Dist Elephant Task force: ಕಾಡಾನೆ ಹಾವಳಿ ತಡೆಗಟ್ಟಲು ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಫೋರ್ಸ್; ಯಾವ ಜಿಲ್ಲೆ, ಸಮಿತಿಯಲ್ಲಿ ಯಾರು?
Nov 22, 2022 10:33 AM IST
ಕಾಡಾನೆ ಹಾವಳಿ ತಡೆಗಟ್ಟುವುದಕ್ಕಾಗಿ ಸರ್ಕಾರ ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಿದೆ.
Dist Elephant Task force: ಕಾಡಾನೆ ಹಾವಳಿ ತಡೆಗಟ್ಟುವುದಕ್ಕಾಗಿ ಸರ್ಕಾರ ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ಈ ಕುರಿತ ಸಭೆ ನಡೆಯಿತು.
ಬೆಂಗಳೂರು: ರಾಜ್ಯದ 4 ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಆನೆ ಟಾಸ್ಕ್ ಫೋರ್ಸ್ ರಚಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ (ನ.21) ಗೃಹಕಚೇರಿ ಕೃಷ್ಣದಲ್ಲಿ ಸಭೆ ನಡೆಯಿತು. ಇದರಲ್ಲಿ, ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಳವಾಗಿದ್ದು, ಇದನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಎಲಿಫಂಟ್ ಟಾಸ್ಕ್ ಫೋರ್ಸ್ ರಚಿಸಬೇಕೆಂಬ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ತೀರ್ಮಾನವಾದ ಪ್ರಮುಖ ಅಂಶಗಳಿವು -
- ಪ್ರಧಾನ ಮುಖ್ಯ, ಅರಣ್ಯ ಸಂರಕ್ಷಣಾಧಿಕಾರಿ ಪ್ರತಿ ಜಿಲ್ಲೆಯ ಟಾಸ್ಕ್ ಫೋರ್ಸ್ಗೆ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಬೇಕು.
- ಆಯಾ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶನದಲ್ಲಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಬೇಕು.
- ಪ್ರತಿ ಜಿಲ್ಲಾ ಟಾಸ್ಕ್ ಫೋರ್ಸ್ಗೆ 3 ಬೊಲೆರೊ ವಾಹನ, ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಬೇಕು.
- ಕಾಡಾನೆ ಹಾವಳಿ ಇರುವ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ಗಸ್ತು ತಿರುಗಬೇಕು.
- ಜನವಸತಿ ಮತ್ತು ಕೃಷಿ ಪ್ರದೇಶ, ಕಾಫಿ ಎಸ್ಟೇಟ್ಗಳಲ್ಲಿ ಚಲನವಲನ ಗುರುತಿಸಿ ಆನೆಗಳನ್ನು ಹಿಮ್ಮೆಟ್ಟಿಸಬೇಕು. ಆನೆಗಳನ್ನು ಹಿಮ್ಮೆಟ್ಟಿಸುವ ವೇಳೆ ಪೊಲೀಸ್ ಇಲಾಖೆ ನೆರವು ಪಡೆಯಬೇಕು.
- ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡಬೇಕು. ಅರಣ್ಯದೊಳಗೆ ಹೋಗದಂತೆ ಸಾರ್ವಜನಿಕರಿಗೆ ತಿಳಿವಳಿಕೆ ಕೊಡಬೇಕು.
- ಪ್ರತಿ ಟಾಸ್ಕ್ ಫೋರ್ಸ್ಗೆ ಕೇಂದ್ರ ಸ್ಥಾನದಲ್ಲಿ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ ಇರಬೇಕು. ಇದು ಸಾರ್ವಜನಿಕರಿಗೆ ತಿಳಿದಿರಬೇಕು.
- ಆನೆ ಟಾಸ್ಕ್ ಫೋರ್ಸ್ಗೆ ಅಗತ್ಯ ಸಾಮಗ್ರಿ ಪೂರೈಸಬೇಕು. ಅರಣ್ಯ ಪಡೆ ಮುಖ್ಯಸ್ಥರು ವಾಕಿಟಾಕಿ, ಬಂದೂಕು, ಪಟಾಕಿ ಪೂರೈಸಬೇಕು.
- ಪ್ರಧಾನ ಮುಖ್ಯ, ಅರಣ್ಯ ಸಂರಕ್ಷಣಾಧಿಕಾರಿ ಟಾಸ್ಕ್ ಫೋರ್ಸ್ಗೆ ಅಗತ್ಯವಿರುವ ವಾಕಿಟಾಕಿ, ಬಂದೂಕು, ಪಟಾಕಿ ಹಾಗೂ ಸರ್ವಾಜನಿಕ ಜಾಗೃತಿ ಮೂಡಿಸಲು ಉಪಯೋಗಿಸುವ ಸಲಕರಣೆ ಮತ್ತು ಸೌಲಭ್ಯ ಒದಗಿಸಬೇಕು.
ಟಾಸ್ಟ್ ಫೋರ್ಸ್ನಲ್ಲಿ ಒಟ್ಟು 47 ಸದಸ್ಯರು ಇರುತ್ತಾರೆ. ನಾಲ್ಕು ಜಿಲ್ಲೆಗಳ ಕೇಂದ್ರ ಸ್ಥಾನದ ವಿವರ ಹೀಗಿದೆ.
ಚಿಕ್ಕಮಗಳೂರಿಗೆ ಮೂಡಿಗೆರೆ, ಹಾಸನಕ್ಕೆ ಸಕಲೇಶಪುರ, ಮೈಸೂರಿಗೆ ಹುಣಸೂರು, ಕೊಡಗಿಗೆ ಮಡಿಕೇರಿ ಕೇಂದ್ರ ಸ್ಥಾನ ಎಂದು ಸರ್ಕಾರ ಹೇಳಿದೆ.