ತೆಲಂಗಾಣ ಮುಖ್ಯಮಂತ್ರಿಯಾಗಿ ನಾಳೆ ರೇವಂತ್ ರೆಡ್ಡಿ ಪದಗ್ರಹಣ; ಸಾಮರ್ಥ್ಯ ಪರೀಕ್ಷೆಯಲ್ಲಿ ಗೆಲ್ಲಬೇಕಾದ ಅನಿವಾರ್ಯ
Dec 06, 2023 04:06 PM IST
ತೆಲಂಗಾಣದ ನಿಯೋಜಿತ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.
ತೆಲಂಗಾಣದಲ್ಲಿನ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಸರ್ಕಾರವನ್ನು ಮುನ್ನಡೆಸುವ ಜವಾಬ್ದಾರಿ ರೆವಂತ್ ರೆಡ್ಡಿ ಅವರ ಮೇಲಿದ್ದು, ಅವರ ಸಾಮರ್ಥ್ಯಕ್ಕೆ ಅಗ್ನಿ ಪರೀಕ್ಷೆಯಾಗಿದೆ.
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ (Revanth Reddy) ಅವರು ನಾಳೆ (ಡಿಸೆಂಬರ್ 7, ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಾಯರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಮಿತ್ರ ಪಕ್ಷಗಳ ನಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ರೇವಂತ್ ರೆಡ್ಡಿ ಅವರು ತೆಲಂಗಾಣ ಸಿಎಂ ಆಗುವುದೇನೋ ಸರಿ. ಆದರೆ ಕಾಂಗ್ರೆಸ್ ಮುಖ್ಯಮಂತ್ರಿ ಅನ್ನೋದು ಅಲ್ಲಿ ಮುಳ್ಳಿನ ಕೀರಿಟ ಇದ್ದಂತೆ. ಏಕೆಂದರೆ ಎರಡು ರೀತಿಯ ಸಮಸ್ಯೆಗಳು ಅಲ್ಲಿವೆ. ಒಂದು ರಾಜ್ಯವಾಗಿ ದಶಕ ಕಳೆದರೂ ಆರ್ಥಿಕ ವ್ಯವಸ್ಥೆ ಇನ್ನೂ ಸರಿಯಾದ ಹಳಿಗೆ ಬಾರದಿರುವುದು. ಮತ್ತೊಂದು ಕೊಟ್ಟ ಭರವಸೆಗಳನ್ನು ಈಡೇರಿಸಬೇಕಾದ ಅನಿವಾರ್ಯತೆ. ಇವೆಲ್ಲದ್ದಕ್ಕಿಂತ ಮುಖ್ಯಮಂತ್ರಿ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಸವಾಲುಗಳು. ಇವುಗಳ ಜೊತೆಗೆ ಮತ್ತೊಂದಷ್ಟು ಸವಾಲುಗಳು, ಟಾಸ್ಕ್ಗಳು ಇದ್ದೇ ಇರುತ್ತವೆ.
ಲೋಕಸಭಾ ಚುನಾವಣೆ ಸಮೀಪದಲ್ಲಿರುವುದೇ ದೊಡ್ಡ ಸವಾಲು
ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಈ ಚುನಾವಣೆ ಕೂಡ ರೇವಂತ್ ರೆಡ್ಡಿ ಅವರ ನಾಯಕತ್ವಕ್ಕೆ ದೊಡ್ಡ ಸವಾಲಾಗಲಿದೆ. ಹೀಗಾಗಿ ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವುದು ಮೊದಲ ಆದ್ಯತೆಯಾಗಲಿದೆ. ಇಲ್ಲದಿದ್ದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೊಡೆತ ಗ್ಯಾರಂಟಿ ಅನ್ನೋದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ.
ಮೊದಲು ಮಾಡಬೇಕಾಗಿರುವ ಕೆಲಸಗಳೆಂದರೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ, ಪಿಂಚಣಿ ನೀಡುವುದು. ಸದ್ಯಕ್ಕಂತೂ ಇದು ಕೂಡ ಕಷ್ಟದ ಕೆಲಸವೇ ಆಗಿದೆ. ರೇವಂತ್ ರೆಡ್ಡಿ ಅವರು ಪ್ರತಿ ತಿಂಗಳು ಸಂಬಳ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ, ಅನುದಾನ ನೀಡುತ್ತಿಲ್ಲ ಎನ್ನುತ್ತಲೇ ಕೆಸಿಆರ್ ಸ್ವಲ್ಪ ಹೇಗೆ ನಿಭಾಯಿಸಿಕೊಂಡು ಬಂದಿದ್ದರು. ಬಿಜೆಪಿ ಮತ್ತು ಬಿಆರ್ಎಸ್ ದೂರ ದೂರ ಆಗಿದ್ದರೂ ಕಣ್ಣಿಗೆ ಕಾಣದಂತಹ ಮೈತ್ರಿಯಲ್ಲಿ ಕೇಂದ್ರ ಸರ್ಕಾರ ಅಷ್ಟೋ ಇಷ್ಟೋ ನೆರವು ನೀಡುತ್ತಾ ಬಂದಿದೆ. ಆದರೆ ಇದೀಗ ತೆಲಂಗಾಣದಲ್ಲಿ ಬಿಜೆಪಿಯ ಪ್ರಮುಖ ವೈರಿಯಾಗಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಕೇಂದ್ರ ಸರ್ಕಾರದ ಸಹಕಾರ ದೂರ ಮಾತು ಎನ್ನಬಹುದು.
ಕೇಂದ್ರ ಬಿಜೆಪಿ ಸರ್ಕಾರ ಸಹಕಾರ ನೀಡದಿದ್ದರೆ ಮುಂದೇನು?
ಹೊಸದಾಗಿ ಸಾಲವನ್ನು ಎತ್ತಬೇಕಾದರೂ ಕೇಂದ್ರದ ಅನುಮತಿ ಬೇಕು. ಅನುದಾನ ಬೇಕೆಂದರೂ ಕೇಂದ್ರದ ಸಹಕಾರ ಬೇಕು. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ಮೂರು ರಾಜ್ಯಗಳಲ್ಲಿ ಮಾತ್ರ ಕಮಲ ಅರಳಿದೆ ಅನ್ನೋ ಬೇಸರ ಬಿಜೆಪಿಗಿದೆ. ಹೀಗಾಗಿ ಸಹಕಾರ ನಿರೀಕ್ಷೆ ಮಾಡಿದರೆ ಹತಾಶೆ ಗ್ಯಾರಂಟಿ. ಇಂತಹ ಪರಿಸ್ಥಿತಿಯಲ್ಲಿ ಮೊದಲು ಕೆಸಿಆರ್ ಸರ್ಕಾರ ಜಾರಿ ತಂದಿರುವ ಕೆಲ ಯೋಜನೆಗಳಿಗೆ ಬ್ರೇಕ್ ಹಾಕಬೇಕಾಗುತ್ತದೆ, ಇದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು. ರೈತು ಬಂಧು, ದಲಿತ ಬಂಧು ಹಾಗೂ ಇತರೆ ಯಾವುದೇ ಯೋಜನೆಗಳಿರಬಹುದು. ಇವುಗಳಲ್ಲಿ ಯಾವುದೇ ಒಂದಕ್ಕೆ ಹಣ ನೀಡದಿದ್ದರೂ ಜನರಿಗೆ ಬೇಗ ಸರ್ಕಾರದ ಸ್ಥಿತಿ ಅರ್ಥವಾಗಿಬಿಡುತ್ತದೆ.
ಕೆ ಚಂದ್ರಶೇಖರ್ ರಾವ್ ಸರ್ಕಾರದ ಯೋಜನೆಗಳನ್ನು ಹಾಗೆ ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕಾಗುತ್ತದೆ. ಇದರಲ್ಲಿ ಮುಖ್ಯವಾಗಿ ಕರ್ನಾಟಕದಂತೆ ತೆಲಂಗಾಣ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಮಾಣ, ಪ್ರತಿ ಮನೆಗೆ 200 ಯೂನಿಟ್ ಒಳಗಿನ ವಿದ್ಯುತ್ ಉಚಿತ ನೀಡುವುದು. ಕರ್ನಾಟಕ ಆರ್ಥಿಕತೆಯಲ್ಲಿ ಬಲಿಷ್ಠವಾಗಿ ಹೇಗೋ ಸಿದ್ದರಾಮಯ್ಯ ಸರ್ಕಾರ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದೆ.
ಸ್ವಲ್ಪ ಕಡಿತ ಮಾಡಿದರೂ ಕೆಟ್ಟ ಸಂದೇಶ ರವಾನೆ
ಆದರೆ ಆರ್ಥಿಕ ಮೂಲಗಳೇ ಕಡಿಮೆ ಇರುವ ತೆಲಂಗಾಣದಲ್ಲಿ ಇಂತಹ ದೊಡ್ಡ ದೊಡ್ಡ ಉಚಿತ ಯೋಜನೆಗಳನ್ನು ಜಾರಿಗೆ ತರುವುದು ನಿಯೋಜಿತ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಅತಿ ದೊಡ್ಡ ಸವಾಲುಗಳು. ಈ ಯೋಜನೆಗಳಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿ ಚೆನ್ನಾಗಿಲ್ಲ ಅಂತೇಳಿ ಯೋಜನೆಗಳಲ್ಲಿ ಸ್ವಲ್ಪ ಕಡಿತ ಮಾಡಿದರೂ ಕೆಟ್ಟ ಸಂದೇಶ ರವಾನಿಯಾಗುತ್ತದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವ ಕಾರಣ ಯೋಜನೆಗಳಲ್ಲಿ ಬದಲಾವಣೆ ಮಾಡುವಂತಿಲ್ಲ. ಜನರಿಗೆ ಕಾಂಗ್ರೆಸ್ ಮೇಲೆ ಹೀಗಿರುವ ಹವಾವನ್ನೇ ಪಾರ್ಲಿಮೆಂಟ್ ಚುನಾವಣೆ ವರೆಗೆ ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.
ಲೋಕಸಭೆ ಚುನಾಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೆ ರೇವಂತ್ ರೆಡ್ಡಿ ಅರ್ಧ ಸವಾಲುಗಳನ್ನು ಗೆದ್ದಂತಾಗುತ್ತದೆ. ಕಡಿಮೆ ಸೀಟುಗಳು ಬಂದರೆ ಅಸಮಾಧಾನಗಳು ಶುರುವಾಗುತ್ತವೆ. ಮಲ್ಲು ಭಟ್ಟಿ ವಿಕ್ರಮಾರ್ಕ ಬಣಕ್ಕೆ ದೊಡ್ಡ ಅಸ್ತ್ರವನ್ನೇ ನೀಡಿದಂತಾಗುತ್ತದೆ. ಹೀಗಾಗಿ ರೇವಂತ್ ರೆಡ್ಡಿ ಅವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಯಾರಿಗೆ ಯಾವ ಸ್ಥಾನ ಸಿಗಲಿದೆ, ಸರ್ಕಾರವನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.