Managluru News: ಜಾಗದ ಖಾತೆ ಬದಲಾವಣೆ ಮತ್ತು ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ 30 ಲಕ್ಷ ರೂಪಾಯಿಗೂ ಅಧಿಕ ವಂಚನೆ
Nov 03, 2023 02:33 PM IST
ಜಾಗದ ಖಾತೆ ಬದಲಾವಣೆ ಮತ್ತು ಕೊಲ್ಲೂರಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ 30 ಲಕ್ಷ ರೂ.ಗೂ ಅಧಿಕ ಹಣ ವಂಚಿಸಿದ ಘಟನೆ ನಡೆದಿದೆ (ಸಾಂಕೇತಿಕ ಚಿತ್ರ)
ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಮೂರು ಪ್ರತ್ಯೇಕ ಅಪರಾಧ ಸುದ್ದಿಗಳ ವಿವರ ಇಲ್ಲಿದೆ. ಜಾಗದ ಖಾತೆ ಬದಲಾವಣೆ ಮತ್ತು ಕೊಲ್ಲೂರಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ 30 ಲಕ್ಷ ರೂ.ಗೂ ಅಧಿಕ ಹಣ ವಂಚಿಸಿದ ಘಟನೆ ನಡೆದಿದೆ. ಮಂಗಳೂರಿನಲ್ಲಿ ಗಾಂಜಾ ಸೇವನೆ ಪ್ರಕರಣದಲ್ಲಿ ಯುವಕ ಸೆರೆಯಾಗಿದ್ಧಾನೆ. ಕಣ್ಣೂರಲ್ಲಿ 1.2 ಕೋಟಿ ರೂಪಾಯಿ ಚಿನ್ನ ಕಸ್ಟಮ್ಸ್ ವಶವಾಗಿದೆ.
ಉಡುಪಿ: ಬೆಂಗಳೂರು ನಿವಾಸಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಭಕ್ತರ ಕುಟುಂಬವೊಂದಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಕೊಲ್ಲೂರು ನಿವಾಸಿ ಸುಧೀರ್ ಕುಮಾರ್ ಎಂಬ ವ್ಯಕ್ತಿ, 30.73 ಲಕ್ಷ ರೂ ಹಣವನ್ನು ವಂಚಿಸಿದ್ದಾಗಿ ಕೊಲ್ಲೂರು ಪೊಲೀಸರಿಗೆ ದೂರು ನೀಡಲಾಗಿದೆ.
ಬೆಂಗಳೂರಿನ ದಿಲ್ನಾ ಎಂಬವರು ತನ್ನ ಪತಿ ಮತ್ತು ಕುಟುಂಬದ ಸದಸ್ಯರ ಜೊತೆ ಕೊಲ್ಲೂರು ದೇವಸ್ಥಾನಕ್ಕೆ ಬಂದ ವೇಳೆ ತನ್ನ ಅಣ್ಣ ದಿಲೀಶ್ ಅವರಿಗೆ ಪರಿಚಯವಿದ್ದ ಸುಧೀರ್ ಕುಮಾರ್ ಎಂಬಾತ, ತಾನು ಆಡಳಿತ ಮಂಡಳಿ ಸದಸ್ಯನೆಂದು ಪರಿಚಯಿಸಿಕೊಂಡಿದ್ದಾನೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ, ಹಣ ಹಾಕುವಂತೆ ಕೇಳಿಕೊಂಡಿದ್ದ. ಅಲ್ಲದೆ, ದಿಲ್ನಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವ:ಣೆಯನ್ನು ಮಾಡಿಸಿಕೊಡುವುದಾಗಿ ಹೇಳಿ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್ ಅವರಿಂದ 30 ಲಕ್ಷಕ್ಕೂ ಅಧಿಕ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಗ, ಸುಧೀರ್ ಎಂಬ ವ್ಯಕ್ತಿ ಆಡಳಿತ ಮಂಡಳಿ ಸದಸ್ಯನಲ್ಲ ಎಂದು ತಿಳಿದ ಕಾರಣ, ದಿಲ್ನಾ ಅವರು ಸುಧೀರ್ ಕುಮಾರ್ ವಿರುದ್ಧ ಹಣ ವಂಚನೆ ಮಾಡಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಂಜಾ ಸೇವನೆ ಮತ್ತೊಂದು ಪ್ರಕರಣ ಪತ್ತೆ, ಯುವಕನ ಬಂಧನ
ಮಂಗಳೂರು ಊರ್ವ ಮೈದಾನದ ಬಳಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಯುವಕನೋರ್ವನನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು, ಆತನನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಊರ್ವಸ್ಟೋರ್ ಚರ್ಚ್ ಗುಡ್ಡೆ ನಿವಾಸಿ ರೋಷನ್ (28) ಬಂಧಿತ ಆರೋಪಿ. ಸೈಬರ್ ಆರ್ಥಿಕ ಮತ್ತುಮಾದಕದ್ರವ್ಯ ಅಪರಾಧ ಪೊಲೀಸ್ ಠಾಣಾ ಉಪನಿರೀಕ್ಷಕಿ ಶೋಭಾ ತಮ್ಮ ಸಿಬಂದಿ ಜೊತೆ ಗುರುವಾರಕರ್ತವ್ಯದಲ್ಲಿದ್ದಾಗ, ಸಿಕ್ಕ ಖಚಿತ ಮಾಹಿತಿಯಂತೆ, ಆತನನ್ನು ಬಂಧಿಸಲಾಗಿದೆ.
1.2 ಕೋಟಿ ರೂ ಮೌಲ್ಯದ ಚಿನ್ನ ವಶಕ್ಕೆ, ಮೂವರ ಸೆರೆ
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಾಸರಗೋಡು ನಿವಾಸಿಗಳ ಸಹಿತ ಮೂವರಿಂದ 1.2 ಕೋಟಿ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅಬುಧಾಬಿಯಿಂದ ಬಂದ ಕಾಸರಗೋಡು ಉದುಮ ನಿವಾಸಿ ಆಲ್ ಅಮೀನ್ ಮತ್ತು ಕಲ್ಲಿಕೋಟೆ ಕೂಡುವಳ್ಳಿ ನಿವಾಸಿ ಜಂಶಾದ್ ಹಾಗೂ ಶಾರ್ಜಾದಿಂದ ಬಂದ ತಳಂಗರ ನಿವಾಸಿ ರಫೀಕ್ ನನ್ನು ಬಂಧಿಸಲಾಗಿದೆ.