One CET in Karnataka: ಮುಂದಿನ ವರ್ಷ ಒಂದೇ ಸಿಇಟಿ, ಈ ವರ್ಷ ಶುಲ್ಕ ಶೇ.10 ಹೆಚ್ಚಳ
Jun 23, 2022 10:11 AM IST
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಮುಂದಿನ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಸೇರಿ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಕಾಮನ್ ಎಂಟ್ರನ್ಸ್ ಟೆಸ್ಟ್ (ಸಿಇಟಿ) ಇರುವುದಿಲ್ಲ. ಕಾಮೆಡ್ ಕೆ ಯುಜಿಇಟಿ ಮುಂದಿನ ವರ್ಷದಿಂದ ಇರಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಮಾತ್ರ ಇರಲಿದೆ. ಅದೇ ರೀತಿ ವೃತ್ತಿಶಿಕ್ಷಣ ಕೋರ್ಸ್ಗಳ ಶುಲ್ಕ ಈ ವರ್ಷದಿಂದ ಶೇ.10 ಹೆಚ್ಚಳವಾಗಲಿದೆ.
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಸೇರಿ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಕಾಮನ್ ಎಂಟ್ರನ್ಸ್ ಟೆಸ್ಟ್ (ಸಿಇಟಿ) ಇರುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದ ಕಾಮೆಡ್ ಕೆ ಯುಜಿಇಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ವಿಕಾಸಸೌಧದಲ್ಲಿ ಕುಪೆಕಾ ಪ್ರ ತಿನಿಧಿಗಳು, ಇಲಾಖೆ ಅಧಿಕಾರಿಗಳ ಜಂಟಿ ಸಭೆ ಬುಧವಾರ ನಡೆಯಿತು. ಪರೀಕ್ಷೆಗಳ ವಿಲೀನ ಪ್ರಕ್ರಿಯೆ, ಒಂದೇ ಪರೀಕ್ಷೆಯ ವಿಧಾನ, ಪರಸ್ಪರ ತಿಳಿವಳಿಕೆ ಪತ್ರದ ತಯಾರಿ ಮುಂತಾದ ಪೂರ್ವಭಾವಿ ಸಿದ್ಧತೆಗಳನ್ನು ಉನ್ನತ ಶಿಕ್ಷಣ ಇಲಾಖೆ ಗಮನಿಸಲಿದೆ.
ಈ ಕುರಿತು ಖಾಸಗಿ ಕಾಲೇಜುಗಳ ಜತೆಗೆ ಒಪ್ಪಂದ ಮಾಡಿಕೊಂಡ ಬಳಿಕ ರಾಜ್ಯದಲ್ಲಿ ಒಂದೇ ಸಿಇಟಿ ಮತ್ತೆ ಜಾರಿಯಾಗಲಿದೆ. ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (ಕುಪೆಕಾ) ಕೂಡ ಒಂದು ಸಿಇಟಿ ಪರಿಕಲ್ಪನೆಗೆ ಸಹಮತ ವ್ಯ ಕ್ತಪಡಿಸಿದೆ. ಈ ಪ್ರಕ್ರಿಯೆಗೆ ಸಮಯಾವಕಾಶ ಬೇಕು. ಆದ್ದರಿಂದ ಒಂದೇ ಸಿಇಟಿ ಮುಂದಿನ ವರ್ಷ ಜಾರಿಗೆ ಬರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಶೇಕಡ 25 ಶುಲ್ಕ ಏರಿಕೆಗೆ ಆಗ್ರಹ
ಇಂಜಿನಿಯರಿಂಗ್ ಮತ್ತು ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕವನ್ನು ಶೇಕಡ 25 ಏರಿಸುವಂತೆ ಸರ್ಕಾರವನ್ನು ಕುಪೆಕಾ ಆಗ್ರಹಿಸಿತ್ತು. ಕರೋನಾ ಕಾರಣ ಎರಡು ವರ್ಷಗಳಿಂದ ವೃತ್ತಿ ಶಿಕ್ಷಣ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಆದ್ದರಿಂದ ಬುಧವಾರದ ಸಭೆಯಲ್ಲಿ ಸರ್ಕಾರ, ಈ ಕೋರ್ಸ್ಗಳ ಶುಲ್ಕವನ್ನು ಶೇಕಡ 10 ಏರಿಸಲು ಸಮ್ಮತಿ ನೀಡಿದೆ. ಇದು ಈ ವರ್ಷವೇ ಅನ್ವಯವಾಗಲಿದೆ. ಆದರೆ, ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಸಿದರು.
ಶಿಕ್ಷಣ ಶುಲ್ಕ ಪರಿಷ್ಕರಣೆ ಸಂಬಂಧ ಸರ್ಕಾರ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿದ ಶಿಫಾರಸು ವರದಿ ಪ್ರಕಾರ ಶಿಕ್ಷಣ ಶುಲ್ಕವನ್ನು ಶೇಕಡ 10 ಹೆಚ್ಚಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಹಣದುಬ್ಬರದ ಹಿನ್ನೆಲೆಯಲ್ಲಿ ಯಾರಿಗೂ ಹೊರೆಯಾಗದ ರೀತಿಯಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಪಾಲಕರಿಗೂ ಹೆಚ್ಚು ತೊಂದರೆ ಆಗದಂತೆ ಸರ್ಕಾರ ಗಮನಹರಿಸಿದೆ. ಖಾಸಗಿ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿದಿಲ್ಲ. ಖಾಸಗಿಯವರು ಶೇಕಡ 25 ಶುಲ್ಕ ಏರಿಕೆ ಮಾಡುವಂತೆ ಪಟ್ಟು ಹಿಡಿದಿದ್ದರು. ಆದರೆ, ಸಮಿತಿಯ ಶಿಫಾರಸು ವರದಿಯನ್ನು ಖಾಸಗಿಯವರ ಗಮನಕ್ಕೆ ತಂದು, ಅವರಿಗೆ ಅದನ್ನು ಮನವರಿಕೆ ಮಾಡಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಪೇಕಾ ಪದಾಧಿಕಾರಿಗಳ ಹೊರತಾಗಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇತರರು ಹಾಜರಿದ್ದರು.
ವಿಭಾಗ