ಮಡಂತ್ಯಾರಿನಲ್ಲಿ 19 ವರ್ಷದ ಪದವಿ ವಿದ್ಯಾರ್ಥಿ ಆತ್ಮಹತ್ಯೆ, ಕಾಸರಗೋಡಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಸಿದು ಬಿದ್ದು ಸಾವು
Jan 12, 2024 11:36 AM IST
ಮಡಂತ್ಯಾರಿನ ಪದವಿ ಕಾಲೇಜು ವಿದ್ಯಾರ್ಥಿ ಪ್ರತೀಕ್ ಬಾಳಿಗಾ
Crime News: ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರಿನಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಇನ್ನೊಂದೆಡೆ, ಕಾಸರಗೋಡಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ಕು ಸಿದು ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಖಾಸಗಿ ಪದವಿ ಕಾಲೇಜೊಂದರ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಡಂತ್ಯಾರು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಪ್ರತೀಕ್ ಬಾಳಿಗಾ (Prateek Baliga) ಎಂದು ಗುರುತಿಸಲಾಗಿದೆ.
ಮಡಂತ್ಯಾರು ಮಾರಿಗುಡಿ ಹೊಸಮನೆ ನಿವಾಸಿ ಪ್ರಶಾಂತ್ ಬಾಳಿಗ ಎಂಬವರ ಪುತ್ರ ಪ್ರತೀಕ್ ಬಾಳಿಗ ಪ್ರಥಮ ಬಿಎ ವಿದ್ಯಾರ್ಥಿಯಾಗಿದ್ದ. ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದ ಈತನಿಗೆ ಗುರುವಾರ ಪರೀಕ್ಷೆ ಇರಲಿಲ್ಲ. ಹೀಗಾಗಿ ಮನೆಯಲ್ಲೇ ಇದ್ದ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲಿನ ಡೈರಿ ಸಿಬಂದಿ, ರೈತರ ನಡುವೆ ಗಲಾಟೆ
ಹಾಲಿನ ಡೈರಿಯೊಂದರಲ್ಲಿ ಸಂಘದ ಅಧ್ಯಕ್ಷ, ಸಿಬ್ಬಂದಿ ಹಾಗೂ ರೈತ ನಡುವೆ ಗಲಾಟೆ ನಡೆದಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿದೆ. ಪಿಲಿಮೊಗರು ಗ್ರಾಮದ ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಬೆಳಿಗ್ಗೆ ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.
ಡೈರಿಗೆ ಹಾಲು ಹಾಕುವ ರೈತ ರಂಜಿತ್ ಎಂಬಾತ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ಸಿಬ್ಬಂದಿ ಲೀಲಾವತಿ ಹಾಗೂ ಇತರರನ್ನು ಉದ್ದೇಶಿಸಿ ಅವ್ಯಾಚ್ಚವಾಗಿ ಬೈದು, ಡಿಪೋದ ಕಂಪ್ಯೂಟರ್ ವಯರ್ಗಳನ್ನು ಕಿತ್ತುಹಾಕಲು ಪ್ರಯತ್ನಿಸಿದ್ದಲ್ಲದೆ ಉಪಕರಣಗಳನ್ನು ಕೆಡವಿ ಹಾಕಲು ನೋಡಿದ್ದಲ್ಲದೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ರಂಜಿತ್ ಪ್ರತಿ ದೂರು ನೀಡಿದ್ದು, ಸುಮಾರು 8 ತಿಂಗಳ ಹಿಂದೆ ದನಗಳ ಹಾಲು ಕರೆಯಲು ಯಂತ್ರೋಪಕರಣವನ್ನು ಖರೀದಿ ಮಾಡಿ ಇದರ ಸಬ್ಸಿಡಿಗಾಗಿ ಅರ್ಜಿ ಹಾಕಿದ್ದೆ. ಆದರೆ ಆರು ತಿಂಗಳು ಕಳೆದರೂ ಸಬ್ಸಿಡಿ ಬರದೆ ಇದ್ದ ಕಾರಣಕ್ಕಾಗಿ ಇಲ್ಲಿನ ಸಿಒ ಗುರು ಪ್ರಸಾದ್ ಭಟ್ ಅವರಲ್ಲಿ ವಿಚಾರಿಸುತ್ತಿದ್ದ ವೇಳೆ ಇಲ್ಲಿನ ಇನ್ನೋರ್ವ ಸಿಬ್ಬಂದಿ ಹರಿಶ್ಚಂದ್ರ ಶೆಟ್ಟಿ , ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ಚೌಟ ಅವರು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಆರೋಪಗಳು ಇರುವ ದೂರು, ಪ್ರತಿದೂರನ್ನು ಪೊಲೀಸರು ಸ್ವೀಕರಿಸಿ, ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಕುಸಿದು ಬಿದ್ದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾವು
ಕಾಸರಗೋಡಿನ ಮಾವುಂಗಾಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ (48) ಕುಸಿದು ಬಿದ್ದು ನಿಧನರಾದರು. ಮನೆಯಲ್ಲಿ ಕುಸಿದುಬಿದ್ದ ವಿನೋದ್ ರವನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಪುಲ್ಲೂರು ನಿವಾಸಿಯಾಗಿದ್ದ ವಿನೋದ್ ರವರು ಕೆ ಎಸ್ ಯು ಮೂಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ಇವರು, ಬಳಿಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)