Mangaluru News: ಹೇಳಿಕೆ ಕೊಡುವ ಎಲ್ಲರ ಮೇಲೆ ಶಿಸ್ತು ಕ್ರಮ; ಬಿಜೆಪಿ ನಾಯಕರಿಗೆ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ
Jun 28, 2023 02:00 PM IST
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು
- Karnataka Politics: ಬಿಜೆಪಿ ನಾಯಕತ್ವದ ಬಗ್ಗೆ ಪಕ್ಷದೊಳಗೆ ಅಪಸ್ವರ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ರಾಜ್ಯದಲ್ಲಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಹೇಳಿಕೆ ಕೊಟ್ಟವರಿಗೆ ನೋಟೀಸ್ ನೀಡುವ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದುರು.
ಮಂಗಳೂರು: ಯಾರೂ ಯಾವುದೇ ಹೇಳಿಕೆಗಳನ್ನು ನೀಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಆದ್ದರಿಂದ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕತ್ವದ ಬಗ್ಗೆ ಪಕ್ಷದೊಳಗೆ ಅಪಸ್ವರ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ರಾಜ್ಯದಲ್ಲಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೂ ಗಲಾಟೆಗಳು ಆಗಿಲ್ಲ. ಎಲ್ಲಾ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ತಯಾರಿಯನ್ನು ಮಾಡುತ್ತಿದ್ದಾರೆ. ಆದರೂ ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿನ್ನೆಯೆ ಎಲ್ಲಾ ಹಿರಿಯರಲ್ಲಿ ಮಾತಾಡಿದ್ದೇನೆ. ಇವತ್ತಿನಿಂದ ಯಾರೂ ಯಾವ ಹೇಳಿಕೆಗಳನ್ನು ಕೊಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಹೇಳಿಕೆ ಕೊಟ್ಟವರಿಗೆ ನೋಟೀಸ್ ನೀಡುವ ಕೆಲಸ ಮಾಡಿದ್ದೇನೆ ಎಂದರು.
ನಾಯಕರು ಮಾತಿನ ಮೇಲೆ ಹಿಡಿತವಿಡಲಿ. ಹೇಳಿಕೆ ಕೊಡುವ ಎಲ್ಲರಿಗೂ ನೊಟೀಸ್ ನೀಡಲಾಗುತ್ತದೆ. ಮತ್ತೆ ಪಾರ್ಟಿ ಕಟ್ಟಿ ಲೋಕಸಭಾ ಚುನಾವಣೆಗಾಗಿ ಕೆಲಸ ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದೆ ಗುರಿಯಾಗಬೇಕು. ಈಗಾಗಲೇ ಬೂತ್ ಗಟ್ಟಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೆ ಕಾರ್ಯಕರ್ತರೊಡನೆ ಸಂವಾದ ಮಾಡಿದ್ದಾರೆ. ನಮ್ಮ ಜವಾಬ್ದಾರಿ ಜಾಸ್ತಿ ಇದೆ. ಕಾರ್ಯಕರ್ತರು ಬಹಳ ಉತ್ಸಾಹ ಮತ್ತು ಪ್ರೇರಣೆಯಿಂದ ಲೋಕಸಭಾ ಚುನಾವಣೆಗೆ ತಯಾರಿಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲಾ ನಾಯಕರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಬೇಕು ಎಂದರು.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, ಗೋವುಗಳ ರಕ್ಷಣೆಗಾಗಿ ಬಿಜೆಪಿ ಕಾನೂನು ತಂದಿದೆ. ಆದ್ದರಿಂದ ಕಾನೂನು ಜಾರಿಯಲ್ಲಿರುವಾಗ ಗೋಕಳ್ಳರ ಗೋಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಗೋಸಂಸ್ಕೃತಿಯಿದೆ. ಕೃಷಿ,ಜೀವನ,ಆರಾಧನೆ ಎಲ್ಲದಕ್ಕೂ ಗೋವು ಮುಖ್ಯವಾಗಿದೆ. ಗೋ ಸಂಸ್ಕೃತಿ ಆರಾಧನೆಯ ಪ್ರತೀಕ. ಗೋ ರಕ್ಷಣೆಗಾಗಿ ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿಮಾಡಿದೆ. ಗೋ ಸಂರಕ್ಷಣೆ ಮಾಡುವ ಜವಬ್ದಾರಿ ಇದೆ. ಮಹಾತ್ಮಾ ಗಾಂಧಿಯೂ ಗೋಸಂರಕ್ಷಣೆ ಆಗಬೇಕೆಂದು ಹೇಳಿದ್ದರು. ಆ ನಿಟ್ಟಿನಲ್ಲಿ ಗೋ ಸಂರಕ್ಷಣೆಗಾಗಿ ಕಾನೂನು ತಂದಿದ್ದೇವೆ. ಆದರೆ ಕೆಲ ಆಚರಣೆ ವೇಳೆ ಗೋಹತ್ಯೆಗಳಾಗುತ್ತಿದೆ. ಯಾವುದೆ ಸಂದರ್ಭದಲ್ಲಿ ಗೋ ಹತ್ಯೆ ಆಗಬಾರದು ಎಂದು ನಾವು ಗೋ ಹತ್ಯೆ ನಿಷೇಧ ಕಾನೂನು ತಂದದ್ದು. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗೋ ಹತ್ಯೆ ಆಗಬಾರದು. ಹೊಸ ಸರಕಾರ ಬಂದ ಮೇಲೆ ಗೋ ಹತ್ಯೆಗಳು ಜಾಸ್ತಿಯಾಗುತ್ತಿದೆ. ಗೋ ಕಳ್ಳತನ ಜಾಸ್ತಿಯಾಗಿದ್ದು, ಗೋ ಹಂತಕರು ಮತ್ತೆ ಕಾರ್ಯ ಪ್ರಾರಂಭ ಮಾಡಿದ್ದಾರೆ. ಪೊಲೀಸ್ ಇಲಾಖೆ ಗಂಭೀರ ವಾಗಿ ತೆಗೆದುಕೊಳ್ಳಬೇಕು. ಆದ್ದರಿಂದ ಪ್ರಿಯಾಂಕ ಖರ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಆಶಯಗಳಿಗೆ ಸರ್ಕಾರ ಗೌರವ ನೀಡಬೇಕು. ಪೊಲೀಸರೂ ಗಂಭೀರವಾಗಿ ತೆಗೆದುಕೊಂಡು ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗೋ ಹಂತಕರನ್ನು, ಗೋ ಕಳ್ಳರನ್ನು ಬಂಧಿಸಬೇಕು.ಜನರ ಭಾವನೆಗಳಿಗೆ ವಿರುದ್ಧ ಸರ್ಕಾರ ಕೆಲಸ ಮಾಡುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣ ಆಗುವುದು ಖಂಡಿತ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.