HD Kumaraswamy on Siddaramaiah: ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಜತೆ ಮೈತ್ರಿ ಇಲ್ಲ; ಅವರನ್ನು ಸ್ವಪಕ್ಷದವರೇ ಸೋಲಿಸ್ತಾರೆ: ಹೆಚ್ಡಿಕೆ
Nov 15, 2022 02:33 PM IST
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ಗೆ ಬಿಜೆಪಿ ಬೆಂಬಲ ಎಂದು ಕೆಲವೆಡೆ ವರದಿ ಆಗಿದೆ. ಯಾವುದೇ ಕಾರಣಕ್ಕೂ ಆ ಪಕ್ಷದ ಜತೆ ಒಪ್ಪಂದ, ಮೈತ್ರಿ ಮಾಡಿಕೊಳ್ಳಲ್ಲ. ಬಿಜೆಪಿ ಜೊತೆ ಯಾವುದೇ ಚರ್ಚೆ ಆಗಿಲ್ಲ, ಮುಂದೆಯೂ ಆಗಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಮುಂಬರುವ ಚುನಾವಣೆಗೆ ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ- ಜೆಡಿಎಸ್ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ನಿವಾಸಕ್ಕೆ ನಿನ್ನೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ಗೆ ಬಿಜೆಪಿ ಬೆಂಬಲ ಎಂದು ಕೆಲವೆಡೆ ವರದಿ ಆಗಿದೆ. ಯಾವುದೇ ಕಾರಣಕ್ಕೂ ಆ ಪಕ್ಷದ ಜತೆ ಒಪ್ಪಂದ, ಮೈತ್ರಿ ಮಾಡಿಕೊಳ್ಳಲ್ಲ. ಬಿಜೆಪಿ ಜೊತೆ ಯಾವುದೇ ಚರ್ಚೆ ಆಗಿಲ್ಲ, ಮುಂದೆಯೂ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಕೋಲಾರದಲ್ಲೇ ನಿಲ್ಲಲಿ, ಬೇರೆ ಕಡೆ ನಿಲ್ಲಲಿ. ನಾವೇನು ಬಿಜೆಪಿ ಜತೆ ಸೇರಿ ಅವರ ವಿರುದ್ಧ ಕುತಂತ್ರ ಮಾಡಬೇಕಿಲ್ಲ. ಬಿಜೆಪಿಯವರಂತೆ ಸಣ್ಣ ಮಟ್ಟದದಲ್ಲಿ ನಾನು ಮಾತನಾಡುವುದಿಲ್ಲ. ನಾವು ಏನೇ ಮಾಡಿದರೂ ಸೋಲಿಸುವುದು, ಗೆಲ್ಲಿಸುವುದು ನಮ್ಮ ಕೈಯಲ್ಲಿ ಇರುವುದಿಲ್ಲ. ನಮಗೆ ಕೋಲಾರದಲ್ಲಿ ಸಮಸ್ಯೆಯೇ ಇಲ್ಲ. ಪಕ್ಷದ ಅಭ್ಯರ್ಥಿ ಯಾರು ಅನ್ನುವ ನಿರ್ಣಯ ಆಗಿದೆ. ಬೇರೆ ಪಕ್ಷದ ಜತೆ ಸೇರಿ ತಂತ್ರಗಾರಿಕೆ ಮಾಡುವಂತದ್ದೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯರನ್ನು ಅವರ ಪಕ್ಷದವರೇ ಸೋಲಿಸುತ್ತಾರೆ:
ಸಿದ್ದರಾಮಯ್ಯ ಅವರೇ ಆಗಲಿ, ಇನ್ನೊಬ್ಬರೇ ಬರಲಿ, ನಮಗೆ ಹೆದರಿಕೆ ಇಲ್ಲ. ಕೋಲಾರದಲ್ಲಿ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಹೀಗೆ ಹೇಳಿದ ಕೂಡಲೇ ಸಿದ್ದರಾಮಯ್ಯ ಬಗ್ಗೆ ನಾವು ಸಾಫ್ಟ್ ಅಂತ ಅಲ್ಲ. ಎಲ್ಲರ ರೀತಿ ನಾವು ವೀರಾವೇಶದಿಂದ ಮಾತನಾಡುವುದು ಪ್ರಯೋಜನ ಇಲ್ಲ. ಎಲ್ಲಿ ಎನು ಕೆಲಸ ಮಾಡಬೇಕೊ ಮಾಡುತ್ತೇವೆ. ಸಿದ್ದರಾಮಯ್ಯ ಅವರನ್ನು ನಾವು ಸೋಲಿಸಬೇಕಿಲ್ಲ, ಅವರ ಪಕ್ಷದವರೇ ಸೋಲಿಸುತ್ತಾರೆ ಎಂದು ಬಗ್ಗೆ ಹೆಚ್ ಡಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇದೇ 18 ರಿಂದ ಪಂಚರತ್ನ ರಥಯಾತ್ರೆ:
ಪಕ್ಷದ ಅಧ್ಯಕ್ಷರು ಹಾಗಾಗಿ ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿ ಮಾಡಿದ್ದೇನೆ. ಹಲವಾರು ವಿಚಾರಗಳ ಚರ್ಚೆ ಮಾಡಿದ್ದೇನೆ. ಪಕ್ಷದ ಸಂಘಟನೆ, ನವೆಂಬರ್ 18 ರಿಂದ ಪಂಚರತ್ನ ರಥಯಾತ್ರೆ ಪ್ರಾರಂಭ ಮಾಡಬೇಕು ಅಂತ ಇದ್ದೇವೆ. ಯಾವ ರೀತಿ ಮಾಡಬೇಕು ಅಂತ ಚರ್ಚೆ ಮಾಡಲು ಬಂದಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ವಿಚಾರವಾಗಿಯೂ ಮಾತನಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ನಾವು ಸಹ ಪ್ರತಿ ಅಭ್ಯರ್ಥಿಗಳಿಗೆ ಮುಂದಿನ ಆರು ತಿಂಗಳಿಗೆ ಯಾವ ರೀತಿ ಚುನಾವಣಾ ತಂತ್ರ ಅಳವಡಿಸಬೇಕು. ಪ್ರತಿ ಬೂತ್ ಮಟ್ಟದಲ್ಲಿ ಯಾವ ರೀತಿ ಜವಾಬ್ದಾರಿ ನಿರ್ವಹಣೆ, ಪ್ರತಿ ಮನೆ ಮನೆಗೆ ಪಂಚರತ್ನ ಯೋಜನೆ ಮುಟ್ಟಿಸುವ ವಿಚಾರ. ಪ್ರತಿ ಅಭ್ಯರ್ಥಿ ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿ ಮಾಡಬೇಕು. ನಿತ್ಯದ ಅವರ ಚಟುವಟಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿ ಮಾಡಬೇಕು. ನಮ್ಮ ಪಕ್ಷ ಸೈಲೆಂಟ್ ಆಗಿ ಕೆಲಸ ಮಾಡ್ತಾ ಇದ್ದೇವೆ. ಅಧ್ಯಕ್ಷರು ನಿಲ್ಲಿಸಬೇಕು ಅಂತ ಎಂಟತ್ತು ಕ್ಷೇತ್ರದಲ್ಲಿ ಒತ್ತಡ ಇದೆ. ನಾನು ಅವರು ಇಬ್ಬರೇ ಓಡಾಡಬೇಕಾಗಿದೆ. ಇಬ್ರಾಹಿಂ ಹಾಗೂ ನಾನು ರಾಜ್ಯ ಸುತ್ತಬೇಕು. ಪಕ್ಷ ಸಂಪೂರ್ಣ ಬಹುಮತ ತರಲು ಮಾಡಲಾಗುತ್ತದೆ ಎಂದು ಹೇಳಿದರು.
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ಕಿಡಿ
ಇವರು ಕೇಸರಿ ಬಣ್ಣ ಬಳಿಯುತ್ತಾರೆ, ಇನ್ನೊಬ್ಬರು ಬಂದು ಇನ್ನೊಂದು ಬಣ್ಣ ಬಳಿಯುತ್ತಾರೆ. ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಇವರು ( ಬಿಜೆಪಿ) ಬಂದಿದ್ದಾರೆ ಕೇಸರಿ ಬಣ್ಣ ಹಚ್ಚುತ್ತಿದ್ದಾರೆ. ಮುಂದೆ ಬರುವವರು ಇನ್ನೊಂದು ಬಣ್ಣ ಹಚ್ಚುತ್ತಾರೆ. ಒಬ್ಬಬ್ಬೊರು ಒಂದೊಂದು ಬಣ್ಣ ಹಚ್ತಾರೆ. ಕಲಿಕೆಗೆ ಪ್ರಾಮುಖ್ಯತೆ ಕೊಡಬೇಕಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೆ ಒಡೆಯೋದೇ ಕೆಲಸ. ಬಿಜೆಪಿಯವರಿಗೆ ಕಟ್ಟಿ ಅಭ್ಯಾಸ ಇಲ್ಲ. ಜನ ಇವರ ಹೇಳಿಕೆಗಳನ್ನು ಗಮನಿಸಬೇಕು. ಜನಕ್ಕೆ ನೆರಳು ಕೊಡೋದು ಮುಖ್ಯ. ನೆರಳು ಕೊಡೋದು ಯಾವುದಾದ್ರೇನು? ಎಂದರು.