Karnataka Bjp: ಆಪರೇಷನ್ ಕಮಲ ಮಾಡೋಲ್ಲ, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಗೆಲ್ಲುವ ಗುರಿ: ವಿಜಯೇಂದ್ರ ಘೋಷಣೆ
Nov 15, 2023 12:23 PM IST
ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ವೈ.ವಿಜಯೇಂದ್ರ ಅವರನ್ನು ಪ್ರಮುಖರು ಆಶೀರ್ವದಿಸಿದರು.
- Vijayendra assumed Charge ಕರ್ನಾಟಕದ ಬಿಜೆಪಿಯ( Karnataka BJP) ನೂತನ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ( BY Vijayendra) ಅವರು ಹಿರಿಯ ಸಮ್ಮುಖದಲ್ಲಿ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲು( Nalin kumar kateel) ಅವರಿಂದ ಅಧಿಕಾರ ವಹಿಸಿಕೊಂಡರು.
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯೇ ನಮ್ಮ ಗುರಿ. ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ʼ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಅಧಿಕಾರ ವಹಿಸಿಕೊಂಡು ಅವರು ಮಾತನಾಡಿದರು.
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು ನಿಜ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಹಾಗೆಂದು ಸುಮ್ಮನೇ ಕೂರಲು ಆಗುವುದಿಲ್ಲ. ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ಬಲಗೊಳಿಸುವುದು ನಮ್ಮ ಮೊದಲ ಗುರಿ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಬಲ ವೃದ್ದಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈಗಿನ ಲೋಕಸಭೆ ಚುನಾವಣೆ ಜತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ನಮ್ಮೊಂದಿಗೆ ಕೆಲಸ ಮಾಡಿದ ಕಾರ್ಯಕರ್ತರನ್ನು ಗೆಲ್ಲಿಸುವ ಹೊಣೆಯಿದೆ. ಅದಕ್ಕೂ ಎಲ್ಲರೂ ಅಣಿಯಾಗಬೇಕು. ಇದರ ಜತೆಗೆ ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಿರಿಯನಾದರೂ ನನಗೆ ಪಕ್ಷದ ರಾಷ್ಟ್ರೀಯ ನಾಯಕರು ವಿಶ್ವಾಸವಿಟ್ಟು ಪಕ್ಷದ ಅಧ್ಯಕ್ಷ ಸ್ಥಾನದ ಹೊಣೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ತನ್ನದೇ ಆದ ಶಕ್ತಿಯಿದೆ. ಹಲವರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಹಿರಿಯ ನಾಯಕರ ಶ್ರಮ ಇದರಲ್ಲಿದೆ. ಕಾರ್ಯಕರ್ತರ ಶ್ರಮವಿಲ್ಲದೇ ಪಕ್ಷ ಬೆಳೆದಿಲ್ಲ. ಪಕ್ಷದ ಹಿರಿಯ ವಿಶ್ವಾಸವನ್ನು ತೆಗೆದುಕೊಂಡು ಯುವಕರನ್ನು ಸಂಘಟಿಸುವ ಮೂಲಕದ ಪಕ್ಷದ ವೈಭವ ಮರುಕಳಿಸುವಂತೆ ಮಾಡುವೆ ಎಂದು ವಿಜಯೇಂದ್ರ ಹೇಳಿದರು.
ಪಕ್ಷದ ಅಧ್ಯಕ್ಷನಾಗಿ ನೇಮಕ ಮಾಡಿದ ನಂತರ ಕರ್ನಾಟಕದ ಹಲವಾರು ಹಿರಿಯರನ್ನು ಭೇಟಿ ಮಾಡಿದ್ದೇನೆ. ಎಲ್ಲಾ ಹಿರಿಯರು ಆಶಿರ್ವಾದ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಎಲ್ಲ ಹಿರಿಯರ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ಆಧರಿಸಿಯೇ ಪಕ್ಷ ಸಂಘಟಿಸುವೆ. ಹಗಲು ರಾತ್ರಿ ಎನ್ನದೇ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುವೆ. ಪಕ್ಷಕ್ಕಾಗಿ ರಸ್ತೆಗಿಳಿದು ಹೋರಾಟ ಮಾಡುವೆ. ಸರ್ಕಾರದ ನಡೆ ವಿರೋಧಿಸಿ ಬೀದಿಗೆ ಇಳಿಯಲು ಸಿದ್ದ ಎಂದು ತಿಳಿಸಿದರು.
ಚುನಾವಣೆ ವೇಳೆ ನಾನು ಕಾರ್ಯಕರ್ತ. ಆನಂತರ ಲಿಂಗಾಯಿತ, ಒಕ್ಕಲಿಗ ಎನ್ನುವ ಭಾವನೆಯನ್ನು ನಾವೆಲ್ಲರೂ ಬಿಡಬೇಕು. ಆಗ ಮಾತ್ರ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಬರುತ್ತದೆ. ನಾನೂ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದು ಹೇಳಿದರು.
ನಾವೇನೂ ಆಪರೇಷನ್ ಕಮ ಮಾಡೋಲ್ಲ. ಶಾಸಕರು ಅನುದಾನವಿಲ್ಲದೇ ಕೆಲಸ ಮಾಡಲಾಗದೇ ತಲೆ ಮರೆಸಿಕೊಂಡು ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಬಿಜೆಪಿ ಶಾಸಕರು ಬಿಡಿ, ಕಾಂಗ್ರೆಸ್ ಶಾಸಕರಿಗೆ ಈ ಅನುಭವವಾಗುತ್ತಿದೆ. ಅವರೇ ಪಾಠ ಕಲಿಸಲಿದ್ದಾರೆ. ಬಿಜೆಪಿಯದ್ದು ಶೇ. 40 ರಷ್ಟು ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸಿತು. ಆದರೆ ಅದನ್ನು ತಾವೇ ಈಗ ಮಾಡುತ್ತಿದ್ದಾರೆಯೇ ಹೊರತು ಬಿಜೆಪಿ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಂದು ಆರೋಪಿಸಿದರು.
ಸಹಕಾರ ನೀಡಿ
ಪಕ್ಷ ಸಂಘಟನೆಗೆ ನನಗೆ ಸಹಕಾರ ನೀಡಿದಂತೆ ಬಿವೈ ವಿಜಯೇಂದ್ರಗೂ ನೀವೆಲ್ಲರೂ ಸಹಕಾರ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಗುರಿ ಇದೆ ಎಂದು ಕರ್ನಾಟಕ ಬಿಜೆಪಿ ನಿರ್ಗಮಿತ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.
ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ನನ್ನ ಅಭಿನಂದನೆ ಸಲ್ಲಿಸುವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ 28 ಸ್ಥಾನ ಗೆಲ್ಲುತ್ತೇವೆ. ನಾವೆಲ್ಲಾ ಒಟ್ಟಾಗಿ ಹೋರಾಟ ನಡೆಸುತ್ತೇವೆ ಎಂದು ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಮುನ್ನ ಹೇಳಿದರು.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿತ್ತು. ನಾನು 4 ವರ್ಷ 3 ತಿಂಗಳು ಅಧ್ಯಕ್ಷನಾಗಿ ಕೆಲಸ ಮಾಡಿದ ಸಂತಸ ಹೊಂದಿದ್ದೇನೆ. ಕೋವಿಡ್ ಕಾಲದಲ್ಲೂ ಪಕ್ಷ ಸಂಘಟಿಸಿದ್ದೇನೆ. ಬಿವೈ ವಿಜಯೇಂದ್ರ ಸಂಘಟನಾಚತುರ. ನನ್ನೊಂದಿಗೆ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಪಕ್ಷವನ್ನು ಬಲಪಡಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಮಾತನಾಡಿದರು.
ಮಾಜಿ ಸಚಿವರಾದ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರಗೌಡ, ಕೇಂದ್ರ ಸಚಿವ ಭಗವಂತ ಖುಬಾ ಸಹಿತ ಹಲವರು ಇದ್ದರು.
ಇದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ಹೋಮ ಹವನಗಳು ನಡೆದವು. ಕಚೇರಿಯನ್ನು ಅಲಂಕರಿಸಲಾಗಿತ್ತು. ಇಡೀ ಕಚೇರಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.