Karnataka Rains: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಗುಡುಗು ಮಿಂಚು ಸಹಿತ ಹಗುರ ಮಳೆ, ಇಂದಿನ ಹವಾಮಾನ ವರದಿ
Apr 22, 2023 06:13 AM IST
Karnataka Rains: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಗುಡುಗು ಮಿಂಚು ಸಹಿತ ಹಗುರ ಮಳೆ, ಇಂದಿನ ಹವಾಮಾನ ವರದಿ
- ಇಂದು ಮತ್ತು ನಾಳೆ ಕರ್ನಾಟಕದ ವಿವಿಧೆಡೆ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Met Centre Bengaluru - IMD) ನೀಡಿದೆ.
ಬೆಂಗಳೂರು: ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ತತ್ತರಿಸಿದ ಬೆಂಗಳೂರು ಸೇರಿದಂತೆ (Bengaluru Rains) ಕರ್ನಾಟಕದ ವಿವಿಧೆಡೆ ನಿನ್ನೆ ಮಳೆಯಾಗಿದೆ. ಇಂದು ಕೂಡ ಕರ್ನಾಟಕದ ವಿವಿಧೆಡೆ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Met Centre Bengaluru - IMD) ನೀಡಿದೆ.
ಕರಾವಳಿ ಹವಾಮಾನ ಮುನ್ಸೂಚನೆ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಇಂದು ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ವಾಡಿಕೆಗಿಂತ 2ರಿಂದ 3 ಡಿಗ್ರಿ ಹೆಚ್ಚಿರಲಿದೆ.
ಉತ್ತರ ಒಳನಾಡು ಹವಾಮಾನ ವರದಿ
ಬಾಗಲಕೋಟೆ, ಬೆಳಗಾವಿ, ಬೀದರ್ನಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ. ಧಾರವಾಡ, ಹಾವೇರಿಯಲ್ಲಿ ಹಗುರ/ ಸಾಧಾರಣ ಮಳೆ ಇರಲಿದೆ. ಗದಗ, ಕೊಪ್ಪಳ, ವಿಜಯಪುರದಲ್ಲಿ ಒಣಹವೆ ಇರಲಿದೆ. ಕಲಬುರಗಿ, ರಾಯಚೂರು, ಯಾದಗಿರಿಗಳಲ್ಲಿ ಹಗುರ/ ಸಾಧಾರಣ ಮಳೆ ಇರಲಿದೆ. ವಿಜಯಪುರದಲ್ಲಿ ಒಣಹವೆಯ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಅಲ್ಲಲ್ಲಿ ಏಪ್ರಿಲ್ 25ರವರೆಗೆ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಇಂದು ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಉಷ್ಣಾಂಶವು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು ವರದಿ
ಬಳ್ಳಾರಿಯಲ್ಲಿ ಗುಡುಗು ಮಿಂಚು ಸಹಿತ ಹಗುರ ಸಾಧಾರಣ ಮಳೆ ಇರಲಿದೆ. ಬೆಂಗಳೂರು, ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಸಾಮಾನ್ಯ ಮಳೆ, ಚಾಮರಾಜನಗರದಲ್ಲಿ ಹಗುರ ಸಾಧಾರಣ ಮಳೆ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನಲ್ಲಿ ಗುಡುಗು ಮಿಂಚು ಸಹಿತ ಹಗುರ/ ಸಾಧಾರಣ ಮಳೆಯಾಗಲಿದೆ. ಚಿತ್ರದುರ್ಗ, ದಾವಣಗೆರೆಯಲ್ಲಿ ಒಣಹವೆ, ಹಾಸನದಲ್ಲಿ ಹಗುರ/ ಸಾಧಾರಣ ಮಳೆ ಇರಲಿದೆ.
ಕೊಡಗಿನಲ್ಲಿ ಗುಡುಗು ಮಿಂಚು ಸಹಿತ ಹಗುರ/ ಸಾಧಾರಣ ಮಳೆಯಾಗಲಿದೆ. ಕೋಲಾರ, ಮಂಡ್ಯ, ರಾಮನಗರ, ಮೈಸೂರಿನಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ತುಮಕೂರಿನಲ್ಲಿ ಒಣಹವೆ ಇರಲಿದೆ. ವಿಜಯನಗರದಲ್ಲಿ ಹಗುರ ಸಧಾರಣ ಮಳೆಯಾಗಲಿದೆ. ಏಪ್ರಿಲ್ 25ರವರೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಉಷ್ಣಾಂಶವು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಳೆ
ಶುಕ್ರವಾರ ರಾತ್ರಿ ಬೆಂಗಳೂರಿನ ವಿವಿಧೆಡೆ ಮಳೆಯಾಗಿದೆ. ಕಾರ್ಪೂರೇಷನ್, ಕೆ.ಆರ್.ಮಾರುಕಟ್ಟೆ, ಮೈಸೂರು ಬ್ಯಾಂಕ್, ರಾಜರಾಜೇಶ್ವರಿನಗರ, ದೀಪಾಂಜಲಿನಗರ, ವಿಜಯನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್ಪೇಟೆ, ಮಲ್ಲೇಶ್ವರ, ಶೇಷಾದ್ರಿಪುರ, ನಂದಿನಿ ಲೇಔಟ್, ಯಶವಂತಪುರ, ಸದಾಶಿವನಗರ, ಗಿರಿನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ವಿವೇಕನಗರ, ಕೋರಮಂಗಲ ಮುಂತಾದ ಕಡೆಗಳಲ್ಲಿ ಮಳೆಯಾಗಿದೆ. ನಗರದ ಇನ್ನು ಕೆಲವು ಕಡೆ ಮಳೆ ಸುರಿಯುವ ಲಕ್ಷಣ ಕಂಡು ಬಂದರೂ ಜೋರಾಗಿ ಬೀಸಿದ ಗಾಳಿಯಲ್ಲಿ ಮಳೆ ಮಾಯವಾಗಿದೆ. ಸೆಖೆ ಎನ್ನುತ್ತಿದ್ದ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಕೂಲ್ ಆದ ವಾತಾವರಣವಿತ್ತು.