Bihar News: ಬಿಹಾರ ಮುಖ್ಯಮಂತ್ರಿಯಾಗಿ 9ನೇ ಸಲ ನಿತೀಶ್ ಕುಮಾರ್ ಪ್ರಮಾಣ ಸ್ವೀಕಾರ, ಬಿಜೆಪಿ ಜೆಡಿಯು ಸರ್ಕಾರ ಅಸ್ತಿತ್ವಕ್ಕೆ
Jan 28, 2024 05:14 PM IST
ಬಿಹಾರದ ಮುಖ್ಯಮಂತ್ರಿಯಾಗಿ 9ನೇ ಸಲ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್
ಬಿಹಾರದಲ್ಲಿ ಮತ್ತೆ ಬಿಜೆಪಿ- ಜೆಡಿಯು ಸರ್ಕಾರ ರಚನೆಯಾಗಿದೆ. ಎರಡು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಪಾಟ್ನಾ: ನಾಟಕೀಯವಾಗಿರುವ ರಾಜಕೀಯ ವಿದ್ಯಮಾನಗಳ ಬಳಿಕ ಬಿಹಾರದಲ್ಲಿ ಮತ್ತೆ ಬಿಜೆಪಿ- ಜೆಡಿಯು ಸರ್ಕಾರ ರಚನೆಯಾಗಿದೆ. ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಭಾನುವಾರ (ಜ.28) 9ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಕಳೆದ ಎರಡು ವರ್ಷದ ಅವಧಿಯಲ್ಲಿ ಇದು ಎರಡನೇ ಸಲ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವಂಥದ್ದು. ಆರ್ಜೆಡಿ - ಜೆಡಿಯು ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಗಂಟೆಗಳ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜತೆ ಸೇರಿ ಮತ್ತೆ ಹೊಸ ಸರ್ಕಾರವನ್ನು ನಿತೀಶ್ ಕುಮಾರ್ ರಚಿಸಿದ್ದಾರೆ.
ಬಿಜೆಪಿಯಿಂದ ನಿತೀಶ್ ಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ ಒಟ್ಟು 8 ನಾಯಕರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ಪ್ರೇಮ್ ಕುಮಾರ್ ಮತ್ತು ಜೆಡಿಯುನಿಂದ ಮೂವರು - ವಿಜಯ್ ಕುಮಾರ್ ಚೌಧರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರವೋನ್ ಕುಮಾರ್ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಅಧ್ಯಕ್ಷ ಸಂತೋಷ್ ಕುಮಾರ್ ಸುಮನ್ ಮತ್ತು ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಭಾರತ್ ಮಾತಾ ಕಿ ಜೈ ಮತ್ತು ಜೈ ಶ್ರೀ ರಾಮ್ ಘೋಷಣೆಗಳ ನಡುವೆ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ, ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಸಾಮ್ರಾಟ್ ಚೌಧರಿ, ಜೆಪಿ ನಡ್ಡಾ ಉಪಸ್ಥಿತರಿದ್ದರು.
ನಿತೀಶ್ ಕುಮಾರ್ 9ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ: ಪ್ರಮುಖ ಅಂಶಗಳು
1) ನಿತೀಶ್ ಕುಮಾರ್ ಜೊತೆಗೆ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
2) ಬಿಹಾರದಲ್ಲಿ ಬದಲಾದ ರಾಜಕೀಯ ಸಮೀಕರಣದ ಪ್ರಕಾರ ಹೊಸ ಸಚಿವ ಸಂಪುಟ ಇಂದು ರಚನೆಯಾಗಲಿದೆ. ಈ ವಿದ್ಯಮಾನದ ಅರಿವು ಹೊಂದಿದ್ದ ಆರ್ಜೆಡಿ ಸಚಿವರು ನಿನ್ನೆಯಿಂದಲೇ (ಜ.27) ಸಚಿವ ಸಂಪಟ ಸಭೆಯಿಂದ ದೂರ ಇದ್ದರು.
3) ತೇಜಸ್ವಿ ಯಾದವ್ ಅವರು 2024 ರಲ್ಲಿ ಜೆಡಿಯು ಅಂತ್ಯ ಕಾಣಲಿದೆ ಮತ್ತು ಬಿಹಾರದಲ್ಲಿ ಆಟ ಮುಗಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
4) ಬಿಜೆಪಿಯೊಂದಿಗಿನ ನಿತೀಶ್ ಅವರ ಮೈತ್ರಿಯು ಅಲ್ಪಕಾಲಿಕವಾಗಿರುತ್ತದೆ ಮತ್ತು ಲೋಕಸಭೆ ಚುನಾವಣೆಯ ನಂತರದ ಆರು ತಿಂಗಳೊಳಗೆ ಮತ್ತೆ ರಾಜಕೀಯ ಬದಲಾವಣೆಗಳಾಗಲಿವೆ. ಆದರೆ ನಿತೀಶ್ ಕುಮಾರ್ ಯಾರ ಜೊತೆ ಹೋದರೂ 2025 ರ ರಾಜ್ಯ ಚುನಾವಣೆಯಲ್ಲಿ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
5) ನಿತೀಶ್ ಕುಮಾರ್ ದ್ರೋಹದ ಹೊಸ ದಾಖಲೆಯನ್ನು ಮಾಡಿದ್ದಾರೆ ಮತ್ತು ಬಿಜೆಪಿ ಈಗ ದುರ್ಬಲವಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಇದಕ್ಕೂ ಮುನ್ನ, ನಿತೀಶ್ ಕುಮಾರ್ ಅವರು 2022 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ಎನ್ಡಿಎ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ಆರ್ಜೆಡಿ, ಕಾಂಗ್ರೆಸ್ ಮತ್ತು ಎಡ ಮೈತ್ರಿಕೂಟವನ್ನು ಸೇರಿ ಬಿಹಾರದ ಮಹಾಗಟಬಂಧನ್ನ ಮುಖ್ಯಮಂತ್ರಿಯಾಗಿದ್ದರು.
ಬಿಹಾರದಲ್ಲಿ ಮತ್ತು ರಾಷ್ಟ್ರ ರಾಜಕಾರಣದಲ್ಲಿ 2022 ಮತ್ತು 2024 ರ ನಡುವೆ ಹಲವು ವಿದ್ಯಮಾನಗಳು ನಡೆದವು. ನಿತೀಶ್ ಕುಮಾರ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ವಿರೋಧ ಪಕ್ಷಗಳ ಮೈತ್ರಿಯನ್ನು ರೂಪಿಸುವಲ್ಲಿ ಮುಂದಾಳತ್ವ ವಹಿಸಿದ್ದರು. ನಿತೀಶ್ ಕುಮಾರ್ ಅವರು 2023 ರ ಜೂನ್ನಲ್ಲಿ ವಿಪಕ್ಷ ಮೈತ್ರಿ ಇಂಡಿಯಾ ಬ್ಲಾಕ್ ಎಂಬ ಹೆಸರು ಪಡೆಯುವ ಮೊದಲೇ ವಿಪಕ್ಷ ಮೈತ್ರಿಯ ಮೊದಲ ಸಭೆಯನ್ನು ಪಾಟ್ನಾದಲ್ಲಿ ಆಯೋಜಿಸಿದ್ದರು.