January 28 Kannada News Updates: ಧಾರವಾಡದ ಕುಂದಗೋಳದಲ್ಲಿ ಅಮಿತ್ ಶಾ ರೋಡ್ ಶೋ
Jan 28, 2023 06:25 PM IST
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ಗೆ ಅಖಾಡ ಸಿದ್ಧ; ಕರ್ನಾಟಕಕ್ಕೆ ಉತ್ತರಾಖಂಡ ಎದುರಾಳಿ
ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಅಖಾಡ ಹಾಗೂ ತಂಡಗಳು ಸಿದ್ಧವಾಗಿದೆ. ಗುಂಪು ಹಂತದ ಪಂದ್ಯಗಳು ಮುಗಿದಿದ್ದು, ಎಲ್ಲಾ ನಾಲ್ಕು ಗುಂಪುಗಳಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಕರ್ನಾಟಕ ತಂಡ ಕೂಡಾ ಈ ರೇಸ್ನಲ್ಲಿದೆ.
ತಮಿಳುನಾಡು ವಿರುದ್ಧದ ಅಂತಿಮ ಸುತ್ತಿನ ಪಂದ್ಯದಲ್ಲಿ ಸೋತರೂ ಸೌರಾಷ್ಟ್ರ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಮತ್ತೊಂದೆಡೆ ಮುಂಬೈ-ಮಹಾರಾಷ್ಟ್ರ ನಡುವಣ ಪಂದ್ಯವು ರೋಚಕ ಡ್ರಾದಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಬಿ ಗುಂಪಿನಿಂದ ಆಂಧ್ರವು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು.
ಭಾರತೀಯ ಜೀವ ವಿಮಾ ನಿಗಮಕ್ಕೆ 16,580 ಕೋಟಿ ರೂ. ನಷ್ಟ
ಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ನ ಅಧ್ಯಯನ ವರದಿಗೆ ಕಳೆದ ಕೆಲವು ದಿನಗಳಿಂದ ಅದಾನಿ ಷೇರು ಸಾಮ್ರಾಜ್ಯ ಎರಡು ಲಕ್ಷ ಕೋಟಿಗೂ ಅಧಿಕ ನಷ್ಟ ಅನುಭವಿಸಿದ್ದು, ಅದಾನಿ ಗ್ರೂಪ್ನಲ್ಲಿ ಹೂಡಿಕೆ ಮಾಡಿರುವ ಎಲ್ಐಸಿಗೂ ನಷ್ಟದ ಬಿಸಿ ತಟ್ಟಿದೆ.
ಹಿಂಡನ್ಬರ್ಗ್ ರಿಸರ್ಚ್ ವರದಿಯು ಅದಾನಿ ಗ್ರೂಪ್ನ ಷೇರುಗಳ ಮೇಲೆ ಗಂಭೀರ ಹೊಡೆತವನ್ನೇ ನೀಡಿದೆ. ದಿನದಿಂದ ದಿನಕ್ಕೆ ಅದಾನಿ ಷೇರು ಮೌಲ್ಯ ಕುಸಿಯುತ್ತಿದೆ. ನಿನ್ನೆ ಒಂದೇ ದಿನ ಅದಾನಿ ಗ್ರೂಪ್ನ ಷೇರುಗಳ ಮೌಲ್ಯ ಶೇಕಡ 20ರಷ್ಟು ಕುಸಿದಿದೆ. ಇದರಿಂದ 4.17 ಲಕ್ಷ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ.
ಅದಾನಿ ಗ್ರೂಪ್ನ ರಿಟೇಲ್ ಮತ್ತು ಸಾಂಸ್ಥಿಕ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಭಾರತೀಯ ಜೀವ ವಿಮಾ ನಿಗಮವು ಅದಾನಿ ಗ್ರೂಪ್ನ ಬೃಹತ್ ದೇಶೀಯ ಸಾಂಸ್ಥಿಕ ಹೂಡಿಕೆದಾರ ಕಂಪನಿಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಎಲ್ಐಸಿಗೆ 16,580 ಕೋಟಿ ರೂ. ನಷ್ಟವಾಗಿದೆ. ಈ ಹದಿನಾರುವರೆ ಸಾವಿರ ಕೋಟಿ ರೂ.ಗಳಲ್ಲಿ ಅದಾನಿ ಟೋಟಲ್ ಗ್ಯಾಸ್ನಲ್ಲಿ ಮಾಡಿರುವ ಹೂಡಿಕೆಯಿಂದಲೇ ಎಲ್ಐಸಿಯು 6,232 ಕೋಟಿ ರೂ. ನಷ್ಟ ಅನುಭವಿಸಿದೆ. ಅದಾನಿ ಟೋಟಲ್ ಗ್ಯಾಸ್ನಲ್ಲಿ ಎಲ್ಐಸಿಯು ಶೇಕಡ 5.96ರಷ್ಟು ಷೇರು ಹೊಂದಿದೆ.
ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ
ಈಗಾಗಲೇ ಕೃಷಿ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯವಿರುವ ಧಾರವಾಡದಲ್ಲಿ ಪಾರೆನ್ಸಿಕ್ ಸೈನ್ಸ್ ಕಲಿಯಲು ಬಯುಸುವವರಿಗೆ ವಿಧಿವಿಜ್ಞಾನ ವಿಶ್ವವಿದ್ಯಾಲಯವೂ ಲಭ್ಯವಾಗಲಿದೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಇಂದು ಗೃಹಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
"ದೆಹಲಿಯಲ್ಲಿ ಈಗಾಗಲೇ ಫಾರೆನ್ಸಿಕ್ ವಿಶ್ವವಿದ್ಯಾಲಯವಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಧಾರವಾಡದಲ್ಲಿಯೂ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಭವಿಷ್ಯದಲ್ಲಿ ಭಾರತವು ಅತಿ ಹೆಚ್ಚು ಫಾರೆನ್ಸಿಕ್ ತಜ್ಞರನ್ನು ಹೊಂದಿರುವ ದೇಶವಾಗಲಿದೆʼʼ ಎಂದು ಈ ಸಂದರ್ಭದಲ್ಲಿ ಅಮಿತ್ ಶಾ ಹೇಳಿದ್ದಾರೆ.
ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆ ಅಪರಾಧಿಗಳು ಸಹ ತಂತ್ರಜ್ಞಾನ ಬಳಸುತ್ತಿದ್ದಾರೆ. 10 ವರ್ಷದ ಸೈಬರ್ ಕ್ರೈಂ ಬಗ್ಗೆ ಕೇಳಿರಲಿಲ್ಲ. ಈಗ ಅದರ ಬಗ್ಗೆಯೇ ಕಾನೂನು ಸಹ ಬಂದಿದೆ. ಹೊಸ ರೀತಿಯ ಅಪರಾಧಗಳ ಕಡಿವಾಣ ಹಾಕಬೇಕಾದ್ರೆ ನಮ್ಮ ತಂತ್ರಜ್ಞಾನ ಮುಂದಿರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಧಾರವಾಡದಲ್ಲಿ ಜರುಗಿದ ಕರ್ನಾಟಕ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಸಮಾರಂಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊಘಲ್ ಉದ್ಯಾನವನದ ಹೆಸರು ಬದಲಾವಣೆ
ಅಜಾದಿ ಕಾ ಅಮೃತ ಮಹೋತ್ಸವ ಭಾಗವಾಗಿ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ನ ಹೆಸರನ್ನು ಕೇಂದ್ರ ಸರಕಾರ ಬದಲಾಯಿಸಿದೆ. ಮೊಘಲ್ ಉದ್ಯಾನವನಕ್ಕೆ ಅಮೃತ್ ಉದ್ಯಾನವನ ಎಂದು ನಾಮಕರಣ ಮಾಡಿದೆ. ಈಗಾಗಲೇ ಕೇಂದ್ರ ಸರಕಾರವು ಹಲವು ಪ್ರಮುಖ ಸ್ಥಳಗಳ ಹೆಸರು ಬದಲಾಯಿಸಿದೆ. ರಾಜ್ಪಥದ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸಲಾಗಿತ್ತು.
"ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಮೊಘಲ್ ಗಾರ್ಡನ್ ಹೆಸರನ್ನು ಅಮೃತ ಉದ್ಯಾನವನ ಎಂದು ಬದಲಾಯಿಸಲು ರಾಷ್ಟ್ರಪತಿ ಸಮ್ಮತಿ ನೀಡಿದ್ದಾರೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಡೆಪ್ಯೂಟಿ ಪ್ರೆಸ್ ಸೆಕ್ರೆಟರಿ ನವಿಕಾ ಗುಪ್ತಾ ಹೇಳಿದ್ದಾರೆ.
ಧಾರವಾಡದ ಕುಂದಗೋಳದಲ್ಲಿ ಅಮಿತ್ ಶಾ ರೋಡ್ ಶೋ
- ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರೋಡ್ ಶೋ ನಡೆಯುತ್ತಿದೆ.
- ಇವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದಾರೆ.
- ರೋಡ್ ಶೋ ಅಂತರವನ್ನು ಒಂದೂವರೆ ಕಿ.ಮೀ.ಯಿಂದ ಒಂದು ಕಿ.ಮೀ.ಗೆ ಇಳಿಕೆ ಮಾಡಲಾಗಿದೆ.
- ಭಾರೀ ಸಂಖ್ಯೆಯಲ್ಲಿ ಜನರು ಈ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ.
ಸಚಿವರಿಂದ ಪದ್ಮ ಪುರಸ್ಕೃತರ ಭೇಟಿ, ಅಭಿನಂದನೆ
ಈ ಸಾಲಿನ ಪದ್ಮಭೂಷಣ ಪುರಸ್ಕೃತರಾದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಮತ್ತು ಪದ್ಮಶ್ರೀ ಪುರಸ್ಕೃತರಾದ ಡಾ.ಖಾದರ್ ಮತ್ತು ಡಾ. ಸುಬ್ಬರಾಮನ್ ಅವರ ನಿವಾಸಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಶನಿವಾರ ಭೇಟಿ ನೀಡಿ, ಅಭಿನಂದಿಸಿದರು.
ಮೊದಲು ಭೈರಪ್ಪನವರ ಮನೆಗೆ ತೆರಳಿದ ಅವರು, ಲೇಖಕರಿಗೆ ಶಾಲು ಹಾಕಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು,"ಭೈರಪ್ಪನವರ ಸಾಹಿತ್ಯ ಸಾಧನೆಯು ಅನುಪಮವಾಗಿದ್ದು, ಭಾರತೀಯ ಚಿಂತನೆಗಳನ್ನು ಉದ್ದೀಪಿಸುವಂತಿದೆ. ಅವರಿಗೆ ಪದ್ಮಭೂಷಣ ಪುರಸ್ಕಾರ ಕೊಟ್ಟಿರುವುದರಿಂದ ಪ್ರಶಸ್ತಿಗೆ ಮೌಲ್ಯ ಬಂದಿದೆ" ಎಂದರು.
ಹಾಗೆಯೇ, ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಮೂಲಕ ಡಾ.ಖಾದರ್ ಮತ್ತು ತಾಳೆಗರಿಗಳ ಡಿಜಿಟಲ್ ಅಧ್ಯಯನಕ್ಕೆ ಕಾರಣಕರ್ತರಾಗಿರುವ ಡಾ.ಸುಬ್ಬರಾಮನ್ ಅವರ ಸಾಧನೆ ಅನುಕರಣೀಯವಾಗಿದೆ" ಎಂದು ಸಚಿವರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಮಲ್ಸೆರಿ ಡುಂಗ್ರಿ ದೇವಸ್ಥಾನದ ಯಜ್ಞ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ
ರಾಜಸ್ಥಾನದ ಭಿಲ್ವಾರ್ನಲ್ಲಿರುವ ಮಲ್ಸೆರಿ ಡುಂಗ್ರಿ ದೇವಸ್ಥಾನದ ಯಜ್ಞಶಾಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ರಾಜಸ್ಥಾನದ ಮಲ್ಸೇರಿ ಡುಂಗ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರಾಜಸ್ಥಾನದ ಭಿಲ್ವಾರದಲ್ಲಿರುವ ಮಲ್ಸೇರಿ ಡುಂಗ್ರಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು. ಅವರು ರಾಜ್ಯದ ಜಾನಪದ ದೇವರಾದ ದೇವನಾರಾಯಣನ 1,111 ನೇ ಜನ್ಮದಿನದಂದು ಜಿಲ್ಲೆಯ ಅಸಿಂಡ್ನಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಐಎಎಫ್ ಯುದ್ಧ ವಿಮಾನಗಳು!
ಮಧ್ಯಪ್ರದೇಶದಲ್ಲಿ ಭಾರತೀಯ ವಾಯುಸೇನೆಯ ಜೆಟ್ ವಿಮಾನಗಳ ಅವಶೇಷಗಳು ಕಂಡುಬಂದಿದ್ದು, ಎರಡು ಜೆಟ್ಗಳು ಪತನಗೊಂಡಿರುವುದನ್ನು ಭಾರತೀಯ ವಾಯುಸೇನೆಯಯ ದೃಢಪಡಿಸಿದೆ. ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ ಎಂದು ಐಎಎಫ್ ತಿಳಿಸಿದೆ.
ಧನಬಾದ್ ಆಸ್ಪತ್ರೆ ವಸತಿ ಸಮುಚ್ಛಯದಲ್ಲಿ ಅಗ್ನಿ ದುರಂತ: ಒಂದೇ ಕುಟುಂಬದ ಐವರ ಸಾವು!
ಜಾರ್ಖಂಡ್ನ ಧನಬಾದ್ನ ಆಸ್ಪತ್ರೆಯೊಂದರ ವಸತಿ ಸಮುಚ್ಚಯದಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಈ ಭೀಕರ ಅಗ್ನಿ ದುರಂತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಧನ್ಬಾದ್ ಡಿಎಸ್ಪಿ (ಕಾನೂನು ಮತ್ತು ಸುವ್ಯವಸ್ಥೆ) ಅರವಿಂದ್ ಕುಮಾರ್ ಬಿನ್ಹಾ, ಈ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸನಾತನ ಧರ್ಮ ಭಾರತದ 'ರಾಷ್ಟ್ರೀಯ ಧರ್ಮ': ಯೋಗಿ ಆದಿತ್ಯನಾಥ್ ಅಭಿಮತ
ಸನಾತನ ಧರ್ಮ ಭಾರತದ 'ರಾಷ್ಟ್ರೀಯ ಧರ್ಮ'ವಾಗಿದ್ದು, ಈ ಧರ್ಮದ ರಕ್ಷಣೆಗೆ ಪ್ರತಿಯೊಬ್ಬ ಭಾರತೀಯ ಕಟಿಬದ್ಧವಾಗಿರಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಜಸ್ಥಾನದ ಜಲೋರ್ನಲ್ಲಿ ಮಾತನಾಡಿದ ಅವರು, 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕರ್ನಾಟಕಕ್ಕೆ ಬಂದಿಳಿದ ಅಮಿತ್ ಶಾ: ಕಾರ್ಯಕ್ರಮಗಳ ವಿವರ ಹೀಗಿದೆ
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು (ಜ.28-ಶನಿವಾರ) ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕ ಬಿಜೆಪಿ ಘಟಕ, ಅಮಿತ್ ಶಾ ಅವರ ಭೇಟಿಯ ವಿವರಗಳನ್ನು ತನ್ನ ಅಧಿಕೃತ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ.
ಭಾರತ ಸೇರಿ ನಾಲ್ಕು ರಾಷ್ಟ್ರಗಳ ಪ್ರವಾಸ ಮಾಡಲಿರುವ ವಿಕ್ಟೋರಿಯಾ ನ್ಯುಲ್ಯಾಂಡ್
ಯುನೈಟೆಡ್ ಸ್ಟೇಟ್ಸ್ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವಿಕ್ಟೋರಿಯಾ ನುಲ್ಯಾಂಡ್ ಅವರು, ಜನವರಿ 28 ರಿಂದ ಫೆಬ್ರವರಿ 3 ರವರೆಗೆ ನೇಪಾಳ, ಭಾರತ, ಶ್ರೀಲಂಕಾ ಮತ್ತು ಕತಾರ್ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಜೆರುಸಲೇಂನಲ್ಲಿ ಭೀಕರ ಗುಂಡಿನ ದಾಳಿ: ಏಳು ಜನರ ದುರ್ಮರಣ!
ಜೆರುಸಲೇಂನ ಹೊರವಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ದುರ್ಘಟನೆಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 10 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಮಾಚಲದಲ್ಲಿ ಭಾರೀ ಹಿಮಪಾತ: ಅಟಲ್ ಸುರಂಗದ ಬಳಿ ಸಂಚಾರ ನಿರ್ಬಂಧ!
ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು, ಇಲ್ಲಿನ ಲಾಹೌಲ್ ಸ್ಪಿತಿಯ ಅಟಲ್ ಸುರಂಗದ ಬಳಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆಯಿಂದ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಕರ್ನಾಟಕದ ಜನತೆಗೆ ಜನಪರ ಬಜೆಟ್ ನೀಡುವ ವಾಗ್ದಾನ ಮಾಡಿದ ಸಿಎಂ ಬೊಮ್ಮಾಯಿ
ಈ ಬಾರಿಯ ರಾಜ್ಯ ಬಜೆಟ್ ಜನಪರವಾಗಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಜನತೆಗೆ ವಾಗ್ದಾನ ಮಾಡಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವ ಜನತೆಯ ಬೇಡಿಕೆಗಳಿಗೆ ಅನುಗುಣವಾಗಿ ಬಜೆಟ್ ಮಂಡಿಸಲಾಗುವುದು. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಪರ ಬಜೆಟ್ ಮಂಡನೆಗೆ ಒತ್ತು ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.