Karnataka 40 percent commission: ಕಮಿಷನ್ ಆರೋಪ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಬಂಧನ, ಜಾಮೀನು
Dec 25, 2022 09:38 AM IST
ಸಾಂದರ್ಭಿಕ ಚಿತ್ರ
- ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ವಿ.ಕೃಷ್ಣಾರೆಡ್ಡಿ, ಗುರುಸಿದ್ದಪ್ಪ ಮತ್ತು ಖಜಾಂಚಿ ನಟರಾಜ್ರನ್ನು ಬಂಧಿಸಿದ್ದಾರೆ. ಬಳಿಕ ಇವರಿಗೆ ಜಾಮೀನು ದೊರಕಿದ್ದು, ಬಿಡುಗಡೆ ಮಾಡಲಾಗಿದೆ.
ಬೆಂಗಳೂರು: ತನ್ನ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ವಿರುದ್ಧ ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನಮಾನನಷ್ಟ ಮೊಕದ್ದಮ್ಮೆ ಹಾಕಿದ್ದು, ಇದೀಗ ವೈಯಾಲಿಕಾವಲ್ ಪೊಲೀಸರು ಡಿ.ಕೆಂಪಣ್ಣ ಮತ್ತು ಇತರೆ ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಇವರಿಗೆ ಜಾಮೀನು ನೀಡಿದೆ.
ನಿನ್ನೆ ರಾತ್ರಿ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ವಿ.ಕೃಷ್ಣಾರೆಡ್ಡಿ, ಗುರುಸಿದ್ದಪ್ಪ ಮತ್ತು ಖಜಾಂಚಿ ನಟರಾಜ್ರನ್ನು ಬಂಧಿಸಿದ್ದಾರೆ. ಇನ್ನುಳಿದವರ ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಇವರನ್ನು ಬಂಧಿಸಿದ ಬಳಿಕ ಕೋರಮಂಗಲದಲ್ಲಿರುವ ಜಡ್ಜ್ ನಿವಾಸದಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಬಳಿಕ ಇವರೆಲ್ಲರಿಗೂ ಜಾಮೀನು ನೀಡಲಾಯಿತು.
ಕರ್ನಾಟಕ ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಂಬಂಧ ಕಂಪಣ್ಣ ಸೇರಿದಂತೆ 19 ಮಂದಿ ವಿರುದ್ಧ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.
"ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಆದೇಶದ ಅನ್ವಯ ಇವರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸುತ್ತೇವೆʼʼ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.
ಟೆಂಡರ್ ನೀಡಲು ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್ ವಸೂಲಿ ಮಾಡಿದ್ದಾರೆ ಎಂಬ ಆರೋಪದ ವಿರುದ್ಧ ತೋಟಗಾರಿಕಾ ಸಚಿವ ಎನ್. ಮುನಿರತ್ನ ಅವರು ಕೆಂಪಣ್ಣ ಹಾಗೂ ಗುತ್ತಿಗೆದಾರರ ಸಂಘದ ಇತರ 18 ಸದಸ್ಯರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಮ್ಮ ಮಾನಹಾನಿ ಮಾಡಿದ್ದಕ್ಕಾಗಿ 50 ಕೋಟಿ ರೂ. ಪರಿಹಾರ ನೀಡುವಂತೆ ಕೋರಿ ಸೆಪ್ಟೆಂಬರ್ 1ರಂದು ಸಂಘಕ್ಕೆ ನೋಟಿಸ್ ಕಳುಹಿಸಿದ್ದರು.
ನೋಟಿಸ್ಗೆ ಉತ್ತರಿಸಲು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಅಥವಾ ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ನೀಡುವಂತೆ ಕೆಂಪಣ್ಣ ಮತ್ತು ಕೆಎಸ್ಸಿಎಗೆ ಅಂತಿಮ ಗಡುವು ನೀಡಲಾಗಿತ್ತು. ಆದರೆ, ಈ ಯಾವುದೇ ಷರತ್ತುಗಳನ್ನು ಸಂಘವು ಪೂರೈಸಿರಲಿಲ್ಲ. ಬಳಿಕ ಸಚಿವ ಮುನಿರತ್ನ ಅವರು ನ್ಯಾಯಾಲಯದಲ್ಲಿ ಮೊಕದ್ದಮ್ಮೆ ದಾಖಲಿಸಿದ್ದರು. ತಮ್ಮ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡದಂತೆ ತಡೆಯಾಜ್ಞೆ ಆದೇಶ ತಂದಿದ್ದರು.
ಆರಂಭದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ಬಳಿಕ MLAಗಳಿಗೆ 10 ಪರ್ಸೆಂಟ್ ಕಮಿಷನ್ ಕೊಡಬೇಕು, ಮಂತ್ರಿಗಳಿಗೆ ಶೇಕಡಾ 5ರಷ್ಟು ಪರ್ಸೆಂಟೇಜ್ ಕೊಡಬೇಕು ಎಂದು ಆರೋಪಿಸಿದ್ದರು. 2019ರ ನಂತರ ಸರ್ಕಾರದಲ್ಲಿ ಪರ್ಸೆಂಟೇಜ್ ಹೆಚ್ಚಾಗಿದೆ. ಕಾಂಟ್ರಾಕ್ಟರ್ಗಳಿಂದ ಹೆಜ್ಜೆ-ಹೆಜ್ಜೆಗೂ ಕಮಿಷನ್ ವಸೂಲಿ ಆಗುತ್ತಿದೆ. ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೂ ದೂರು ನೀಡಿದ್ದೇನೆ ಎಂದು ಹೇಳಿದ್ದರು.
ರಾಜ್ಯದಲ್ಲಿರುವ ಲಕ್ಷ ಕಾಂಟ್ರಾಕ್ಟರ್ಗಳು ತೊಂದರೆಗೆ ಈಡಾಗಿದ್ದಾರೆ. ಗುತ್ತಿಗೆ ಕಮಿಷನ್ನಿಂದಾಗಿ ರಸ್ತೆಗಳ ನಿರ್ಮಾಣ ಗುಣಮಟ್ಟ ಕಳಪೆಯಾಗುತ್ತದೆ. ಹಣವೆಲ್ಲ ರಾಜಕಾರಣಿಗಳ ಕಿಸೆ ಸೇರುತ್ತದೆ ಎಂದು ಅವರು ದೂರಿದ್ದರು.