ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬಹಿಷ್ಕಾರದ ವಿವಾದ ಬಿಜೆಪಿಯ ಪಿತೂರಿ; ಮಲ್ಲಿಕಾರ್ಜುನ ಖರ್ಗೆ
Jan 12, 2024 09:13 PM IST
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನಂಬಿಕೆ ಇರುವವರು ಇಂದು ರಾಮಮಂದಿರಕ್ಕೆ ಹೋಗಬಹುದು. ಕಾಂಗ್ರೆಸ್ ಬಹಿಷ್ಕಾರದ ವಿವಾದ ಬಿಜೆಪಿಯ ಪಿತೂರಿ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್ ನಾಯಕರು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ನಾಯಕರು ಕೈ ಮುಖಂಡರ ವಿರುದ್ಧ ಮುಗಿಬಿದ್ದಿದ್ದು, ಕಾಂಗ್ರೆಸ್ ಹಿಂದೂ ವಿರೋಧಿಗಳೆಂದು ಅಬ್ಬರಿಸುವ ಮೂಲಕ ರಾಜಕೀಯ ಲೆಕ್ಕಾಚಾರಗಳನ್ನು ಆರಂಭಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಜನವರಿ 22 ರಂದು ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸುವ ವಿವಾದವು ಬಿಜೆಪಿಯ ಪಿತೂರಿಯೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ. ನಂಬಿಕೆ ಇರುವವರು ರಾಮನ ದೇವಾಲಯಕ್ಕೆ ಇಂದೇ ಹೋಗುತ್ತಾರೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮ್ಮದಲ್ಲ. ಆದರೆ ಬಿಜೆಪಿ, ಆರ್ಎಸ್ಎಸ್ ಉದ್ದೇಶಿತ ಕಾರ್ಯಕ್ರಮವನ್ನು ತಿರಸ್ಕಾರ ಮಾಡುವುದು ಪಕ್ಷದ ಉದ್ದೇಶವಾಗಿದೆ. ಈಗಾಗಲೇ ತನ್ನ ನಿಲುವನ್ನು ಪಕ್ಷ ವಿವರಿಸಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಇದೆಲ್ಲವನ್ನ ಮಾಡುತ್ತಿದೆ ಎಂದಿದ್ದಾರೆ.
ನಾಲ್ವರು ಶಂಕರಾಚಾರ್ಯರನ್ನು ಯಾಕೆ ಬಿಜೆಪಿಯವರು ಪ್ರಶ್ನಿಸುತ್ತಿಲ್ಲ
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಅಧೀರ್ ರಂಜನ್ ಚೌಧರಿ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಇದನ್ನ ಮುಂದಿಟ್ಟುಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಕರೆಯುತ್ತಿದ್ದಾರೆ. ಅಲ್ಲದೆ, ರಾಮನನ್ನು ವಿರೋಧಿಸುವುದು ಕಾಂಗ್ರೆಸ್ನ ಸಂಪ್ರದಾಯದ ಎಂದು ಹೇಳುವ ವಿಡಿಯೊವೊಂದನ್ನು ಬಿಜೆಪಿ ಇಂದು (ಶುಕ್ರವಾರ, ಜನವರಿ 12) ಹಂಚಿಕೊಂಡಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಕಾರ್ಯಕ್ರಮಕ್ಕೆ ಹಾಜರಾಗದ ನಾಲ್ವರು ಶಂಕರಾಚಾರ್ಯರನ್ನು ಯಾಕೆ ಬಿಜೆಪಿಯವರು ಪ್ರಶ್ನೆ ಮಾಡುತ್ತಿಲ್ಲ ಎಂದಿದೆ.
ನಾಲ್ವರು ಶಂಕರಾಚಾರ್ಯರು ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಆದರಲ್ಲಿ ಇಬ್ಬರು ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ. ಶೃಂಗೇರಿ ಮಠದ ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಜೀಮಿ, ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರು ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾನ ಉದ್ಘಾಟನೆ ಸನಾತನ ಧರ್ಮದ ಅನುಯಾಯಿಗಳಿಗೆ ಸಂತೋಷದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳುವುದೇನು?
ಪುರಿಯ ಜಗದ್ಗುರು ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಅವರು ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಮೊದಲೇ ಹೇಳಿದ್ದಾರೆ. ದೇಶದ ಪ್ರಧಾನಿಯವರು ಗರ್ಭಗುಡಿಗೆ ಹೋಗಿ ವಿಗ್ರಹವನ್ನು ಸ್ಪರ್ಶಿಸುತ್ತಾರೆ. ಪ್ರಾಣ ಪ್ರತಿಷ್ಠಾನ ಸಮಾರಂಭವನ್ನು ಮಾಡುತ್ತಾರೆ. ಇದಕ್ಕೆ ರಾಜಕೀಯ ರಂಗು ನೀಡಲಾಗಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠೆ ಆಗಬೇಕಾದರೆ ಅದು ಪ್ರಕಾರವಾಗಿರಬೇಕು. ಧರ್ಮಗ್ರಂಥದ ಮಾರ್ಗಸೂಚಿಗಳ ಪ್ರಕಾರವೇ ನಡೆಯಬೇಕು. ಅರ್ಧ ಸತ್ಯ ಮತ್ತು ಅರ್ಧ ಸುಳ್ಳುಗಳನ್ನು ಬೆರೆಸಬಾರದು. ಎಲ್ಲವೂ ಧರ್ಮಗ್ರಂಥದ ಜ್ಞಾನದೊಂದಿಗೆ ಹೊಂದಾಣಿಕೆಯಾಗಬೇಕು. ಹೀಗಾಗಿ ನಾನು ಕಾರ್ಯಕ್ರಮಕ್ಕೆ ವಿರೋಧವೂ ಇಲ್ಲ, ಹಾರಾಜುವುದೂ ಇಲ್ಲ, ಇದು ನನ್ನ ನಿಲುವು ಎಂದು ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ರಾಮಮಂದಿರ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.