Karnataka Rains: ನಾಳೆಯಿಂದ 6 ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ, ಯಾವ ಜಿಲ್ಲೆಯಲ್ಲಿ ಯಾವಾಗ?
Apr 08, 2024 09:40 PM IST
ಕರ್ನಾಟಕದ ಹಲವೆಡೆ ಆರು ದಿನ ಹಗುರ ಮಳೆಯಾಗುವ ಸೂಚನೆಯಿದೆ.
Weather Updates ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಆರು ದಿನ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು: ಯುಗಾದಿ ಹಬ್ಬಕ್ಕೆ ಸಂತಸದ ಸುದ್ದಿ ಇದೆ. ಅದೂ ಸತತ ಎರಡು ತಿಂಗಳಿನಿಂದ ಬಿಸಿಲ ಬೇಗೆಯಿಂದ ಬಳಲುತ್ತಾ ಮಳೆ ಬಂದರೆ ಸಾಕಪ್ಪ ಎಂದು ಬಯಸುತ್ತಿದ್ದ ಮನಸುಗಳಿಗೆ ಸಿಹಿ ವಿಚಾರ. ಯುಗಾದಿಯಲ್ಲಿ ಮಳೆ ಬರುವ ವಾಡಿಕೆಯಂತೆ ಕರ್ನಾಟಕದಲ್ಲಿ ಮುಂದಿನ ಆರು ದಿನಗಳ ಕಾಲ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರ ಮುಂದಿನ ಆರು ದಿನಗಳ ಕಾಲ ಕರ್ನಾಟಕದಲ್ಲಿ ಮಳೆಯಾಗಬಹುದಾದ ಜಿಲ್ಲೆಯ ವಿವರವನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ಹಲವೆಡೆ ಮಳೆಯಾಗಲಿದೆ. ಇದರೊಟ್ಟಿಗೆ ಕರಾವಳಿ ಭಾಗದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
- ಏಪ್ರಿಲ್ 9 ರ ಮಂಗಳವಾರದಂದು ಚಿಕ್ಕಮಗಳೂರು, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಒಣಹವೆ ವಾತಾವರಣ ಇರಲಿದೆ
- ಏಪ್ರಿಲ್ 10 ರ ಬುಧವಾರದಂದು ಕೊಡಗು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಕರ್ನಾಟಕದ ಇತರೆ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ
- ಏಪ್ರಿಲ್ 11 ರ ಗುರುವಾರದಂದು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆ ಬೀಳುವ ಸಾಧ್ಯತೆ ಅಧಿಕವಾಗಿವೆ. ಕರ್ನಾಟಕದ ಉಳಿಕದ ಕಡೆಗಳಲ್ಲಿ ಒಣಹವೆಯ ವಾತಾವರಣ ಇರುವ ಸಾಧ್ಯತೆ ಹೆಚ್ಚು.
- ಏಪ್ರಿಲ್ 12ರ ಶುಕ್ರವಾರದಂದು ಒಳಗಾಡಿನ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಗುವ ಸಾಧ್ಯತೆಯಿದೆ. ಆದರೆ ಕರಾವಳಿ ಭಾಗದಲ್ಲಿ ಅಂದು ಒಣಹವೆಯ ವಾತಾವರಣ ಇರಲಿದೆ.
- ಏಪ್ರಿಲ್ 13ರ ಶನಿವಾರದಂದು ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಹಗುರವಾಗಿ ಮಳೆ ಬೀಳುವ ಸಾಧ್ಯತೆಗಳಿವೆ
- ಏಪ್ರಿಲ್ 14ರ ಭಾನುವಾರದಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು, ಉತ್ತರ ಒಳನಾಡಿನ ಗದಗ, ಹಾವೇರಿ, ಕಲಬುರಗಿ, ವಿಜಯಪುರ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆ ಬೀಳಲಿದೆ. ಕರ್ನಾಟಕದ ಉಳಿಕೆ ಜಿಲ್ಲೆಗಳಲ್ಲಿ ಒಣಹವೆ ವಾತಾವರಣವೇ ಇರಲಿದೆ.
ಬಿಸಿ ಗಾಳಿ ಎಚ್ಚರಿಕೆ
ಮುಂದಿನ ಎರಡು ದಿನಗಳ ಕಾಲ ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿ ಗಾಳಿಯೂ ಹೆಚ್ಚಲಿದೆ. ಈ ಭಾಗದ ಜನತೆ ಬಿಸಿಲಿಗೆ ತೆರೆದುಕೊಳ್ಳದೇ ಆದಷ್ಟು ಬಿಸಿಲಿನಿಂದ ದೂರ ಇರಬೇಕು ಎಂದು ಸೂಚನೆ ನೀಡಲಾಗಿದೆ.
ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹಗಲು ಮಾತ್ರವಲ್ಲದೇ ರಾತ್ರಿ ವಾತಾವರಣವು ಕಾವಿನಿಂದ ಕೂಡಿರಲಿದೆ ಎಂದು ತಿಳಿಸಲಾಗಿದೆ.
ಬೆಂಗಳೂರಲ್ಲಿ ಮಳೆಯಿಲ್ಲ
ಆದರೆ ಮುಂದಿನ ಎರಡು ದಿನಗಳವರೆರೆ ಅಂದರೆ 48 ಗಂಟೆಗಳ ಕಾಲ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯು ಮುನ್ಸೂಚನೆಗಳೇನೂ ಇಲ್ಲ.
ಬೆಂಗಳೂರು ನಗರದಲ್ಲಿ ಮಂಗಳವಾರ ನಿರ್ಮಲವಾದ ಆಕಾಶಗಳಿರಲಿವೆ. ಗರಿಷ್ಠ ಉಷ್ಣಾಂಶವು 37 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ ಉಷ್ಣಾಂಶದ ಪ್ರಮಾಣವು 23 ಡಿಗ್ರಿ ಸೆಲ್ಸಿಯಸ್ನಷ್ಟು ಇರಲಿದೆ.ಬುಧವಾರ ಗರಿಷ್ಠ ಉಷ್ಣಾಂಶದಲ್ಲಿ ಕೊಂಚ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ.