Kasaragod Crime News: ಶಂಕಿತ ಉಗ್ರ ಶಹನವಾಝ್ ಕಾಸರಗೋಡು ಸಂಚಾರ: ಕೇರಳದಲ್ಲೂ ವಿಧ್ವಂಸಕ ಕೃತ್ಯಕ್ಕೆ ಸಂಚು
Oct 07, 2023 11:37 AM IST
Kasaragod Crime News: ಶಂಕಿತ ಉಗ್ರ ಶಹನವಾಝ್ ಕಾಸರಗೋಡು ಸಂಚಾರ: ಕೇರಳದಲ್ಲೂ ವಿಧ್ವಂಸಕ ಕೃತ್ಯಕ್ಕೆ ಸಂಚು
- ಕೇರಳದ ಪಶ್ಚಿಮ ಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ಐಸಿಸ್ ನ ಭಯೋತ್ಪಾದಕ ಎಂದು ಹೇಳಲಾದ ಶಹನವಾಝ್ ಅಲಿಯಾಸ್ ಶಾಫಿ ಉಸಾಮಾ ಸುತ್ತಾಡಿದ ಛಾಯಾಚಿತ್ರಗಳನ್ನು ಎನ್.ಐ.ಎ. ವಶಪಡಿಸಿಕೊಂಡಿದೆ.
ಕಾಸರಗೋಡು: ನವದೆಹಲಿಯಲ್ಲಿ ಸೆ.2ರಂದು ಬಂಧಿತನಾಗಿದ್ದ ಭಯೋತ್ಪಾದಕ ಸಂಘಟನೆಯಾದ ಐಸಿಸ್ ನ ಭಯೋತ್ಪಾದಕ ಎಂದು ಹೇಳಲಾದ ಶಹನವಾಝ್ ಅಲಿಯಾಸ್ ಶಾಫಿ ಉಸಾಮಾ, ತನ್ನ ಸಹಚರರೊಂದಿಗೆ ಉಡುಪಿ ಮೂಲಕ ಕಾಸರಗೋಡಿಗೂ ಬಂದಿದ್ದನೇ?
ಎನ್.ಐ.ಎ. ತನಿಖೆಯ ವೇಳೆ ಈ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಕೇರಳದ ಪಶ್ಚಿಮ ಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ಈತ ಸುತ್ತಾಡಿದ ಛಾಯಾಚಿತ್ರಗಳನ್ನು ಎನ್.ಐ.ಎ. ವಶಪಡಿಸಿಕೊಂಡಿದೆ. ಈತ ಕೇರಳದಲ್ಲೂ ವಿಧ್ವಂಸಕ ಕೃತ್ಯ ಎಸಗಿರುವ ಸಂಚು ರೂಪಿಸಿರುವ ಕುರಿತ ಶಂಕೆ ತನಿಖಾ ತಂಡಕ್ಕಿದೆ. ಘಟ್ಟ ಪ್ರದೇಶದಲ್ಲಿ ಐಸಿಸ್ ಧ್ವಜವನ್ನು ಸ್ಥಾಪಿಸಿ, ಅಲ್ಲಿ ಫೊಟೋಗಳನ್ನು ಈತ ತೆಗೆದಿದ್ದ ಎನ್ನಲಾಗಿದೆ. ಈತ ಕೇರಳದಲ್ಲೂ ದುಷ್ಕೃತ್ಯ ಎಸಗುವ ಸಂಚು ರೂಪಿಸಿದ್ದನೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಪಶ್ಚಿಮ ಘಟ್ಟ ಪರಿಸರದಲ್ಲಿ ತೆಗೆದಿದ್ದ ಫೊಟೋಗಳನ್ನು ಚಾಟ್ ಅಪ್ಲಿಕೇಶನ್ ಮೂಲಕ ಪಾಕಿಸ್ಥಾನದ ಹ್ಯಾಂಡ್ಲರ್ ಗಳಿಗೆ ರವಾನಿಸಿದ್ದು, ಇದರ ಮೂಲಕವೇ ಅವರೊಂದಿಗೆ ಸಂಪರ್ಕದಲ್ಲಿದ್ದ. ಈತನ ಫೋನ್ ಕರೆಯಲ್ಲಿ ಹಲವು ಮಾಹಿತಿಗಳು ತನಿಖಾ ತಂಡಕ್ಕೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಶಹನವಾಝ್ ಸಹಚರರಾದ ರಿಜ್ವಾನ್ ಅಶ್ರಫ್ ನಲ್ಲಿ ಲಕ್ನೋದಲ್ಲಿ ಮತ್ತು ಮೊಹಮ್ಮದ್ ಅರ್ಶದ್ ನಲ್ಲಿ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ಪೆರ್ಲತ್ತಡ್ಕ: ಮಗುವನ್ನೇ ಹತ್ಯೆ ಮಾಡಿದ ತಾಯಿ ಬಂಧನ
ಕಾಸರಗೋಡು ಜಿಲ್ಲೆಯ ಪೆರ್ಲತ್ತಡ್ಕದ ಶಾರದಾ ಎಂಬಾಕೆ 2020ರ ಡಿ.4ರಂದು ಸ್ವಂತ ಮಗುವನ್ನೇ ಪೆರ್ಲತ್ತಡ್ಕದ ಬಾವಿಯೊಂದಕ್ಕೆ ಎಸೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರನೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಹೊರಡಿಸಿದ ವಾರಂಟ್ ನಂತೆ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿಚಾರಣೆ ಸಂದರ್ಭ, ನ್ಯಾಯಾಲಯ ಮುಂದೆ ಸಕಾಲದಲ್ಲಿ ಹಾಜರಾಗಬೇಕು ಎಂದು ಷರತ್ತಿನಡಿ ಆಕೆಗೆ ಜಾಮೀನು ನೀಡಿತ್ತು. ಇತ್ತೀಚೆಗೆ ಕಾಸರಡೋಗು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಜಮೀನು ನಕಲಿ ದಾಖಲೆ: ಯುವ ಕಾಂಗ್ರೆಸ್ ಮುಖಂಡ ಬಂಧನ
ಜಮೀನಿನ ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿ ಕೆಎಸ್ ಎಫ್ ಇಯ ಮಾಲಕಲ್ಲು ಶಾಖೆಯಿಂದ 70 ಲಕ್ಷ ರೂ ಸಾಲ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸದುರ್ಗ ಚಿತ್ತಾರಿ ಪಿವಿ ರಸ್ತೆಯ ನಿವಾಸಿ ಎಂ.ಇಸ್ಮಾಯಿಲ್ (37) ಎಂಬಾತನನ್ನು ಕಾಸರಗೋಡಿನ ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇಸ್ಮಾಯಿಲ್ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಉಪ್ಪಳ ಗ್ರಾಮದ ಐದೆಕರೆ ಜಮೀನಿನ ದಾಖಲೆ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಅದಕ್ಕೆ ವಿಎ ಡಿಜಿಟಲ್ ಸಹಿ ಹಾಕಿ, ಕೆ.ಎಸ್.ಎಫ್.ಇ. ಚಿಟ್ ಫಂಡ್ ನಿಂದ ಆರೋಪಿಗಳು 70 ಲಕ್ಷ ರೂ ಸಾಲ ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಸಾಲವನ್ನು ಮರುಪಾವತಿಸದೆ ಇದ್ದಾಗ ಆರೋಪಿಗಳು ಸಲ್ಲಿಸಿದ ಭೂದಾಖಲುಪತ್ರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ ಎಂದು ಕೆಎಸ್ ಎಫ್ ಇ ಶಾಖಾ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದಾರೆ. ಇತರ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ.
ಕುಂಬಳೆ: ಕೊಲೆ ಪ್ರಕರಣದ ಆರೋಪಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ
ಕೊಲೆ ಪ್ರಕರಣದ ಆರೋಪಿ ಯುವಕನ ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪ್ರಕರಣವೊಂದು ಕುಂಬಳೆ ಬಳಿ ಕುಂಟಂಗೇರಡ್ಕ ಎಂಬಲ್ಲಿ ನಡೆದಿದೆ. ಐಎಚ್ ಆರ್.ಡಿ. ಕಾಲೇಜಿನ ಹಿಂಬಾಗದ ಪೊದೆ ಕಡೆ ಆರೋಪಿಗಳು ಶವವನ್ನು ಎಸೆದುಹೋಗಿದ್ದಾರೆ. ಈ ಹಿಂದೆ ಕುಂಬಳೆ ಬಳಿಯ ಶಾಂತಿಪಳ್ಳ ಲಕ್ಷಂವೀಡು ಕಾಲೊನಿ ನಿವಾಸಿಯಾಗಿದ್ದ ಇದೀಗ ವಿದ್ಯಾನಗರ ಕ್ವಾರ್ಟರ್ಸ್ ಒಂದರ ನಿವಾಸಿ ಅಬ್ದುಲ್ ರಶೀದ್ ಯಾನೆ ಮೂಸಾ ರಶೀದ್ (38) ನನ್ನು ಹತ್ಯೆ ಮಾಡಲಾಗಿದೆ.
ಈತ 2019ರ ಅಕ್ಟೋಬರ್ 18ರಂದು ಮಧೂರು ಪಟ್ಲ ನಿವಾಸಿ ಶೈನ್ ಯಾನೆ ಶಾನು (24) ನನ್ನು ಕೊಲೆ ಮಾಡಿದ ಪ್ರಕರಣದ ಆರೋಪಿಯಾಗಿದ್ದ. ಇದೀಗ ಶೈನ್ ಹತ್ಯೆ ನಡೆದು ಸರಿಯಾಗಿ ನಾಲ್ಕು ವರ್ಷಗಳ ಬಳಿಕ ಪ್ರತೀಕಾರದ ಹತ್ಯೆ ನಡೆದಿದೆ ಎಂದು ಸಂಶಯಿಸಲಾಗಿತ್ತು, ಇದನ್ನು ಹೊರತುಪಡಿಸಿ ಬೇರಾವುದೇ ಕಾರಣಕ್ಕೆ ಕೊಲೆ ನಡೆದಿದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ವರದಿ: ಹರೀಶ್ ಮಾಂಬಾಡಿ)