಡ್ ಸಮಯದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗೆಡೆ, ಸಚಿವರಾದ ವಿ.ಸುನಿಲ್ಕುಮಾರ್, ಭೈರತಿ ಬಸವರಾಜು, ಎಂಟಿಬಿ ನಾಗರಾಜ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.