ತಮ್ಮ ರಸ್ತೆಯಲ್ಲಿ ಎಸೆದ ಕಲ್ಲುಗಳನ್ನು ಸೇರಿಸಿ ಮೋದಿ ಕಟ್ಟಿರುವ ಸೌಧ ಅಷ್ಟು ಬೇಗ ಕುಸಿಯಲ್ಲ; ಸಂಸತ್ ದಾಳಿ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ
Dec 14, 2023 05:51 PM IST
ಸಂಸತ್ನಲ್ಲಿ ಭದ್ರತಾ ಲೋಪ
- ಸಂಸತ್ನಲ್ಲಿ ಭದ್ರತಾ ಲೋಪ ಪ್ರಕರಣ ಸಂಬಂಧ ಎಲ್ಲೆಡೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಕುರಿತು ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಇದು ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ 'ಎಚ್ಟಿ ಕನ್ನಡ'ದಲ್ಲಿ ಮರುಪ್ರಕಟಿಸಿದ್ದೇವೆ.
ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ನಿನ್ನೆ (ಡಿ.13, ಬುಧವಾರ) ಲೋಕಸಭೆ ಕಲಾಪ ನಡೆಯುತ್ತಿರುವಾಗಲೇ ವೀಕ್ಷಕರ ಗ್ಯಾಲರಿಯಿಂದ ಒಬ್ಬ ಯುವಕ ಕಲಾಪ ಸ್ಥಳಕ್ಕೆ ನುಗ್ಗಿ ಹಳದಿ ಬಣ್ಣದ ಗ್ಯಾಸ್ ಕ್ಯಾನಿಸ್ಟರ್ ಚೆಲ್ಲಿ ಗದ್ದಲ ಉಂಟುಮಾಡಿದ್ದ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರತಾ ವ್ಯವಸ್ಥೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ. ಈ ಬಗ್ಗೆ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡ ವಿಚಾರ ಇಲ್ಲಿದೆ.
ಅಮೆರಿಕದ 33ನೇ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರ “ನೀವು ಅವರನ್ನು ಮನವೊಲಿಸಲು ಸಾಧ್ಯವಾಗದಿದ್ದರೆ, ಅವರನ್ನು ಗೊಂದಲಗೊಳಿಸಿ” ಎಂಬ ಮಾತಿನೊಂದಿಗೆ ಆರಂಭವಾದ ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್ಬುಕ್ ಪೋಸ್ಟ್ ಹೀಗಿದೆ..
“If you can't convince them, confuse them.” ನಮ್ಮ ಸಂಸತ್ತಿನ ಮೇಲಾಗಿರುವ ದಾಳಿ ಅದು ಭಾರತದ ಮೇಲಾಗಿರುವ ದಾಳಿ. ಸಾವು ನೋವು ಆಗದೆ ಇರಬಹುದು ಆದರೆ ಇದು ನಮ್ಮ ಮೇಲಾಗಿರುವ ದಾಳಿ. ನಾವು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತೇವೆ ಎಂದು ಹೇಳುವ ದಾಟಿಯ ದಾಳಿ. ಇದರ ಹಿಂದಿನ ಮಾಸ್ಟರ್ ಮೈಂಡ್ನನ್ನು ಜನತೆಯ ಮುಂದೆ ಆದಷ್ಟೂ ಬೇಗ ತರಬೇಕು.
ಭಾರತ ಈ ಪರಿಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಚೀನಾ , ಯೂರೋಪಿಯನ್ ನೇಷನ್ಸ್ ಜೊತೆಗೆ ಅಮೆರಿಕಾ ದೇಶಕ್ಕೂ ಬೇಕಿಲ್ಲ. ಇವರೆಲ್ಲರಿಗೂ ಹಾವಾಡಿಗರ ದೇಶ ಎನ್ನಿಸಿಕೊಂಡಿದ್ದ ಭಾರತ ಇಷ್ಟು ಕಡಿಮೆ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಅರಗಿಸಿಕೊಳ್ಳಲು ಆಗಿಲ್ಲ , ಹೀಗಾಗಿ ಇವರೆಲ್ಲರಿಗೂ ಮಲಬದ್ಧತೆ ಕಾಡುತ್ತಿದೆ. ಇವರ ಜೊತೆಗೆ ನಮ್ಮ ಮನೆಯಲ್ಲೇ ಇದ್ದು , ನಮ್ಮ ಜೊತೆಯಲ್ಲೇ ಒಡನಾಟ ಇಟ್ಟುಕೊಂಡು ನಮಗೆ ಕೆಡುಕು ಬಯಸುವ ಶಕುನಿಗಳು ಇರುವಾಗ ಅವರಿಗೆ ಕೆಲಸ ಸುಲಭ.
ಇದು ಜನತೆಯನ್ನು ಪೂರ್ಣವಾಗಿ ಕನ್ಫ್ಯೂಸ್ ಮಾಡುವ ಕೆಲಸ. ನೋಡ್ರಿ ನಿಮ್ಮ ಮೋದಿ ಪಕ್ಕದ ದೇಶಕ್ಕೆ 'ಗುಸ್ ಕೆ ಮಾರ್ ದಿಯ ' ಅಂತಲೋ 'ಮಾರೇಂಗೆ ' ಅಂತನೋ ಹೇಳ್ತ ಇರುತ್ತಾರೆ , ಮನೆಯನ್ನೆ ಸುರಕ್ಷಿತವಾಗಿ ಇಟ್ಟುಕೊಂಡಿಲ್ಲ ಎನ್ನುವ ಸಂದೇಶ ಜನತೆಗೆ ತಲುಪಿಸುವ ಕೆಲಸ ಇದು. ಜಾಗತಿಕ ಮಟ್ಟದಲ್ಲಿ ಕೂಡ ಇಂತಹ ಸೆಕ್ಯುರಿಟಿ ಲ್ಯಾಪ್ಸ್ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾತಾಗುತ್ತದೆ. ಭಾರತ ನಾವೆಂದು ಕೊಂಡಷ್ಟು ಸುರಕ್ಷಿತವೂ ಅಲ್ಲ , ಬಲಶಾಲಿಯೂ ಅಲ್ಲ ಎನ್ನುವ ಗುಸುಗುಸು ಹುಟ್ಟುಹಾಕುವುದಕ್ಕೆ ಈ ಕಿಡಿ ಸಾಕು.
ಆದರೆ ನಿಮಗೆಲ್ಲಾ ಗೊತ್ತಿರಲಿ ಜಗತ್ತನ್ನು ಒಂದು ದೊಡ್ಡ ಬಸ್ ಎಂದುಕೊಂಡರೆ ಚೀನಾ , ಅಮೆರಿಕಾ , ಜಪಾನ್ ಮತ್ತು ಜರ್ಮನಿ , ಭಾರತ ಇಂಜಿನ್ ಇದ್ದಹಾಗೆ. ಬಸ್ ಓಡಲು ಇಂಜಿನ್ ಸ್ಟಾರ್ಟ್ ಆಗಬೇಕು. ಆದರೆ ವಿಷಯ ಏನು ಗೊತ್ತ ಮೊದಲ ನಾಲ್ಕು ಇಂಜಿನ್ಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ ! ಅಮೆರಿಕಾ ಆರ್ಥಿಕವಾಗಿ ಇನ್ನೂ ಚೇತರಿಕೆಯ ಸ್ಥಿತಿಯಲ್ಲಿದೆ. ಚೀನಾ ಡಿಫ್ಲ್ಲೇಶನ್ ನಲ್ಲಿ ಮುಳುಗಿದೆ. ಇದು ಇನ್ಫ್ಲೇಶನ್ ಅವರಪ್ಪ , ಅದಕ್ಕಿಂತ ಭಯಂಕರ ಭೀಮಾರಿ. ಇನ್ನು ಜಪಾನ್ ಕೂಡ ತೀರಾ ಇತ್ತೀಚಿನ ವರೆಗೆ ಡಿಫ್ಲೇಷನ್ ನಿಂದ ನರಳುತ್ತಿತ್ತು. ಜರ್ಮನಿ ಆರ್ಥಿಕ ಮುಗ್ಗಟ್ಟಿನಲ್ಲಿ ಮುಳುಗಿದೆ. ಅದರ ಗ್ರೋಥ್ ರೇಟ್ ನೆಗಟಿವ್ನಲ್ಲಿದೆ. ಉಳಿದದ್ದು ಭಾರತ. ಸದ್ಯದ ಮಟ್ಟಿಗೆ ಬಸ್ ಮುಂದಕ್ಕೆ ಸಾಗುತ್ತಿರುವುದಕ್ಕೆ ನಮ್ಮ ದೇಣಿಗೆ ಬಹಳ ದೊಡ್ಡದ್ದು. ಭಾರತವನ್ನು ಕೆಡವುದು ನಾವು ಕುಳಿತ ರಂಬೆಯನ್ನು ಕಡಿಯಲು ಹೊರಟಂತೆ !
ಇನ್ನು ನಮ್ಮೂರಿನ ಸಂಸದರ ಬಗ್ಗೆ , ಆತ ದೇಶದ್ರೋಹದ ಕೆಲಸ ಎಂದಿಗೂ ಮಾಡುವುದಿಲ್ಲ ಅದರ ಬಗ್ಗೆ ಸಂಶಯ ಬೇಕಿಲ್ಲ. ಆತನ ಬಳಿ ಹೋಗಿ ಅಲ್ಲಿಂದ ಒಪ್ಪಿಗೆ ಪಡೆದು ಪಾಸ್ ಇಶ್ಯೂ ಆಗಿದ್ದರೂ , ವಿಸಿಟರ್ಸ್ ಬ್ಯಾಕ್ಗ್ರೌಂಡ್ ಚೆಕ್ ಆಗಿರುತ್ತದೆ. ಅವರಾರಿಗೂ ಕ್ರಿಮಿನಲ್ ಬ್ಯಾಕ್ಗ್ರೌಂಡ್ ಇಲ್ಲ. ಇದು ಹೇಗೆ ಅಂದರೆ ನನಗೆ ಸಿಗದ ಹಾಲು ಇದ್ದೇನು ಪ್ರಯೋಜನ ಎಂದು ಹುಳಿ ಹಿಂಡುವ ಕೆಲಸ ಅಷ್ಟೇ. ಬಟ್ ಮೋದಿಜೀ ಹುಳಿ ಹಿಂಡಿದ ಹಾಲಿನಿಂದ ಪನ್ನೀರ್ ತಯಾರಿಸುತ್ತಾರೆ ನೋಡುತ್ತಿರಿ. ಇಲ್ಲಿಯವರೆಗೆ ಅವರ ರಸ್ತೆಯಲ್ಲಿ ಎಸೆದ ಕಲ್ಲುಗಳನ್ನು ಸೇರಿಸಿ ಅವರು ಕಟ್ಟಿರುವ ಸೌಧ ಅಷ್ಟು ಬೇಗ ಕುಸಿಯುವುದಿಲ್ಲ.
ಇದೇನೇ ಇರಲಿ , ನನ್ನ ದೇಶದ ಪಾರ್ಲಿಮೆಂಟ್ ಮೇಲಾದ ದಾಳಿಯನ್ನು ನಾನು ಖಂಡಿಸುತ್ತೇನೆ.
- ರಂಗಸ್ವಾಮಿ ಮೂಕನಹಳ್ಳಿ