DK Shivakumar: 'ಬಿಜೆಪಿಯವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ರೌಡಿಶೀಟರ್ಗಳನ್ನ ಸೇರಿಸಿಕೊಳ್ಳುತ್ತಿದ್ದಾರೆ'
Dec 02, 2022 04:08 PM IST
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
- ಬಿಜೆಪಿಗೆ ಸಾಲು ಸಾಲು ರೌಡಿ ಶೀಟರ್ಗಳ ಸೇರ್ಪಡೆ ಆರೋಪ ವಿಚಾರವಾಗಿ ನಿನ್ನೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 'ಅವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ಸೇರಿಸಿಕೊಳ್ಳುತ್ತಿದ್ದಾರೆ, ಸೇರಿಸಿಕೊಳ್ಳಲಿ ಬಿಡಿ' ಎಂದು ಛೇಡಿಸಿದರು.
ಬೆಂಗಳೂರು: ಬಿಜೆಪಿಗೆ ಸಾಲು ಸಾಲು ರೌಡಿ ಶೀಟರ್ಗಳ ಸೇರ್ಪಡೆ ಆರೋಪ ವಿಚಾರವಾಗಿ ನಿನ್ನೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 'ಅವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ಸೇರಿಸಿಕೊಳ್ಳುತ್ತಿದ್ದಾರೆ, ಸೇರಿಸಿಕೊಳ್ಳಲಿ ಬಿಡಿ' ಎಂದು ಛೇಡಿಸಿದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಪ್ರತಿಕ್ರಯಿಸಿದ ಡಿಕೆಶಿ, ಚುನಾವಣೆ ಸಮಯದಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಮಹಾರಾಷ್ಟ್ರದ ಯಾವುದೇ ಪಕ್ಷದವರಾಗಿರಲಿ ಗಡಿ ವಿವಾದದ ಹೆಸರಲ್ಲಿ ಶಾಂತಿ ಕದಡುವುದು, ಇದರಲ್ಲಿ ಭಾಗಿಯಾಗುವುದು ಸರಿಯಲ್ಲ ಎಂದರು.
ನಮ್ಮ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಮೇಲಿರುವ ಕಳಂಕ ಮರೆಮಾಚಿಕೊಳ್ಳಲು ಇದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಸಂಚು ಇದೆ. ಗಡಿ ವಿವಾದ ಈಗಾಗಲೇ ಇತ್ಯರ್ಥ ಆಗಿರುವ ವಿಚಾರ. ನಮ್ಮ ಗಡಿಯೊಳಗಿನ ಪ್ರದೇಶ ನಮ್ಮದು, ಅವರ ಗಡಿಯೊಳಗಿನ ಪ್ರದೇಶ ಅವರದ್ದು. ಇಲ್ಲಿರುವವರೆಲ್ಲ ನಮ್ಮವರೇ. ಬೆಳಗಾವಿಯಲ್ಲಿ ನಾವು ಸುವರ್ಣಸೌಧ ಕಟ್ಟಿದ್ದು, ಯಾರೂ ಶಾಂತಿ ಭಂಗ ಕೆಲಸ ಮಾಡಬಾರದು ಎಂದು ಹೇಳಿದರು.
ಚುನಾವಣೆಗಾಗಿ ಬಿಜೆಪಿ ಸಿದ್ಧಾಂತ ಮರೆಯುತ್ತಿದೆಯೇ ಎಂಬ ಪ್ರಶ್ನೆಗೆ, ಬಿಜೆಪಿಗೆ ಯಾವಾಗ ಯಾವ ಸಿದ್ಧಾಂತ ಇತ್ತು? ಅವರು ಸಿದ್ಧಾಂತದ ಬಗ್ಗೆ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಅವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ಭಾವನೆಗೂ, ಬದುಕಿಗೂ ವ್ಯತ್ಯಾಸವಿದೆ. ಬದುಕಿನ ಮೇಲೆ ರಾಜಕಾರಣ ಮಾಡಿಲ್ಲ. ಜನರ ಹೊಟ್ಟೆ ತುಂಬಿಸಿ, ಅವರಿಗೆ ಉದ್ಯೋಗ ಕೊಟ್ಟು, ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಬೇಕು ಎಂಬುದು ಅವರಲ್ಲಿ ಇಲ್ಲ. ಅವರಿಗೇನಿದ್ದರೂ ಭಾವನೆಗಳ ವಿಚಾರದ ಮೇಲಷ್ಟೇ ಆಸಕ್ತಿ ಎಂದರು.
ಇನ್ನು ಇಂದು, ರೌಡಿ ನಾಗ ಸಚಿವ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಅವರ ಪಕ್ಷದಲ್ಲಿ ಕಾರ್ಯಕರ್ತರು ಇಲ್ಲ. ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದು, ಹೀಗಾಗಿ ಅವರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಬಹಳಷ್ಟು ರೌಡಿಗಳಿದ್ದು, ಲೆಕ್ಕ ಹಾಕಿ ಹೇಳಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ, ಈಗ ಅವರು ಯಾರ ಜತೆ ಪ್ರೀತಿ, ವಿಶ್ವಾಸ ಹೊಂದಿದ್ದಾರೆ, ಅವರ ಸಂಸ್ಕೃತಿ ಏನು ಎಂಬುದು ಎಲ್ಲವೂ ಬಹಿರಂಗವಾಗುತ್ತಿದೆ. ಇದೇನು ಹೊಸತಲ್ಲ. ತಮ್ಮಲ್ಲಿರುವ ಕಲಹ ಬಿಟ್ಟು ಬೇರೆಯವರ ಕಲಹದ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಗಮನಿಸಬಹುದಾದ ಇತರೆ ಸುದ್ದಿ
ಸೈಲೆಂಟ್ ಸುನೀಲ್ ನನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ: ನಳಿನ್ ಕುಮಾರ್ ಕಟೀಲ್
ಬಿಜೆಪಿ ನಾಯಕರು ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ವೇದಿಕೆ ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲ್ ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ