India-China Border Clash: ತವಾಂಗ್ ಘರ್ಷಣೆ: ಚರ್ಚೆಗೆ ಆಸ್ಪದ ನೀಡದ ಕಾರಣಕ್ಕೆ ರಾಜ್ಯಸಭೆಯಲ್ಲಿ 17 ವಿಪಕ್ಷಗಳಿಂದ ಸಭಾತ್ಯಾಗ!
Dec 14, 2022 03:10 PM IST
ರಾಜ್ಯಸಭೆ ಕಲಾಪ
- ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆ ಬಗ್ಗೆ, ಸರ್ಕಾರ ಚರ್ಚೆಗೆ ಆಸ್ಪದ ಕೊಡುತ್ತಿಲ್ಲ ಎಂದು ಆರೋಪಿಸಿ, 17 ವಿರೋಧ ಪಕ್ಷಗಳು ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ನಡೆಸಿದವು. ಭಾರತ-ಚೀನಾ ಗಡಿ ಘರ್ಷಣೆ ಕುರಿತು ಚರ್ಚೆ ನಡೆಸುವ ಪ್ರತಿಪಕ್ಷಗಳ ಬೇಡಿಕೆಗೆ ಉಪ ಸಭಾಪತಿ ಅವಕಾಶ ನೀಡದ ಕಾರಣಕ್ಕೆ, 17 ವಿರೋಧ ಪಕ್ಷಗಳು ಸಭಾತ್ಯಾಗ ನಡೆಸಿದವು.
ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆ ಬಗ್ಗೆ, ಸರ್ಕಾರ ಚರ್ಚೆಗೆ ಆಸ್ಪದ ಕೊಡುತ್ತಿಲ್ಲ ಎಂದು ಆರೋಪಿಸಿ, 17 ವಿರೋಧ ಪಕ್ಷಗಳು ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ನಡೆಸಿದವು.
ಕಾಂಗ್ರೆಸ್, ಆರ್ಜೆಡಿ, ಆಪ್, ಎಂಡಿಎಂಕೆ, ಸಿಪಿಎಂ, ಸಿಪಿಐ, ಜೆಡಿಯು, ಡಿಎಂಕೆ, ಟಿಎಂಸಿ ಮತ್ತು ಟಿಡಿಪಿ ಸೇರಿದಂತೆ, ಒಟ್ಟು 17 ವಿರೋಧ ಪಕ್ಷಗಳು ಶೂನ್ಯ ವೇಳೆಯಲ್ಲಿ ಸದನದಿಂದ ಹೊರನಡೆದವು.
ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೇ, ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಅವರು, ತವಾಂಗ್ ಘರ್ಷಣೆ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಆದರೆ ಉಪ ಸಭಾಪತಿ ಹರಿವಂಶ್ ಅವರು, ಸಂಸದರು ಇತರ ವಿಷಯಗಳ ಕುರಿತು ಚರ್ಚಿಸಲು ಮನವಿ ಮಾಡಿದರು.
ಭಾರತ-ಚೀನಾ ಗಡಿ ಘರ್ಷಣೆ ಕುರಿತು ಚರ್ಚೆ ನಡೆಸುವ ಪ್ರತಿಪಕ್ಷಗಳ ಬೇಡಿಕೆಗೆ ಉಪ ಸಭಾಪತಿ ಅವಕಾಶ ನೀಡದ ಕಾರಣಕ್ಕೆ, 17 ವಿರೋಧ ಪಕ್ಷಗಳು ಸಭಾತ್ಯಾಗ ನಡೆಸಿದವು. ಬಳಿಕ ಸಂಸತ್ತಿನ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಸರ್ಕಾರ ತವಾಂಗ್ ಘರ್ಷಣೆ ಬಗ್ಗೆ ಚರ್ಚೆ ನಡೆಸಲು ಸಿದ್ಧವಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಎಲ್ಲ 17 ವಿರೋಧ ಪಕ್ಷಗಳು ಸೈನಿಕರ ಬೆಂಬಲಕ್ಕೆ ಅತ್ಯಂತ ಗಟ್ಟಿಯಾಗಿ ನಿಂತಿವೆ. ಆದರೆ ಗಡಿ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದ ವಿಚಾರದಲ್ಲಿ ನಾವೆಲ್ಲರೂ ಚಿಂತಿಸುತ್ತಿದ್ದೇವೆ. ರಾಷ್ಟ್ರೀಯ ಭದ್ರತೆಯೇ ನಮಗೆ ಪ್ರಮುಖ ವಿಚಾರವಾಗಿದೆ ಎಂದು ಪ್ರಮೋದ್ ತಿವಾರಿ ಇದೇ ವೇಳೆ ಸ್ಪಷ್ಟಪಡಿಸಿದರು.
ಎಲ್ಎಸಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ಬಗ್ಗೆ, ಚರ್ಚೆ ನಡೆಸಲು ಸರ್ಕಾರ ಏಕೆ ಸಿದ್ಧವಾಗಿಲ್ಲ ಎಂದು ನಮಗೆ ತಿಳಿಯುತ್ತಿಲ್ಲ ಎಂದು ಸಿಪಿಐ (ಎಂ) ಸಂಸದ ಜಾನ್ ಬ್ರಿಟಾಸ್ ಇದೇ ವೇಳೆ ಅಸಮಾಧಾನ ಹೊರಹಾಕಿದರು.
ಗಡಿ ಘರ್ಷಣೆ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿಲ್ಲದಿರುವುದು, ಸದನಕ್ಕೆ ಮಾಡಿದ ಅಪಮಾನವಾಗಿದೆ ಎಂದು ಸಿಪಿಐ ಕಿಡಿಕಾರಿದೆ. ಜೆಡಿಯು ಕೂಡ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಯಾಂಗ್ಟ್ಸೆ ಪ್ರದೇಶದಲ್ಲಿ, ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯನ್ನು ಉಲ್ಲಂಘಿಸಲು ಯತ್ನಿಸಿದ ಚೀನಾದ ಸೈನಿಕರನ್ನು ಭಾರತೀಯ ಸೈನಿಕರು ಧೈರ್ಯವಾಗಿ ತಡೆದಿದ್ದಾರೆ. ಘರ್ಷಣೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ಭಾರತೀಯ ಸೈನಿಕರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿನ್ನೆ(ಡಿ.೧೩-ಮಂಗಳವಾರ)ಯೇ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಉಭಯ ಸದನಗಳ ಲಿಖಿತ ಹೇಳಿಕೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ನಮ್ಮ ಪಡೆಗಳು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಮಗ್ರತೆ ಮೇಲೆ ಮಾಡುವ ಯಾವುದೇ ದಾಳಿ ಪ್ರಯತ್ನವನ್ನು ವಿಫಲಗೊಳಿಸುವುದನ್ನು ಮುಂದುವರಿಸುತ್ತವೆ" ಎಂದು ಭರವಸೆ ನೀಡಿದ್ದಾರೆ.
ಸಂಬಂಧಿತ ಸುದ್ದಿ
India-China Border Clash: ತವಾಂಗ್ ಘರ್ಷಣೆ: 'ಗೆಳೆಯ'ನಿಗಾದ ಕಿರಿಕಿರಿಯನ್ನು ಗಮನಿಸುತ್ತಿರುವುದಾಗಿ ಹೇಳಿದ ಬೈಡನ್ ಆಡಳಿತ
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಸಂಘರ್ಷ ಭೀಕರ ಸ್ವರೂಪ ಪಡೆಯುವ ಮೊದಲೇ ಉಭಯ ಬಣಗಳು ಹಿಂದಕ್ಕೆ ಸರಿದಿರುವುದು ಸ್ವಾಗತಾರ್ಹ ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಸಂಘರ್ಷ ಭೀಕರ ಸ್ವರೂಪ ಪಡೆಯದೇ ಇರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ