Online Fraud: ಆನ್ಲೈನ್ನಲ್ಲಿ ಹಸು ಖರೀದಿಗೆ ಮುಂದಾದ ಅನ್ನದಾತನಿಗೆ ವಂಚನೆ: ಹಣ ವಾಪಸ್ ಕೊಡಿಸಿದ ಪೊಲೀಸರು
Oct 08, 2023 10:07 AM IST
ಆನ್ ಲೈನ್ ವಂಚನೆಗೆ ಒಳಗಾದ ಕಲಬುರಗಿ ರೈತನಿಗೆ ಹಣ ಹಿಂದುರಿಗಿಸಿದ ಪೊಲೀಸರು.
- Kalburgi Crime ಆನ್ಲೈನ್ ಮೂಲಕ ಗುಜರಾತ್ನ ಖಿಲಾರಿ ಎತ್ತು ಖರೀದಿಗೆ ಮುಂದಾದ ರೈತ ವಂಚನೆಗೆ ಒಳಗಾಗಿದ್ದು, ಕಲಬುರಗಿ ಪೊಲೀಸರು ಜಾಲ ಬೇಧಿಸಿ ಹಣ ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿ: ಇದೊಂದು ರೀತಿ ಹೊಸ ತರದ ವಂಚನೆ. ಜಾನುವಾರುಗಳ ಫೋಟೋ ಅಪ್ಲೋಡ್ ಮಾಡಿ ವಂಚಿಸುವ ಪರಿ. ಈ ವಂಚನೆ ಜಾಲಕ್ಕೆ ಸಿಲುಕಿದವರು ಕಲಬುರಗಿಯ ರೈತ. ಆದರೆ ಇವರ ಅದೃಷ್ಟ ಚೆನ್ನಾಗಿತ್ತು ಎನ್ನಿಸುತ್ತದೆ. ವಂಚನೆಗೆ ಒಳಗಾದ ರೈತನ ಹಣ ವಾಪಾಸ್ ಕೊಡಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ನಲ್ಲಿ ನಕಲಿ ಖಾತೆ ತೆರೆದು ಗುಜರಾತ್ನ ಖಿಲಾರಿ ಎತ್ತುಗಳ ಮಾರಾಟದ ಜಾಹೀರಾತನ್ನು ನಂಬಿದ ರೈತನೊಬ್ಬರು 52 ಸಾವಿರ ರೂ. ಹಣ ಹಾಕಿ ವಂಚನೆಗೊಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾ ಸೆನ್ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇದೀಗ ರೈತನಿಗೆ 38,167 ರೂ. ಹಣವನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮಾರ್ಚ್ 20 ರಂದು ವಂಚಕನೊಬ್ಬ ರಾಜ್ಯಸ್ಥಾನ ಜೈಪುರ ಮೂಲದ ಹೆಸರಿನಲ್ಲಿ ಫೇಸ್ ಬುಕ್ ಖಾತೆಯನ್ನು ತೆರೆದಿದ್ದು, ಅದರಲ್ಲಿ ಎರಡು ಸುಂದರವಾದ ಖಿಲಾರಿ ಎತ್ತುಗಳ ಫೋಟೋ ಹಾಕಿ ಇದಕ್ಕೆ 70 ಸಾವಿರವೆಂದು ಬರೆದು ಅಪ್ ರೋಡ್ ಮಾಡಿದ್ದಾನೆ. ಇದನ್ನು ನೋಡಿದ ಕಲಬುರಗಿ ಜಿಲ್ಲೆಯ ಮರತೂರಿನ ಮಲ್ಲಿಕಾರ್ಜುನ ಅವರು ಆ ವ್ಯಕ್ತಿಯನ್ನು ಫೇಸ್ ಬುಕ್ ಚ್ಯಾಟಿಂಗ್ ಮೂಲಕವೇ ಸಂಪರ್ಕಿಸಿದ್ದಾರೆ.
ಹೀಗಿದ್ದು, ಆಕಳುಗಳನ್ನು ಖರೀದಿ ಮಾಡುವುದಾಗಿ ಹೇಳಿದ ಮಲ್ಲಿಕಾರ್ಜುನನಿಂದ ವಂಚಕ ಎರಡು ಬಾರಿಯಂತೆ ಒಟ್ಟು 52 ಸಾವಿರ ರೂ. ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಆದರೆ, ಹಣ ಜಮೆಯಾದರೂ ಸಹ ಎರಡು ಎತ್ತುಗಳನ್ನು ನೀಡದೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.
ಇದರಿಂದ ಗಾಬರಿಗೊಂಡ ರೈತ ಮಲ್ಲಿಕಾರ್ಜುನ ಕೂಡಲೇ 1930ಗೆ ಕರೆ ಮಾಡಿದ್ದರಿಂದ ಗೋಲ್ಡನ್ (ಸುವರ್ಣ ಅವಧಿ) ಅವರ್ನಲ್ಲಿ ದಾಖಲಿಸಿಕೊಂಡ ಜಿಲ್ಲಾ ಸೆನ್ ಪೊಲೀಸರು ಪಿಐ ಪರಶುರಾಮ ವನಂಜಕರ್ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಂಚಕನ ಖಾತೆಯಲ್ಲಿದ್ದ ಹಣಕ್ಕೆ ಲಾಕ್ ಮಾಡಿದ್ದಾರೆ. ಇದರಿಂದಾಗಿ ರೈತನ 38 ಸಾವಿರ ಹಣವನ್ನು ಪೊಲೀಸರು ವಂಚಕನಿಂದ ರಕ್ಷಣೆ ಮಾಡಿದ್ದಾರೆ.
ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಪಿಐ ಪರಶುರಾಮ ವನಂಜಕರ್ ಅವರ ನೇತೃತ್ವದಲ್ಲಿ ಪಿಎಸ್ಐ ಶ್ರೀದೇವಿ, ಸಿಬ್ಬಂದಿಗಳಾದ ಸಿದ್ದು ಪೂಜಾರಿ, ಕುಶಣ್ಣ ಗುಡೂರ್, ಸಿದ್ದು ಪಾಟೀಲ್ ಅವರ ತಂಡವು ನಿನ್ನೆ ರೈತ ಮಲ್ಲಿಕಾರ್ಜುನ ಅವರನ್ನು ಕಚೇರಿಗೆ ಕರೆಸಿ 38 ಸಾವಿರದ 165 ರೂ. ಹಣವನ್ನು ಹಿಂದಿರುಗಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ವಂಚನೆಗೆ ಒಳಗಾದಲ್ಲಿ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿದರೆ ಸೆನ್ ಪೊಲೀಸರು ತಮ್ಮ ಗೋಲ್ಡನ್ ಅವರ್ನಲ್ಲಿ ಸಾಧ್ಯವಾದಷ್ಟು ಹಣವನ್ನು ವಂಚಕ ಬೇರೊಂದು ಖಾತೆಗೆ ವರ್ಗಾವಣೆ ಮಾಡುವುದರೊಳಗಾಗಿ ಆತನ ಖಾತೆ ಲಾಕ್ ಮಾಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಇಂತಹ ಮೋಸಗಾರರ ಕುರಿತು ಎಚ್ಚರದಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಿಂದ ಕಲಬುರಗಿಗೆ ಮದ್ಯ ಸಾಗಾಟ ಪ್ರಕರಣ
ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದಿಂದ ಖಾಸಗಿ ಬಸ್ವೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಾಟದ ಜಾಲವನ್ನು ಪತ್ತೆಹಚ್ಚಿದ ಬೆನ್ನಲ್ಲಿಯೇ ಇದೀಗ ಮತ್ತೆ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಕಲಬುರಗಿ ನಗರಕ್ಕೆ ಅಕ್ರಮವಾಗಿ ಕಾರಿಯಲ್ಲಿ ಮದ್ಯಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪಟ್ಟಣ ಕ್ರಾಸ್ ಬಳಿ ಬಂಧಿಸಿ ಅವರಿಂದ 13 ಲಕ್ಷದ 72 ಸಾವಿರ ಮೌಲ್ಯದ ಅಕ್ರಮ ಮದ್ಯ ಕಾರು ಜಪ್ತಿ ಮಾಡಿಕೊಳ್ಳುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಉಮರ್ಗಾದ ನಿವಾಸಿಗಳಾದ ಬಾಲಾಜಿ ತಂದೆ ಶಿವರಾಜ ಬಿರಾದಾರ ಹಾಗೂ ಕುಮಾರ ಮಾನಾಳೆ ಎಂಬುವರೆ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಮಹಾರಾಷ್ಟ್ರ ರಾಜ್ಯದಿಂದ ಅಕ್ರಮವಾಗಿ ಕಲಬುರಗಿ ನಗರಕ್ಕೆ ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಕಲೆ ಹಾಕಿದ ಕಲಬುರಗಿ ವಿಭಾಗದ ಅಬಕಾರಿ ಉಪ ಆಯುಕ್ತರ ನಿರ್ದೇಶದನ್ವಯ ಕಲಬುರಗಿ ಅಬಕಾರಿ ಉಪ ಅಧೀಕ್ಷಕ ದೊಡ್ಡಪ್ಪ ಹೆಬಳೆ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಶಿವಾನಂದ ಪಾಟೀಲ್, ಉಪ ನಿರೀಕ್ಷಕರಾದ ನರೇಂದ್ರ ಹೊಸಮನಿ, ಪೇದೆಗಳಾದ ರವಿಕುಮಾರ, ರಾಜೇಂದ್ರನಾಥ ಇತರರು ಸ್ಥಳಕ್ಕೆ ಧಾವಿಸಿ ಕಾರು ತಪಾಸಣೆ ನಡೆಸಿ ಇಬ್ಬರನ್ನು ಬಂಧಿಸಿ ವಾಹನ ಸಮೇತ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.